ADVERTISEMENT

ಮೊರಾರ್ಜಿ ದೇಸಾಯಿ ವಸತಿ ಶಾಲೆ ಅವ್ಯವಸ್ಥೆ: ಅಧಿಕಾರಿಗಳ ತರಾಟೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2025, 5:48 IST
Last Updated 12 ಸೆಪ್ಟೆಂಬರ್ 2025, 5:48 IST
   

ಬೈಂದೂರು: ಪ್ರತಿ ಬಾರಿಯೂ ಶೈಕ್ಷಣಿಕ ಫಲಿತಾಂಶದಲ್ಲಿ ಉಡುಪಿ ಜಿಲ್ಲೆಯು ಮೊದಲೆರಡು ಸ್ಥಾನದಲ್ಲಿ ಗುರುತಿಸಿಕೊಳ್ಳುತ್ತದೆ. ಉತ್ತಮ ಶಿಕ್ಷಣ, ಸೌಲಭ್ಯ ಸಿಗುವ ನಂಬಿಕೆಯಿಂದ ಹೊರ ಜಿಲ್ಲೆಯ ಮಕ್ಕಳು ಇಲ್ಲಿಗೆ ಬರುತ್ತಾರೆ ಆದರೆ ಇಲಾಖೆಯ ಅಧಿಕಾರಿಗಳ ಬೇಜವ್ದಾರಿಯಿಂದಾಗಿ ಕಲಿಯುವ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ. ವಿದ್ಯಾಸಂಸ್ಥೆಗಳ ಮೇಲಿನ ನಿರ್ಲಕ್ಷ್ಯವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು.

ತಾಲ್ಲೂಕಿನ ಹೇರಂಜಾಲು ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಗುರುವಾರ ಭೇಟಿ ನೀಡಿ ಸಮಸ್ಯೆಗಳ ಕುರಿತು ಪರಿಶೀಲನೆ ನಡೆಸಿ, ಪ್ರಾಂಶುಪಾಲರಿಂದ ಮಾಹಿತಿ ಪಡೆದು ಬಳಿಕ ಅವರು ಮಾತನಾಡಿದರು.

ಕಟ್ಟಡ ನಿರ್ಮಾಣದಲ್ಲಿನ ದೋಷಗಳಿಂದಾಗಿ ಮಕ್ಕಳು ಸಂಕಷ್ಟ ಅನುಭವಿಸುವಂತಾಗಿದ್ದು, ವಸತಿ ನಿಲಯ ಹಾಗೂ ತರಗತಿ ಕೋಣೆಗಳು ಅಪಾಯಕಾರಿ ಮಟ್ಟದಲ್ಲಿ ಇದ್ದರು ಕೂಡ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದಕ್ಕೆ ಅಧಿಕಾರಿಗಳನ್ನು ಶಾಸಕರು ತರಾಟೆಗೆ ತಗೆದುಕೊಂಡರು.

ADVERTISEMENT

ಕಟ್ಟಡ ನಿರ್ಮಿಸಿದ ಎರಡೇ ವರ್ಷಗಳಲ್ಲಿ ನಾಲ್ಕು ಕಟ್ಟಡಗಳು ಮಳೆ ಬರುವಾಗ ಸೋರುತ್ತಿವೆ. ಹೊರಗಿನ ನೀರು ಕಟ್ಟಡದ ಒಳಗೆ ಬರುತ್ತಿದೆ. ಮೆಟ್ಟಿಲುಗಳಲ್ಲಿ ಮಳೆ ನೀರು ಹರಿಯುವುದಿಂದ ವಿದ್ಯಾರ್ಥಿಗಳು ಜಾರಿ ಬಿದ್ದು ಗಾಯಗೊಂಡಿದ್ದಾರೆ.  ವಿದ್ಯುತ್ ಸ್ವಿಚ್‌ಗಳು ಶಾಕ್ ಹೊಡೆಯುತ್ತಿವೆ. ಗೋಡೆಗಳು ಬಿರುಕು ಬಿಟ್ಟು ಅದರಲ್ಲಿ ಮಳೆ ನೀರು ಬರುತ್ತಿದ್ದರು ಕೂಡ ಇಲಾಖೆಯು ಇತ್ತ ಗಮನ ನೀಡುತ್ತಿಲ್ಲ ಎಂದೂ ಆಕ್ರೋಶ ವ್ಯಕ್ತಪಡಿಸಿದರು.

ಶಾಲೆಯ ಕಟ್ಟಡದ ಅವ್ಯವಸ್ಥೆ ಕುರಿತು ಶಾಸಕರು ಜಿಲ್ಲಾಧಿಕಾರಿಗೆ ದೂರವಾಣಿ ಮೂಲಕ ಮಾತನಾಡಿ, ಶಾಲೆಯ ಕಟ್ಟಡಗಳು ಅಪಾಯಕಾರಿಯಾಗಿವೆ. ಹಲವು ಭಾರೀ ಮನವಿ ನೀಡಿದರೂ ಸಮಸ್ಯೆ ಬಗೆಹರಿಸಿಲ್ಲ. ಇದೀಗ ನಮ್ಮ ಗಮನಕ್ಕೆ ಬಂದಿದ್ದು ಕಟ್ಟಡಗಳ ಅವವಸ್ಥೆಗೆ ಕಾರಣರಾದವರ ಮಾಹಿತಿ ನೀಡಬೇಕು ಹಾಗೂ ತುರ್ತು ವ್ಯವಸ್ಥೆ  ಕಲ್ಪಿಸಬೇಕು ಎಂದರು.

ಅದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಸ್ವತಃ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ತಿಳಿಸಿದರು.

ಶಾಲೆಯ ಪ್ರಾಂಶುಪಾಲೆ ಕಮಲ ಕೆ.ವಿ., ಸಹಾಯಕ ಎಂಜಿನಿಯರ್ ಚಂದ್ರಮೋಹನ, ಅಕ್ಷಯ, ಪ್ರಮುಖರಾದ ಸುರೇಶ ಬಟವಾಡಿ, ರಾಜು ದೇವಾಡಿಗ, ಸುಕೇಶ ಶೆಟ್ಟಿ, ಗಣೇಶ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.

ಪ್ರತಿಭಟನೆ ಎಚ್ಚರಿಕೆ  : ಶಾಸಕ ಗುರುರಾಜ್ ಗಂಟಿಹೊಳೆ ಅವರು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ಮಕ್ಕಳಿಗೆ ಬಿಸಿ ನೀರಿನ ವ್ಯವಸ್ಥೆ ಸರಿಪಡಿಸಬೇಕು ವಿದ್ಯುತ್ ಉಪಕರಣಗಳನ್ನು ತುರ್ತು ದುರಸ್ತಿಗೊಳಿಸಬೇಕು ಎಂದು ಸೂಚಿಸಿದರು. ಸೋಲಾರ್ ವ್ಯವಸ್ಥೆ ಸರಿಪಡಿಸುವುದು ಶಾಲೆಗಳ ತುರ್ತು ಬೇಡಿಕೆ ಆಗಿದ್ದು ಅದಕ್ಕೆ ಶಾಶ್ವತ ಕ್ರಮಗಳೂ ಆಗಬೇಕು. ಕಟ್ಟಡಗಳ ಕಳಪೆ ಕಾಮಗಾರಿಗೆ ಹೊಣೆಗಾರರು ಯಾರು ಎನ್ನುವುದನ್ನು ತಿಳಿಸಬೇಕು ತಪಿಸ್ಥರ ಮೇಲೆ ಕ್ರಮಕೈಗೊಳ್ಳಬೇಕು. ಒಂದು ವಾರದ ಗಡುವಿನೊಳಗೆ ಕ್ರಮಕೈಗೊಳ್ಳದಿದ್ದಲ್ಲಿ ಶಾಲೆಯ ಎದುರು ಸ್ಥಳೀಯರ ಹಾಗೂ ಪೋಷಕರೊಂದಿಗೆ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.