ಉಡುಪಿ: ರಾಮಮಂದಿರ ಉದ್ಘಾಟನೆಯ ಸಂದರ್ಭದಲ್ಲಿ ಮತ್ತೊಂದು ಗೋದ್ರಾ ದುರಂತ ನಡೆಯಬಹುದು ಎಂಬ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿಕೆಯ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಒತ್ತಾಯಿಸಿದರು.
ಅನುಭವಿ ರಾಜಕಾರಣಿ ಹರಿಪ್ರಸಾದ್ ಮಾತಿನಂತೆ ಗೋದ್ರಾ ದುರಂತ ಮರುಕಳಿಸಿದರೆ ಶ್ರೀರಾಮ ಮಂದಿರ ನಿರ್ಮಾಣವನ್ನು ಹಿಂದಿನಿಂದಲೂ ವಿರೋಧಿಸುತ್ತಾ ಬಂದಿರುವ ಕಾಂಗ್ರೆಸ್ ನೇರ ಕಾರಣವಾಗಲಿದೆ ಎಂದು ಕೋಟ ಹೇಳಿದರು.
ರಾಮಮಂದಿರ ನಿರ್ಮಾಣಕ್ಕೆ ಸರ್ಕಾರದ ಹಣ ಬಳಕೆಯಾಗಿಲ್ಲ, ನೇರ ಹಸ್ತಕ್ಷೇಪವೂ ಇಲ್ಲ. ಭಕ್ತರ ದೇಣಿಗೆಯಿಂದ ತಲೆ ಎತ್ತಿರುವ ರಾಮಮಂದಿರ ಸಮಸ್ತ ಹಿಂದೂಗಳ ಮಂದಿರವಾಗಿದೆ. ಕೆಲವರು ರಾಜಕೀಯ ಕಾರಣಕ್ಕೆ ಬಿಜೆಪಿ ರಾಮಮಮಂದಿರ ಎಂದು ಟೀಕಿಸುತ್ತಿದ್ದಾರೆ ಎಂದರು.
ಚೆಕ್ಬೌನ್ಸ್ ಪ್ರಕರಣದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ನ್ಯಾಯಾಲಯ ಶಿಕ್ಷೆ ವಿಧಿಸುವುದಾಗಿ ಹೇಳಿರುವ ವಿಚಾರವನ್ನು ಪ್ರಸ್ತಾಪಿಸಿದ ಬಿಜೆಪಿ ನಾಯಕರ ಮೇಲೆ ಮಧು ಬಂಗಾರಪ್ಪ ಸೌಜನ್ಯದ ಎಲ್ಲೆ ಮೀರಿ ವೈಯಕ್ತಿಕ ಟೀಕೆಗಿಳಿದಿರುವುದು ಖಂಡನೀಯ.
ಸಾರ್ವಜನಿಕ ಜೀವನದಲ್ಲಿರುವವರ ವೈಯಕ್ತಿಕ ವಿಚಾರಗಳು ಸಾರ್ವಜನಿಕವಾಗಿ ಚರ್ಚೆಗೆ ಬರುವುದು ಸಹಜ. ಮಕ್ಕಳಿಗೆ ನೈತಿಕ ಶಿಕ್ಷಣ ಹೇಳಿಕೊಡುವ ಶಿಕ್ಷಣ ಇಲಾಖೆಯ ಮುಖ್ಯಸ್ಥರು ನೈತಿಕತೆ ಪ್ರದರ್ಶಿಸದಿರುವುದು ವಿಪರ್ಯಾಸ ಎಂದು ಕೋಟ ಟೀಕಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.