ಉಡುಪಿ: ಕೊಡಗಿನ ಯುವತಿಯೊಬ್ಬಳು ಈಚೆಗೆ ಸಮುದ್ರ ಸೆಳೆತಕ್ಕೆ ಸಿಲುಕಿ ಮೃತಪಟ್ಟ ಬೆನ್ನಲ್ಲೇ ಪ್ರವಾಸಿಗರು ಮಲ್ಪೆ ಬೀಚ್ಗೆ ಇಳಿಯಲು ನಿರ್ಬಂಧ ಹೇರಲಾಗಿದೆ.
ಬೀಚ್ನ ಸುಮಾರು 1 ಕಿ.ಮೀ ತೀರದಲ್ಲಿ 5 ರಿಂದ 6 ಅಡಿ ಎತ್ತರದ ನೆಟ್ ಹಾಕಲಾಗಿದ್ದು, ಪ್ರವಾಸಿಗರು ಸಮುದ್ರಕ್ಕಿಳಿಯದಂತೆ ಎಚ್ಚರಿಕೆಯ ಫಲಕಗಳನ್ನು ಹಾಕಲಾಗಿದೆ. ನಿಯಮ ಉಲ್ಲಂಘಿಸಿ ಸಮುದ್ರಕ್ಕಿಳಿದರೆ ₹ 500 ದಂಡ ವಿಧಿಸುವುದಾಗಿಯೂ ಎಚ್ಚರಿಕೆ ನೀಡಲಾಗಿದೆ.
ಮಳೆಗಾಲದಲ್ಲಿ ಸಮುದ್ರ ಪ್ರಕ್ಷುಬ್ಧಗೊಂಡಿರುವುದರಿಂದ ನೀರಿಗಿಳಿದರೆ ಅಪಾಯ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಪ್ರವಾಸಿಗರಿಗೆ ಕಡಲಿನ ಸೆಳೆತದ ಅರಿವು ಇಲ್ಲವಾದ್ದರಿಂದ, ಎಚ್ಚರಿಕೆ ಕಡೆಗಣಿಸಿ ನೀರಿಗಿಳಿಯುತ್ತಿದ್ದಾರೆ. ಪ್ರವಾಸಿಗರ ಹಿತದೃಷ್ಟಿಯಿಂದ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಬೀಚ್ ನಿರ್ವಹಣಾ ಸಮಿತಿಯ ಹಾಗೂ ಮಂತ್ರ ಟೂರಿಸಂ ಡೆವಲಪ್ಮೆಂಟ್ ಸಂಸ್ಥೆಯ ಸುದೇಶ್ ಶೆಟ್ಟಿ ತಿಳಿಸಿದ್ದಾರೆ.
ಪ್ರವಾಸಿಗರು ಸಮುದ್ರಕ್ಕಿಳಿಯದಂತೆ ಧ್ವನಿವರ್ಧಕಗಳ ಮೂಲಕ ಎಚ್ಚರಿಕೆ ನೀಡಲಾಗುತ್ತಿದೆ. ಲೈಫ್ ಗಾರ್ಡ್ ಸಿಬ್ಬಂದಿ ಕೂಡ ಮಾಹಿತಿ ನೀಡುತ್ತಿದ್ದಾರೆ. ಪ್ರವಾಸಿಗರು ನೆಟ್ನಿಂದ ಹೊರಗೆ ನಿಂತು ಸಮುದ್ರವನ್ನು ವೀಕ್ಷಿಸಬಹುದು. ಸಮುದ್ರಕ್ಕಿಳಿಯಬಾರದು ಎಂದು ಮನವಿ ಮಾಡಿದ್ದಾರೆ.
ಆಗಸ್ಟ್ ಕೊನೆ ಅಥವಾ ಸೆಪ್ಟೆಂಬರ್ನಲ್ಲಿ ಪರಿಸ್ಥಿತಿ ನೋಡಿಕೊಂಡು ಬೀಚ್ಗೆ ಇಳಿಯಲು ಅನುಮತಿ ನೀಡಲಾಗುವುದು. ಅಲ್ಲಿಯವರೆಗೂ ಪ್ರವಾಸಿಗರು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.