ಉಡುಪಿ: ವೈದ್ಯಕೀಯ ಕ್ಷೇತ್ರದ ಹೊಸ ಆವಿಷ್ಕಾರಗಳು ಕ್ರೀಡಾ ಕ್ಷೇತ್ರಕ್ಕೂ ಸಹಕಾರಿಯಾಗಿವೆ ಎಂದು ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅಭಿಪ್ರಾಯಪಟ್ಟರು.
ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಸುಧಾರಿತ ರೊಬೊಟಿಕ್ ಸರ್ಜರಿ ಸೌಲಭ್ಯವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಾಗ ಗಾಯಗಳಾಗುವುದು ಸಹಜ. ಅಂತಹ ಸಂದರ್ಭದಲ್ಲಿ ಅದರಿಂದ ಚೇತರಿಸಿಕೊಂಡು ಮತ್ತೆ ಸಾಧನೆ ಮಾಡುವಂತಾಗಲು ವೈದ್ಯರ ಪಾತ್ರ ಬಹುಮುಖ್ಯವಾದುದು ಎಂದು ಹೇಳಿದರು.
ರೊಬೊಟಿಕ್ ಸರ್ಜರಿ ಸೌಲಭ್ಯಗಳು ಬಂದಿರುವುದರಿಂದ ಕ್ರೀಡಾಪಟುಗಳಿಗೆ ಮತ್ತು ಸಾಮಾನ್ಯ ಜನರಿಗೂ ಹೆಚ್ಚಿನ ಪ್ರಯೋಜನವಾಗಲಿದೆ ಎಂದರು.
ರೊಬೊಟಿಕ್ ನೆರವಿನ ಶಸ್ತ್ರಚಿಕಿತ್ಸಾ ಆರೈಕೆಯು ವೈದ್ಯಕೀಯ ಕ್ಷೇತ್ರದಲ್ಲಿ ಬದಲಾವಣೆಗೆ ನಾಂದಿ ಹಾಡಿದೆ. ಇದರಿಂದ ಈ ಕ್ಷೇತ್ರಕ್ಕೆ ಅಭೂತಪೂರ್ವ ಪ್ರಯೋಜನಗಳು ಸಿಗಲಿವೆ ಎಂದು ಪ್ರತಿಪಾದಿಸಿದರು.
ಮೂಳೆ ಚಿಕಿತ್ಸೆಯಲ್ಲಿ ಕಂಪ್ಯೂಟರ್ ನೆರವಿನ ರೊಬೊಟಿಕ್ ತಂತ್ರಜ್ಞಾನವು ಹೆಚ್ಚು ಪರಿಣಾಮಕಾರಿಯಾಗಲಿದೆ. ಕ್ಯಾನ್ಸರ್ ಸಂಬಂಧಿತ ಶಸ್ತ್ರಚಿಕಿತ್ಸೆಗೂ ಈ ತಂತ್ರಜ್ಞಾನ ನೆರವಾಗಲಿದೆ ಎಂದರು.
ಪ್ರತಿಯೊಬ್ಬರೂ ದೇಹವನ್ನು ಸದೃಢವಾಗಿರಿಸಿಕೊಳ್ಳಲು ಪ್ರತಿದಿನ ವ್ಯಾಯಾಮ ಮಾಡಬೇಕು. ಇದರಿಂದ ಮಾಂಸಖಂಡಗಳು ಬಲಿಷ್ಠವಾಗುವುದರ ಜೊತೆಗೆ ಉತ್ತಮ ಆರೋಗ್ಯವು ನಮ್ಮದಾಗುತ್ತದೆ ಎಂದು ಹೇಳಿದರು.
ಮಾಹೆ ಸಹ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಅಧ್ಯಕ್ಷತೆ ವಹಿಸಿ ಮಾತನಾಡಿ, ರೊಬೊಟಿಕ್ ಸರ್ಜರಿ ಕಾರ್ಯಕ್ರಮ ಕೇವಲ ತಂತ್ರಜ್ಞಾನದ ಉನ್ನತೀಕರಣವಲ್ಲ. ಬದಲಾಗಿ ಪ್ರತಿಯೊಂದು ಸಮುದಾಯಕ್ಕೂ ವಿಶ್ವದರ್ಜೆಯ ಆರೋಗ್ಯ ಸೇವೆ ನೀಡುವಲ್ಲಿನ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ ಎಂದರು.
ಮಣಿಪಾಲ ಕ್ಲಸ್ಟರ್ನ ಸಿಒಒ ಡಾ. ಸುಧಾಕರ್ ಕಂಟಿಪುಡಿ ಮಾತನಾಡಿ, ರೊಬೊಟಿಕ್ ಸರ್ಜರಿ ಕಾರ್ಯಕ್ರಮವು ಮೂಳೆ ಚಿಕಿತ್ಸೆ ಮತ್ತು ಇತರ ಶಸ್ತ್ರಚಿಕಿತ್ಸೆಗಳಲ್ಲಿ ಹೆಚ್ಚು ಪ್ರಯೋಜನಕಾರಿಯಾಗಲಿದೆ ಎಂದು ಹೇಳಿದರು.
ಮಾಹೆ ಸಹ ಕುಲಪತಿ (ಆರೋಗ್ಯ ವಿಜ್ಞಾನ) ಡಾ. ಶರತ್ ಕೆ.ರಾವ್, ಮಣಿಪಾಲ ಆಸ್ಪತ್ರೆಗಳ ಮಂಗಳೂರಿನ ಪ್ರಾದೇಶಿಕ ಮುಖ್ಯ ಅಧಿಕಾರಿ ಸಗೀರ್ ಸಿದ್ದಿಕಿ ಉಪಸ್ಥಿತರಿದ್ದರು. ಸರ್ಜಿಕಲ್ ಆಂಕೊಲಜಿ ವಿಭಾಗದ ಮುಖ್ಯಸ್ಥ ಡಾ. ನವೀನ್ ಕುಮಾರ್ ಎ.ಎಸ್. ಮಾತನಾಡಿದರು. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.