ADVERTISEMENT

ಸ್ವಸ್ಥ ಸಮಾಜಕ್ಕೆ ನಾಗರಿಕರ ಸಹಭಾಗಿತ್ವ ಅಗತ್ಯ

ಮಾಧವಕೃಪ ಶಾಲೆಯಲ್ಲಿ ನಡೆದ ‘ತೆರೆದ ಮನೆ’ ಕಾರ್ಯಕ್ರಮದಲ್ಲಿ ಎಸ್‌ಪಿ ವಿಷ್ಣುವರ್ಧನ್‌

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2020, 15:28 IST
Last Updated 14 ಫೆಬ್ರುವರಿ 2020, 15:28 IST
ಮಣಿಪಾಲದ ಮಾಧವಕೃಪ ಶಾಲೆಯಲ್ಲಿ ಶುಕ್ರವಾರ ‘ತೆರೆದಮನೆ‌’ ಕಾರ್ಯಕ್ರಮದಲ್ಲಿ ಎಸ್‌ಪಿ ವಿಷ್ಣುವರ್ಧನ ಮಾತನಾಡಿದರು.
ಮಣಿಪಾಲದ ಮಾಧವಕೃಪ ಶಾಲೆಯಲ್ಲಿ ಶುಕ್ರವಾರ ‘ತೆರೆದಮನೆ‌’ ಕಾರ್ಯಕ್ರಮದಲ್ಲಿ ಎಸ್‌ಪಿ ವಿಷ್ಣುವರ್ಧನ ಮಾತನಾಡಿದರು.   

ಉಡುಪಿ: ಮಾದಕ ವಸ್ತುಗಳ ಸೇವನೆಗೆ ಕಡಿವಾಣ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಮಾಜದ ಸ್ವಾಸ್ಥ್ಯ ಕೆಡಿಸುವ ಸಂದೇಶಗಳನ್ನು ತಡೆಯುವುದು ಪೊಲೀಸ್ ಇಲಾಖೆಗೆ ದೊಡ್ಡ ಸವಾಲಾಗಿದೆ. ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದು ಎಸ್‌ಪಿ ವಿಷ್ಣುವರ್ಧನ ಅಭಿಪ್ರಾಯಪಟ್ಟರು.

ಮಣಿಪಾಲದ ಮಾಧವಕೃಪ ಶಾಲೆಯಲ್ಲಿ ಶುಕ್ರವಾರ ‘ತೆರೆದಮನೆ‌’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೊಬೈಲ್‌ ಬಳಸುವಾಗ ಪ್ರತಿಯೊಬ್ಬರೂ ಎಚ್ಚರವಾಗಿರಬೇಕು. ಗಲಭೆಗೆ ಕಾರಣವಾಗುವ, ಭಯ ಹುಟ್ಟಿಸುವ ಸಂದೇಶಗಳನ್ನು ಫಾರ್ವಡ್‌ ಮಾಡಬಾರದು. ಸಮಾಜಕ್ಕೆ ಅನುಕೂಲವಾಗುವಂತಹ ಸಂದೇಶಗಳನ್ನು ಮಾತ್ರ ಕಳಿಸಬೇಕು ಎಂದು ಕಿವಿಮಾತು ಹೇಳಿದರು.

ಅಪ್ರಾಪ್ತರು ಬೈಕ್‌ ಹಾಗೂ ಕಾರುಗಳನ್ನು ವೇಗವಾಗಿ ಓಡಿಸಿ ಅಪಘಾತಕ್ಕೆ ತುತ್ತಾಗುತ್ತಿರುವುದು ಹೆಚ್ಚಾಗುತ್ತಿದೆ. ಮೋಜಿಗಾಗಿ ಅಮೂಲ್ಯವಾದ ಜೀವ ಕಳೆದುಕೊಳ್ಳಬೇಡಿ. ಚಾಲನಾ ಪರವಾನಗಿ ಸಿಕ್ಕ ಬಳಿಕ ವಾಹನ ಚಲಾಯಿಸಬೇಕು ಎಂದು ಎಂದು ಸಲಹೆ ನೀಡಿದರು.

ADVERTISEMENT

ಪೋಷಕರು, ಸ್ನೇಹಿತರು ಸಂಚಾರ ನಿಯಮಗಳನ್ನು ಉಲ್ಲಂಘಿಸಿದಾಗ ತಿಳಿಹೇಳಿ. ಮಕ್ಕಳ ಮಾತು ಪೋಷಕರ ಮನಸ್ಸಿಗೆ ಹೆಚ್ಚು ಮುಟ್ಟುತ್ತದೆ. ಪ್ರತಿಯೊಬ್ಬರೂ ಸಂಚಾರ ನಿಯಮಗಳನ್ನು ಪಾಲಿಸಿದರೆ ಅಪಘಾತಗಳ ಪ್ರಮಾಣ ಇಳಿಮುಖವಾಗುತ್ತದೆ. ದಂಡ ಕಟ್ಟುವುದರಿಂದ ಪಾರಾಗಬಹುದು ಎಂದರು.

ಕಾಲೇಜು ವಿದ್ಯಾರ್ಥಿಗಳು ಮಾದಕ ವಸ್ತುಗಳ ಸೇವನೆಗೆ ಬಲಿಯಾಗುತ್ತಿರುವುದು ಆತಂಕಕಾರಿ. ಡ್ರಗ್ಸ್‌ಗಳಿಂದ ದೂರವಿದ್ದು, ಉತ್ತಮ ಭವಿಷ್ಯ ರೂಪಿಸಿಕೊಳ್ಳಿ. ಡ್ರಗ್ಸ್‌ ಮಾರಾಟ, ಸೇವನೆ, ಸಮಾಜ ಘಾತುಕ ಕೃತ್ಯಗಳು ಕಂಡರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ ಎಂದರು.

ಪೊಲೀಸರ ಬಗ್ಗೆ ಸಮಾಜದಲ್ಲಿರುವ ಭಯದ ಕಲ್ಪನೆ ದೂರವಾಗಿಲ್ಲ. ಈ ನಿಟ್ಟಿನಲ್ಲಿ ಪೊಲೀಸ್ ವ್ಯವಸ್ಥೆಯನ್ನು ಜನಸ್ನೇಹಿಯಾಗಿಸಲು ಬೀಟ್‌ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಬೀಟ್ ಪೊಲೀಸರು ಪ್ರತಿ ಮನೆಮನೆಗೂ ಬಂದು ನಿಮ್ಮ ಸಮಸ್ಯೆಗಳನ್ನು ಆಲಿಸಿ, ಸೂಕ್ತ ಭದ್ರತೆ ಒದಗಿಸಲಿದ್ದಾರೆ ಎಂದರು.

ಮಕ್ಕಳು ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಬೇಕಾದರೆ ಕಾನೂನುಗಳ ಪಾಲನೆ ಬಹಳ ಮುಖ್ಯ. ಸಂಚಾರ ನಿಯಮಗಳ ಅರಿವು ಅಗತ್ಯ ಎಂದು ಎಸ್‌ಪಿ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಮಾಧವ ಕೃಪ ಶಾಲೆಯ ಪ್ರಾಂಶುಪಾಲ ಜೆಸ್ಸಿ ಆ್ಯಂಡ್ರೂಸ್‌, ಉಪ ಪ್ರಾಂಶುಪಾಲರಾದ ಜ್ಯೋತಿ ಸಂತೋಷ್‌, ಶಕೀಲಾಕ್ಷಿ ಕೃಷ್ಣ,,ಮುಖ್ಯೋಪಾಧ್ಯಯಿನಿ ಆಶಾ ನಾಯಕ್‌, ಪಿ.ಜಿ.ಪಂಡಿತ್‌, ರಾಜೇಶ್ ಡಿ.ಶೆಣೈ,ಮಣಿಪಾಲ ಠಾಣೆ ಇನ್‌ಸ್ಪೆಕ್ಟರ್ ಮಂಜುನಾಥ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.