ADVERTISEMENT

ಉಡುಪಿ: ತಲವಾರಿನಿಂದ ಕೇಕ್ ಕತ್ತರಿಸಿದ ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 4 ಜೂನ್ 2022, 11:16 IST
Last Updated 4 ಜೂನ್ 2022, 11:16 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಉಡುಪಿ: ಪಡುಬಿದ್ರಿಯ ಪಾದೆಬೆಟ್ಟುವಿನಲ್ಲಿ ಮಾರಕಾಸ್ತ್ರಗಳಿಂದ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡ ಆರೋಪದ ಮೇಲೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಪಡುಬಿದ್ರಿಯ ಜಿತೇಂದ್ರ ಶೆಟ್ಟಿ, ಗಣೇಶ್ ಪೂಜಾರಿ ಹಾಗೂ ಶರತ್ ಶೆ್ಟ್ಟಿ ಬಂಧಿತರು. ಸೂರಜ್ ಸಾಲ್ಯಾನ್, ತನುಜ್ ಎಂ.ಕರ್ಕೇರ, ಅನ್ವೀಶ್, ನಿರಂಜನ್ ಶೆಟ್ಟಿಗಾರ್, ಶರತ್ ಶೆಟ್ಟಿ ತಲೆಮರೆಸಿಕೊಂಡಿದ್ದು ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಹಲವು ಅಪರಾಧ ಪ್ರಕರಣದಲ್ಲಿ ಭಾಗಿಯಾಗಿರುವ ಹಾಗೂ ರೌಡಿ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿರುವ ಆರೋಪಿಗಳು ಈಚೆಗೆ ನಿರಂಜನ್ ಶೆಟ್ಟಿಗಾರ್ ಎಂಬಾತನ ಹುಟ್ಟುಹಬ್ಬ ಆಚರಿಸಲು ಒಂದೆಡೆ ಸೇರಿದ್ದರು. ನಿರಂಜನ್ ಶೆಟ್ಟಿಗಾರ್ ತಲವಾರ್‌ನಿಂದ ಕೇಕ್ ಕತ್ತರಿಸಿದ ವಿಡಿಯೋ ಹಾಗೂ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿತ್ತು. ಆರೋಪಿಗಳ ವರ್ತನೆ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು.

ಸಾರ್ವಜನಿಕರಿಗೆ ಭಯ ಹುಟ್ಟಿಸುವ ಉದ್ದೇಶದಿಂದ ಆಯುಧಗಳನ್ನು ಪ್ರದರ್ಶನ ಮಾಡಿರುವ ಆರೋಪದ ಮೇಲೆ ಆರೋಪಿಗಳ ವಿರುದ್ಧ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹುಟ್ಟುಹಬ್ಬ ಸಂಭ್ರಮಾಚರಣೆಗೆ ಬಳಸಲಾಗಿದ್ದ ಮಚ್ಚು, ತಲವಾರ್ ಹಾಗೂ ಕೊಡಲಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.