ಉಡುಪಿ: ಜಿಲ್ಲಾ ವ್ಯಾಪ್ತಿಯಲ್ಲಿ ಕೆಎಸ್ಆರ್ಟಿಸಿ ಹಾಗೂ ಖಾಸಗಿ ಬಸ್ಗಳ ಸಂಚಾರ ಬುಧವಾರದಿಂದ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.
ಉಡುಪಿಯಿಂದ ಕುಂದಾಪುರ, ಹೆಬ್ರಿ, ಕಾರ್ಕಳ, ಕಾಪು ಮಲ್ಲಾರು, ಬೈಂದೂರು, ಮಣಿಪಾಲ, ಬಾರ್ಕೂರು ಸಿದ್ದಾಪುರ, ಅಲೆವೂರು ಮಲ್ಪೆ, ಹೂಡೆ ಹಾಗೂ ಬ್ರಹ್ಮಾವರ ಭಾಗಕ್ಕೆ 20 ಕೆಎಸ್ಆರ್ಟಿಸಿ ಬಸ್ಗಳು ಹಾಗೂ 16 ಖಾಸಗಿ ಬಸ್ಗಳು ಸಂಚರಿಸಲಿವೆ. ಬೆಳಿಗ್ಗೆ 7ರಿಂದ ರಾತ್ರಿ 7ರವರೆಗೆ ಓಡಾಡಲು ಅನುಮತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಬಸ್ನ ಆಸನ ಸಾಮರ್ಥ್ಯದ ಅರ್ಧದಷ್ಟು ಪ್ರಯಾಣಿಕರನ್ನು ಮಾತ್ರ ಹತ್ತಿಸಿಕೊಳ್ಳಬೇಕು. ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ನಿಗಧಿಪಡಿಸಿದಕ್ಕಿಂತ ಹೆಚ್ಚಿನ ದರವನ್ನು ಪಡೆಯುವಂತಿಲ್ಲ. ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಅಂತರ ಕಾಯ್ದುಕೊಳ್ಳಬೇಕು.
ಚಾಲಕ ನಿರ್ವಾಹಕರು ಮಾಸ್ಕ್, ಗ್ಲೌಸ್, ಸ್ಯಾನಿಟೈಸರ್ ಬಳಸಬೇಕು. ಸಂಚಾರದ ಅವಧಿ ಮುಗಿದ ಕೂಡಲೇ ಸ್ಯಾನಿಟೈಸರ್ನಿಂದ ಬಸ್ಗಳನ್ನು ಶುಚಿಗೊಳಿಸಬೇಕು.ಜಿಲ್ಲಾ ವ್ಯಾಪ್ತಿಯಲ್ಲಿ ಓಡಾಡಲು ಮಾತ್ರ ಅನುಮತಿ ಇದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
‘ಚೆಕ್ಪೋಸ್ಟ್ ತಪ್ಪಿಸಿ ಬಂದರೆ ಮಾಹಿತಿ ಕೊಡಿ’
ಚೆಕ್ಪೋಸ್ಟ್ಗಳನ್ನು ತಪ್ಪಿಸಿ ಹೊರ ರಾಜ್ಯಗಳಿಂದ ಬಂದವರು ಕಂಡರೆ ಸಾರ್ವಜನಿಕರು ತಕ್ಷಣ ಸ್ಥಳೀಯ ಗ್ರಾಮ ಪಂಚಾಯಿತಿ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ನಗರಾಡಳಿತಕ್ಕೆ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿಮನವಿ ಮಾಡಿದರು.
ಹೊರ ರಾಜ್ಯಗಳಿಂದ ಬಂದವರು ಕಡ್ಡಾಯವಾಗಿ ಸರ್ಕಾರಿ ಕ್ವಾರಂಟೈನ್ನಲ್ಲಿರಬೇಕು. ಜಿಲ್ಲೆಯ ಚೆಕ್ಪೋಸ್ಟ್ಗಳನ್ನು ತಪ್ಪಿಸಿ ಹೊರ ರಾಜ್ಯಗಳಿಂದ ಬಂದವರಿದ್ದರೆ ತಪ್ಪದೆ ತಿಳಿಸಬೇಕು ಎಂದು ತಿಳಿಸಿದ್ದಾರೆ.
ಗ್ರಾಫಿಕ್ಸ್
ಎಲ್ಲಿಂದ–ಎಲ್ಲಿಗೆ–ಎಷ್ಟು ಬಸ್
ಉಡುಪಿ–ಕುಂದಾಪುರ–4
ಉಡುಪಿ–ಹೆಬ್ರಿ–1
ಉಡುಪಿ–ಕಾರ್ಕಳ–3
ಉಡುಪಿ–ಕಾಪು ಮಲ್ಲಾರು–1
ಕುಂದಾಪುರ–ಬೈಂದೂರು–2
ಉಡುಪಿ–ಮಣಿಪಾಲ–2
ಉಡುಪಿ–ಬಾರ್ಕೂರು, ಸಿದ್ದಾಪುರ–2
ಉಡುಪಿ–ಅಲೆವೂರು–1
ಉಡುಪಿ–ಮಲ್ಪೆ–1
ಉಡುಪಿ–ಹೂಡೆ–1
ಉಡುಪಿ–ಬ್ರಹ್ಮಾವರ–2
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.