ADVERTISEMENT

ಉಡುಪಿ | ಜಾತಿನಿಂದನೆ ಮೊಕದ್ದಮೆ ವಾಪಸ್ ಪಡೆಯಿರಿ: ರಘುಪತಿ ಭಟ್

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2025, 10:50 IST
Last Updated 22 ಮಾರ್ಚ್ 2025, 10:50 IST
   

ಉಡುಪಿ: ಮಲ್ಪೆಯಲ್ಲಿ ಮಹಿಳೆಯನ್ನು ಮರಕ್ಕೆ ಕಟ್ಟಿ ಥಳಿಸಿದ ಪ್ರಕರಣ ದುರದೃಷ್ಟಕರ. ಆದರೆ ಈ ಪ್ರಕರಣದಲ್ಲಿ ಜಾತಿ ನಿಂದನೆಯೇ ಆಗಿಲ್ಲವಾದರೂ ಮೀನುಗಾರರ ವಿರುದ್ಧ ಜಾತಿ ನಿಂದನೆ ಮೊಕದ್ದಮೆ ದಾಖಲಿಸಿರುವುದು ಸರಿಯಲ್ಲ ಎಂದು ಮಾಜಿ ಶಾಸಕ ರಘುಪತಿ ಭಟ್ ಹೇಳಿದರು.

ಮಲ್ಪೆ ಬಂದರಿನ ಮೀನುಗಾರರ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಆರೋಪಿಸಿ ಹಾಗೂ ಬಂಧಿತ ಮೀನುಗಾರರ ಬಿಡುಗಡೆಗೆ ಆಗ್ರಹಿಸಿ ಮಲ್ಪೆ ಮೀನುಗಾರರ ಸಂಘ ಹಾಗೂ ಮಲ್ಪೆಯ ಸಮಸ್ತ ಮೀನುಗಾರರ ವತಿಯಿಂದ ಬಂದರಿನೊಳಗೆ ಶನಿವಾರ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

ಸಂಬಂಧಪಟ್ಟವರು ಕೂಡಲೇ ಬಂಧಿತರ ವಿರುದ್ಧ ದಾಖಲಾಗಿರುವ ಜಾತಿ‌ ನಿಂದನೆ ಮೊಕದ್ದಮೆಯನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.

ADVERTISEMENT

ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ಜಾತಿ ನಿಂದನೆ ಪ್ರಕರಣವನ್ನು ವಿನಾಕಾರಣ ದಾಖಲಿಸಿದರೆ. ಸಂಬಂಧಪಟ್ಟ ಅಧಿಕಾರಿಗಳು ಅದಕ್ಕೆ ಬೆಲೆ ತೆರಬೇಕಾದೀತು. ಕೂಡಲೇ ಮೀನುಗಾರರ ವಿರುದ್ಧ ದಾಖಲಾದ ಜಾತಿನಿಂದನೆ ಮೊಕದ್ದಮೆ ವಾಪಸ್ ಪಡೆಯಿರಿ ಎಂದು ಹೇಳಿದರು.

ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಡ್ರಗ್ಸ್, ಅನಾಚಾರ ನಿಯಂತ್ರಿಸಲು ಆಗುತ್ತಿಲ್ಲ. ಬಡವರನ್ನು ಜೈಲಿಗೆ ತಳ್ಳುವ ಎಸ್.ಪಿ. ಉಡುಪಿಗೆ ಬೇಡ. ಅವರನ್ನು ವರ್ಗಾವಣೆ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು‌.

ಬಳಿಕ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಐದು ವರ್ಷಗಳ ಹಿಂದೆ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಯಿಂದ ಮೀನುಗಾರರಿಗೆ ತೊಂದರೆಯಾಗುತ್ತದೆ ಎಂದು ನಾವು ಪ್ರತಿಭಟನೆ ನಡೆಸಿದಾಗ ನಮ್ಮ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು. ಆಗ ಶಾಸಕರಾಗಿದ್ದ ಪ್ರಮೋದ್ ಮಧ್ವರಾಜ್ ಅವರು ಪೊಲೀಸರ ವಿರುದ್ಧ ಈಗಿನ ಆಕ್ರೋಶ ತೋರಿಸಿಲ್ಲ ಎಂದರು.

ಆಗ ಸಭೆಯಲ್ಲಿದ್ದ ಮೀನುಗಾರರು ವೇದಿಕೆಯತ್ತ ನುಗ್ಗಿ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅವರ ಭಾಷಣಕ್ಕೆ ತಡೆಯೊಡ್ಡಿದರು. ಅಲ್ಪ ಸಮಯದ ಬಳಿಕ ಪೊಲೀಸ್ ಭದ್ರತೆಯಲ್ಲಿ ಅವರನ್ನು ಸಭೆಯಿಂದ ಹೊರಗೆ ಕರೆದೊಯ್ಯಲಾಯಿತು.

ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಸುವರ್ಣ, ಮುಖಂಡರಾದ ಸಾಧು ಸಾಲ್ಯಾನ್, ಮೋಹನ್ ಕುಂದರ್, ಜಯ ಸಿ. ಕೋಟ್ಯಾನ್, ರವಿರಾಜ್ ಸುವರ್ಣ, ಬೇಬಿ ಸಾಲ್ಯಾನ್, ಗೀತಾ ಕರ್ಕೇರ, ಕಾಂಗ್ರೆಸ್ ಮುಖಂಡ ಪ್ರಸಾದ್‌ರಾಜ್ ಕಾಂಚನ್ ಉಪಸ್ಥಿತರಿದ್ದರು‌.

ಮಲ್ಪೆಯಲ್ಲಿ ವ್ಯಾಪಾರಸ್ಥರು ಅಂಗಡಿಗಳನ್ನು ಮುಚ್ಚಿ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದರು.

ಉಡುಪಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಮೇಶ್‌ ಕಾಂಚನ್‌ ಭಾಷಣ ಮಾಡುತ್ತಿದ್ದಾಗ ಮೀನುಗಾರರು ತಡೆಯೊಡ್ಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.