ವಿಟ್ಲ ಪಿಂಡಿ ಮಹೋತ್ಸವದ ವೇಳೆ ಉಡುಪಿಯ ಕೃಷ್ಣಮಠದ ರಥಬೀದಿಯಲ್ಲಿ ನೆರೆದಿದ್ದ ಭಕ್ತರತ್ತ ಪರ್ಯಾಯ ಪುತ್ತಿಗೆ ಮಠದ ಉಭಯ ಶ್ರೀಪಾದರು ಲಡ್ಡು, ಚಕ್ಕುಲಿ ಎಸೆದರು
–ಪ್ರಜಾವಾಣಿ ಚಿತ್ರ: ಉಮೇಶ್ ಮಾರ್ಪಳ್ಳಿ
ಉಡುಪಿ: ಸೌರ ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಉಡುಪಿಯ ಕೃಷ್ಣಮಠದಲ್ಲಿ ಸೋಮವಾರ ವಿಟ್ಲಪಿಂಡಿ ಮಹೋತ್ಸವವು ವಿಜೃಂಭಣೆಯಿಂದ ನಡೆಯಿತು.
ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರತೀರ್ಥ ಸ್ವಾಮೀಜಿ ಕೃಷ್ಣನ ಮೃಣ್ಮಯ (ಮಣ್ಣಿನ) ಮೂರ್ತಿಗೆ ಷೋಡಷೋಪಚಾರ ಪೂಜೆ ಮಾಡಿ, ನಂತರ ಮಹಾಪೂಜೆ ನೆರವೇರಿಸಿದರು. ಮಧ್ಯಾಹ್ನ ಮೃಣ್ಮಯ ಉತ್ಸವ ಮೂರ್ತಿಯನ್ನು ಚಿನ್ನದ ಪಲ್ಲಕ್ಕಿಯಲ್ಲಿ ಕೂರಿಸಿ, ರಥಬೀದಿಗೆ ತರಲಾಯಿತು. ಬಳಿಕ ಸ್ವರ್ಣ ರಥದಲ್ಲಿರಿಸಲಾಯಿತು.
ಅದಕ್ಕೂ ಮುನ್ನ ಅನಂತೇಶ್ವರ ಮತ್ತು ಚಂದ್ರೇಶ್ವರ ದೇವಾಲಯಗಳ ಉತ್ಸವ ಮೂರ್ತಿಗಳನ್ನು ನವರತ್ನ ರಥದಲ್ಲಿರಿಸಲಾಗಿತ್ತು. ಪರ್ಯಾಯ ಶ್ರೀಪಾದರು ಆರತಿ ಬೆಳಗಿ ರಥೋತ್ಸವಕ್ಕೆ ಚಾಲನೆ ನೀಡಿದರು. ಇದೇ ವೇಳೆ ಗೊಲ್ಲ ವೇಷಧಾರಿಗಳು ರಥಬೀದಿಯ ಗುರ್ಜಿಗಳಲ್ಲಿ ಕಟ್ಟಿದ್ದ ಮೊಸರು ಕುಡಿಕೆಗಳನ್ನು ಒಡೆದರು.
ಮೆರವಣಿಗೆಯಲ್ಲಿ ಜನಪದ ಹುಲಿವೇಷಗಳು ಹಾಗೂ ಇತರ ವೇಷಗಳು ಗಮನ ಸೆಳೆದವು. ಸಾವಿರಾರು ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾದರು. ಅದಮಾರು ಮಠಾಧೀಶ ವಿಶ್ವಪ್ರಿಯತೀರ್ಥ ಸ್ವಾಮೀಜಿ ರಥೋತ್ಸವದಲ್ಲಿ ಪಾಲ್ಗೊಂಡರು.
ಮೆರವಣಿಗೆ ನಡುವೆ ಪುತ್ತಿಗೆ ಶ್ರೀಗಳು ರಥಬೀದಿಯಲ್ಲಿ ಭಕ್ತರತ್ತ ಪ್ರಸಾದ ರೂಪದಲ್ಲಿ ಉಂಡೆ, ಚಕ್ಕುಲಿ ಎಸೆದರು. ‘ಗೋವಿಂದ’ ಎನ್ನುತ್ತ ಭಕ್ತರು ಅದನ್ನು ಹಿಡಿಯಲು ಯತ್ನಿಸಿದರು.
ಮೆರವಣಿಗೆ ಬಳಿಕ ಮೃಣ್ಮಯ ಮೂರ್ತಿಯನ್ನು ಮಧ್ವಸರೋವರದಲ್ಲಿ ಜಲಸ್ಥಂಭನಗೊಳಿಸ
ಲಾಯಿತು. ಬಳಿಕ ಕೃಷ್ಣ ಮಠದ ರಾಜಾಂಗಣದಲ್ಲಿ ಹುಲಿವೇಷ ಸ್ಪರ್ಧೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.