ಉಡುಪಿ: ತೀವ್ರ ಕುಡಿಯುವ ನೀರಿನ ಸಮಸ್ಯೆ ಇರುವ ಮೂಡುಪೆರಂಪಳ್ಳಿ, ಶಿರಿಬೀಡು, ಬನ್ನಂಜೆ, ಅಜ್ಜರಕಾಡು, ತೆಂಕಪೇಟೆ ಹಾಗೂ ಸರಳೆಬೆಟ್ಟು ಭಾಗಕ್ಕೆ ನಗರಸಭೆಯಿಂದ ಶುಕ್ರವಾರ ಟ್ಯಾಂಕರ್ ಮೂಲಕ ನೀರು ಪೂರೈಸಲಾಯಿತು.
ಟ್ಯಾಂಕರ್ ಬರುತ್ತಿದ್ದಂತೆ ಬಕೆಟ್, ಬಿಂದಿಗೆ, ಸಣ್ಣ ನೀರಿನ ಟ್ಯಾಂಕ್ಗಳನ್ನು ಹೊತ್ತುತಂದ ನಾಗರಿಕರು ನೀರು ಶೇಖರಿಸಿಕೊಂಡರು. ಮಳೆ ಬರುವ ಮುನ್ಸೂಚನೆ ಕಾಣದ ಹಿನ್ನೆಲೆಯಲ್ಲಿ ವಾರಕ್ಕಾಗುವಷ್ಟು ನೀರನ್ನು ಸಂಗ್ರಹಿಸಿಕೊಳ್ಳುತ್ತಿದ್ದ ದೃಶ್ಯ ಕಂಡುಬಂತು.
ಜತೆಗೆ ಶುಕ್ರವಾರಅನಂತರ ನಗರ, ಹುಡ್ಕೋ, ಎಲ್ಐಜಿ, ಇಂಡಸ್ಟ್ರಿಯಲ್ ಏರಿಯಾ, ಮಂಚಿ, ಕುಮೇರಿ ಮಂಚಿದುಗ್ಗಿ, ಮಂಜುಶ್ರೀ ನಗರ, ಮಂಚಿ ಕೋಡಿ, ದುರ್ಗಾ ನಗರ, ಅನಂತ ಕಲ್ಯಾಣ ನಗರ, ಇಂದಿರಾ ನಗರ, ಕುಕ್ಕಿಕಟ್ಟೆ, ಕಸ್ತೂರ್ಬಾ ನಗರ, ಬೈಲೂರು ಮಹಿಷ ಮರ್ಧಿನಿ ನಗರ, ವಾಸುಕಿ ನಗರ, ಬಲಾಯಿಪಾದೆ, ಮಂಚಿ ಮೂಲಸ್ಥಾನ ರಸ್ತೆ, ಚಿಟ್ಪಾಡಿ, ಡಿಸಿಎಂ ಕಾಲೋನಿ, ಪಣಿಯಾಡಿ, ಶಾರದಾ ಮಂಟಪ, ಎಂಜಿಎಂ, ಓಕುಡೆ ಓಣಿ, ಕುಂಜಿಬೆಟ್ಟು ಸೇರಿದಂತೆ ಹಲವೆಡೆ ನಲ್ಲಿ ನೀರು ಸರಬರಾಜು ಮಾಡಲಾಯಿತು.
ಮುಂದುವರಿದ ಡ್ರೆಜಿಂಗ್:
ಮತ್ತೊಂದೆಡೆ ಸ್ವರ್ಣ ನದಿಯ ಪಾತ್ರಗಳ ಹಳ್ಳಗಳಲ್ಲಿ ಸಂಗ್ರಹವಾಗಿರುವ ನೀರನ್ನು ಡ್ರೆಜಿಂಗ್ ಮೂಲಕ ಬಜೆ ಜಾಕ್ವೆಲ್ಗೆ ಹರಿಸುವ ಕಾರ್ಯ ಮುಂದುವರಿದಿದೆ. ಇಲ್ಲಿಂದ ತಿಂಗಳ ಅಂತ್ಯದವರೆಗೂ ನೀರನ್ನು ಪಂಪ್ ಮಾಡಲಾಗುವುದು.
ಇಂದು ಎಲ್ಲೆಲ್ಲಿ ನೀರು:
ಅಜ್ಜರಕಾಡು, ಕೋರ್ಟ್ ಹಿಂಬದಿ ರಸ್ತೆ, ಕೆಎಂ ಮಾರ್ಗ, ಸರ್ವೀಸ್ ಬಸ್ ನಿಲ್ದಾಣ, ಸಿಟಿ ಬಸ್ ನಿಲ್ದಾಣ, ಬಡಗುಪೇಟೆ, ಕಲ್ಸಂಕ, ರಾಜಾಂಗಣ, ವಾದಿರಾಜ ಮಾರ್ಗ, ರಥಬೀದಿ, ಬೀಡಿನಗುಡ್ಡೆ, ಒಳಕಾಡು, ಹಳೆ ಸ್ಟೇಟ್ ಬ್ಯಾಂಕ್ ಓಣಿ, ಮಿಷನ್ ಕಾಂಪೌಂಡ್, ಪಿಪಿಸಿ ಬಳಿ, ಮೀನುಮಾರುಕಟ್ಟೆ ಬಳಿ, ಕಳಂಬೆ, ಶಾಂತಿನಗರ, ಚಂದು ಮೈದಾನ, ಬಿ.ಬಿ.ನಗರ, ಸೆಟ್ಟಿಗಾರ್ ಕಾಲೋನಿ, ಪಿಡಬ್ಲ್ಯೂಡಿ ಕ್ವಾಟ್ರಸ್, ತೆಂಕಪೇಟೆ, ಶಾರದಾಂಬ ದೇವಸ್ಥಾನ ಬಳಿ, ಚಿತ್ತರಂಜನ್ ಸರ್ಕಲ್ ಭಾಗಗಳಿಗೆ ನಲ್ಲಿ ನೀರು ಪೂರೈಕೆ ಮಾಡಲಾಗುವುದು ಎಂದು ಪೌರಾಯುಕ್ತ ಆನಂದ್ ಸಿ.ಕಲ್ಲೋಳಿಕರ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.