
ಭಟ್ಕಳ: ಭಟ್ಕಳ ಬಂದರಿನ ಅಭಿವೃದ್ಧಿಗೆ ₹185 ಕೋಟಿ ವೆಚ್ಚದ ಸಮಗ್ರ ಯೋಜನೆ ರೂಪಿಸಲಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.
ಪಟ್ಟಣದ ಬಂದರಿನಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಹಾಗೂ ಭಟ್ಕಳ ಕೊಂಕಣ ಕಾರ್ವಿ ಸಮಾಜದ ಸಹಯೋಗದಲ್ಲಿ ಶನಿವಾರ ನಡೆದ ‘ಸಿಗೆಮೊರಬ್–2026’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಟ್ಕಳ ಬಂದರಿಗೆ ನದಿಯಿಂದ ಹರಿದು ಬರುವ ಮಣ್ಣಿನಿಂದ ಹೂಳು ತುಂಬದಂತೆ ತಡೆಯಲು ₹10 ಕೋಟಿ ವೆಚ್ಚದಲ್ಲಿ ಬ್ರಿಡ್ಸ್ ಕಮ್ ಬ್ಯಾರೇಜ್ ಕಟ್ಟಲು ಯೋಜನೆ ರೂಪಿಸಲಾಗಿದೆ ಎಂದರು.
ಮೀನುಗಾರರಿಗೆ ಸೀಮೆಎಣ್ಣೆ ಹಾಗೂ ಡಿಸೇಲ್ ಕೊರತೆ ಆಗದ ರೀತಿಯಲ್ಲಿ ಇಲಾಖೆಯಿಂದ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದರು.
ಮಳೆಗಾಲದಲ್ಲಿ ಮೀನುಗಾರರು ನೀರಿಗಿಳಿದು ಜೀವಕ್ಕೆ ಆಪತ್ತು ತಂದುಕೊಳ್ಳುವ ಕಾರಣದಿಂದ ಇಲಾಖೆಯಿಂದಲೇ ಎಲ್ಲಾ ಮೀನುಗಾರರಿಗೆ ಉಚಿತ ಲೈಪ್ ಜಾಕೆಟ್ ನೀಡಲು ತೀರ್ಮಾನಿಸಲಾಗಿದೆ ಎಂದರು.
ಕೊಂಕಣಿ ಭಾಷೆ ಯಾವುದೇ ಧರ್ಮಕ್ಕೆ ಸೀಮಿತವಾದ ಭಾಷೆ ಅಲ್ಲ. ಅದು ಎಲ್ಲಾ ಧರ್ಮದವರು ಪ್ರೀತಿಸುವ ಭಾಷೆಯಾಗಿದೆ. ಕೊಂಕಣಿ ಭಾಷೆ ಹಾಗೂ ಅಕಾಡೆಮಿ ಉಳಿಸುವುದು ಬೆಳೆಸುವುದು ಎಲ್ಲರ ಕರ್ತವ್ಯವಾಗಿದ್ದು, ಎಲ್ಲರೂ ಇದರ ಬಗ್ಗೆ ಹೆಚ್ಚಿನ ಆಸಕ್ತಿ ತೋರಿದರೆ ಸರ್ಕಾರದಿಂದಲೂ ಹೆಚ್ಚಿನ ಅನುದಾನ ತರಲು ಸಾಧ್ಯ ಎಂದರು.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ರೊಯ್ ಕ್ಯಾಸ್ತೆಲಿನೊ, ಅಖಿಲ ಭಾರತ ಕೊಂಕಣಿ ಖಾರ್ವಿ ಮಹಾಜನ ಸಭಾ ಅಧ್ಯಕ್ಷ ರವಿ ಟಿ. ನಾಯಕ, ಭಟ್ಕಳ ತಂಝೀಂ ಅಧ್ಯಕ್ಷ ಇನಾಯಿತುಲ್ಲಾ ಶಾಬಂದ್ರಿ, ರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಅಲ್ವಾರಿಸ್ ಮಾತಣಾಡಿದರು. ಭಟ್ಕಳ ಕೊಂಕಣಿ ಖಾರ್ವಿ ಸಮಾಜ ಅಧ್ಯಕ್ಷ ಸುಬ್ರಾಯ ಖಾರ್ವಿ, ಟ್ರಸ್ಟಿ ರತ್ನಾಕರ ಖಾರ್ವಿ, ಸಂಚಾಲಕ ಶ್ರೀಧರ ಎಂ. ಖಾರ್ವಿ, ಪ್ರಮುಖರಾದ ವಸಂತ ಖಾರ್ವಿ ಇದ್ದರು.