ADVERTISEMENT

ಬಿಜೆಪಿ ಸಂಘಟನಾ ಪರ್ವ ಸದಸ್ಯತ್ವ ಅಭಿಯಾನಕ್ಕೆ ಚಾಲನೆ: 2 ಲಕ್ಷ ಸದಸ್ಯತ್ವದ ಗುರಿ

​ಪ್ರಜಾವಾಣಿ ವಾರ್ತೆ
Published 28 ಜೂನ್ 2019, 12:16 IST
Last Updated 28 ಜೂನ್ 2019, 12:16 IST
ಶಿರಸಿಯಲ್ಲಿ ನಡೆದ ಬಿಜೆಪಿ ಸಂಘಟನಾ ಪರ್ವ ಸದಸ್ಯತ್ವ ಅಭಿಯಾನದಲ್ಲಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿದರು
ಶಿರಸಿಯಲ್ಲಿ ನಡೆದ ಬಿಜೆಪಿ ಸಂಘಟನಾ ಪರ್ವ ಸದಸ್ಯತ್ವ ಅಭಿಯಾನದಲ್ಲಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿದರು   

ಶಿರಸಿ: ಎಲ್ಲ ಜಾತಿ, ಮತ, ಪ್ರದೇಶಗಳಲ್ಲಿ ಬಿಜೆಪಿ ಸದಸ್ಯತ್ವ ಮಾಡುವ ಮೂಲಕ ಜಿಲ್ಲೆಯಲ್ಲಿ ಎರಡು ಲಕ್ಷಕ್ಕೂ ಅಧಿಕ ಸದಸ್ಯರ ನೋಂದಣಿ ಮಾಡುವ ಗುರಿಯಿದೆ ಎಂದು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಶುಕ್ರವಾರ ಇಲ್ಲಿ ಆಯೋಜಿಸಿದ್ದ ಬಿಜೆಪಿ ಸಂಘಟನಾಪರ್ವ ಸದಸ್ಯತ್ವ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು. ಸಂಘಟನೆಯು ಪಕ್ಷದ ಮೂಲಭೂತ ಶಕ್ತಿಯಾಗಿದೆ. ಸದಸ್ಯತ್ವ ಮಾಡುವ ಮೂಲಕ ಆ ಶಕ್ತಿ ಇನ್ನಷ್ಟು ಬಲಪಡಿಸಬೇಕಾಗಿದೆ. ಆಂತರಿಕ ಪ್ರಜಾಪ್ರಭುತ್ವಕ್ಕೆ ಬಲ ತುಂಬಲು ಈ ವ್ಯವಸ್ಥೆ ಅನುಕೂಲವಾಗಿದೆ ಎಂದರು.

‘ಜನರು ಬಿಜೆಪಿ ಸದಸ್ಯರಾಗಲು ಸಿದ್ಧರಿದ್ದಾರೆ. ನಾವು ಅವರ ಬಳಿ ಹೋಗಬೇಕಾಗಿದೆ. ಮತದಾರರ ಪಟ್ಟಿ ಹಿಡಿದು ಸದಸ್ಯತ್ವ ಮಾಡಿದ ಕಾಂಗ್ರೆಸ್ ಜನರಿಂದ ದೂರವಾಗಿದೆ. ವಂಶ ಪಾರಂಪರ್ಯದ ರಾಜಕಾರಣಕ್ಕೆ ಜೋತು ಬಿದ್ದ ಕಾರಣ ಬಿಜೆಪಿ ಹೊರತುಪಡಿಸಿ, ಬೇರೆ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಜೀವಂತವಾಗಿಲ್ಲ. ರಾಜ್ಯದಲ್ಲಿರುವ ಸಮ್ಮಿಶ್ರ ಸರ್ಕಾರದ ಬಗ್ಗೆ ಜನರಿಗೆ ತಿರಸ್ಕಾರ ಉಂಟಾಗಿದೆ. ರಾಜ್ಯ ಮಾರಿ ರಾಜಕಾರಣ ಮಾಡುವ ಹಂತಕ್ಕೆ ಸಮ್ಮಿಶ್ರ ಸರ್ಕಾರ ಬಂದಿದೆ. ಅಭಿವೃದ್ಧಿ ಕಾರ್ಯಕ್ಕೆ ಹಣ ಬಿಡುಗಡೆ ಆಗುತ್ತಿಲ್ಲ. ಸಾಲಮನ್ನಾ ವಿಚಾರ ಗೊಂದಲದ ಗೂಡಾಗಿದೆ. ಮೋಸದ ರಾಜಕೀಯದಿಂದ ರಾಜ್ಯದ ರೈತರು ಕಂಗಾಲಾಗಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಜಿ.ನಾಯ್ಕ ಮಾತನಾಡಿ, ಜುಲೈ 6ರಿಂದ ಅಗಸ್ಟ್ 11ರವರೆಗೆ ಸದಸ್ಯತ್ವ ಅಭಿಯಾನ ಮಾಡಲಾಗುವುದು. ಕಳೆದ ಬಾರಿ 1.40 ಲಕ್ಷ ಸದಸ್ಯತ್ವ ಮಾಡಲಾಗಿತ್ತು. ಈ ಬಾರಿ ಶೇ 20 ಹೆಚ್ಚಿಸುವ ಗುರಿಯಿದೆ. ಜಿಲ್ಲೆಯಲ್ಲಿ 1437 ಬೂತ್‌ಗಳಿದ್ದು, ಪ್ರತಿ ಬೂತ್‌ನಲ್ಲಿ 200ರಷ್ಟು ಸದಸ್ಯರನ್ನು ಮಾಡಬೇಕಾಗಿದೆ’ ಎಂದರು. ಜಿಲ್ಲಾ ಪ್ರಭಾರಿ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಹಿರಿಯರಾದ ಗಣೇಶ ರಾಯ್, ಮಾಜಿ ಶಾಸಕರಾದ ಸುನೀಲ್ ಹೆಗಡೆ, ವಿ.ಎಸ್.ಪಾಟೀಲ, ಪ್ರಮುಖರಾದ ವೆಂಕಟೇಶ ನಾಯ್ಕ, ಎನ್.ಎಸ್.ಹೆಗಡೆ ಇದ್ದರು. ಆರ್.ಡಿ.ಹೆಗಡೆ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.