ಕಾರವಾರ:ಲಾಕ್ಡೌನ್ ಘೋಷಣೆಯಾದ ಪರಿಣಾಮ ತಮ್ಮ ಊರಿಗೆ ಹೋಗಲು ವಾಹನ ಸಿಗದ ಕಾರ್ಮಿಕರು, ರೈಲು ಹಳಿಯಉದ್ದಕ್ಕೂ ನಡೆಯುತ್ತದಾರಿ ಕ್ರಮಿಸುತ್ತಿದ್ದಾರೆ. ಶನಿವಾರ ಮಧ್ಯಾಹ್ನ ಹೊರಟು ಭಾನುವಾರ ಸಂಜೆಕಾರವಾರಕ್ಕೆ ತಲುಪಿದ್ದಾರೆ.
ಗೋವಾದಲ್ಲಿ ದೋಣಿ ದುರಸ್ತಿಯ ಕೆಲಸ ಮಾಡುತ್ತಿರುವ ಸುಮಾರು 15 ಮಂದಿ ಕಾರ್ಮಿಕರು ಸುಮಾರು 200 ಕಿಲೋಮೀಟರ್ ದೂರದ ತಮ್ಮೂರಿನತ್ತ ಈ ರೀತಿ ಸಾಗುತ್ತಿದ್ದಾರೆ. ಕುಮಟಾ, ಹೊನ್ನಾವರ ಹಾಗೂ ನೆರೆಯ ಕುಂದಾಪುರದ ಕಾರ್ಮಿಕರು ಒಟ್ಟಾಗಿ ನಡೆದುಕೊಂಡು ಹೋಗುತ್ತಿದ್ದಾರೆ. ದಾರಿಯಲ್ಲಿ ಯಾರಾದರೂ ಕೊಡುವ ಆಹಾರ, ನೀರನ್ನು ಸೇವಿಸಿ ಮುಂದಿನ ದಾರಿ ಸವೆಸುತ್ತಿದ್ದಾರೆ.
ಭಾನುವಾರ ಸಂಜೆ ಅಸ್ನೋಟಿಗೆ ಅವರು ತಲುಪಿದ ಮಾಹಿತಿ ಪಡೆದ ಕಾರವಾರದ ನೂತನ ಮತ್ತು ತಂಡದವರು ಬಿಸ್ಕತ್ತು, ಹಣ್ಣು, ನೀರಿನ ಬಾಟಲಿಗಳನ್ನು ನೀಡಿದರು. ಅಲ್ಲಿ ಒಂದಷ್ಟು ಹೊತ್ತು ವಿಶ್ರಾಂತಿ ಪಡೆದು ಮತ್ತೆ ತಮ್ಮ ಊರುಗಳತ್ತ ಹೆಜ್ಜೆ ಹಾಕಿದರು.
ಈ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ತಂಡದ ಸದಸ್ಯರಲ್ಲಿ ಒಬ್ಬರಾದ ಕುಮಟಾದ ಸಂತೋಷ ಗೋಪಾಲ ಅಂಬಿಗ, ‘ನಮಗೆ ಕೆಲಸ ಕೊಟ್ಟ ಸಾಹುಕಾರರು ನಮ್ಮನ್ನು ಊರಿಗೆ ಕಳುಹಿಸಿಕೊಡಲು ತುಂಬ ಪ್ರಯತ್ನಿಸಿದರು. ಎಲ್ಲ ಕಡೆ ನಾಕಾಬಂದಿ ಹಾಕಲಾಗಿದ್ದು, ವಾಹನಗಳ ಸಂಚಾರವಿಲ್ಲ. ನಾವು ಅಲ್ಲಿ ಇದ್ದಷ್ಟು ದಿನ ಚೆನ್ನಾಗಿಯೇ ನೋಡಿಕೊಂಡರು. ಆದರೆ, ಇನ್ನೂ ಅಲ್ಲೇ ಇದ್ದರೆ ಮುಂದೇನು ಎಂಬ ಆತಂಕವಿತ್ತು. ಹಾಗಾಗಿ ಎಲ್ಲರೂ ಸೇರಿ ರೈಲು ಹಳಿಯಲ್ಲೇ ನಡೆದುಕೊಂಡು ಹೊರಟೆವು’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.