ADVERTISEMENT

ಉತ್ತರ ಕನ್ನಡ | ರಸ್ತೆ ಕಾಮಗಾರಿ ವಿಚಾರ: ಶಾಸಕ-ಯುವಕರ ನಡುವೆ ವಾಗ್ವಾದ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2023, 16:53 IST
Last Updated 14 ಫೆಬ್ರುವರಿ 2023, 16:53 IST

ಭಟ್ಕಳ: ತಾಲ್ಲೂಕಿನ ಬೈಲೂರಿನ ಮಾರ್ಕೆಂಡೇಶ್ವರ ಗ್ರಾಮದ ರಸ್ತೆ ಕಾಮಗಾರಿಗೆ ಮಂಗಳವಾರ ಶಾಸಕ ಸುನೀಲ ನಾಯ್ಕ ಚಾಲನೆ ನೀಡಲು ತೆರಳಿದ ವೇಳೆ ಗ್ರಾಮಸ್ಥರ ಜತೆ ವಾಗ್ವಾದ ನಡೆದಿದೆ.

ಶಾಸಕರು ಹಾಗೂ ಗ್ರಾಮದ ಕೆಲ ಯುವಕರ ನಡುವೆ ವಾಗ್ವಾದ ನಡೆದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

‘ಗ್ರಾಮಕ್ಕೆ 1.8 ಕಿ.ಮೀ. ಉದ್ದದ ಪೂರ್ಣ ಪ್ರಮಾಣದ ರಸ್ತೆ ಮಾಡಿಕೊಡಿ. ಅರ್ಧ ಕಾಮಗಾರಿ ನಡೆಸುವುದು ಬೇಡ’ ಎಂದು ಗ್ರಾಮದ ಕೆಲ ಯುವಕರು ಶಾಸಕರಿಗೆ ಆಗ್ರಹಿಸಿದ್ದರು. ಈ ವೇಳೆ ಸಿಟ್ಟಿಗೆದ್ದ ಶಾಸಕ ಈಗ ಮಂಜೂರಾದ ಅನುದಾನಕ್ಕೆ 400 ಮೀ. ಕಾಮಗಾರಿ ನಡೆಯಲಿದೆ. ಈಗ ಇಷ್ಟು ಮಾತ್ರ ಮಾಡುತ್ತೇನೆ. ಇದನ್ನು ತಡೆಯುವ ತಾಕತ್ತಿದ್ದರೆ ತಡೆಯಿರಿ ಎಂದು ಯುವಕರಿಗೆ ಹೇಳುತ್ತಿರುವುದು ದೃಶ್ಯದಲ್ಲಿದೆ.

ADVERTISEMENT

‘ನಾನು ಶಾಸಕನಿದ್ದು ನನಗೆ ಏನು ಮಾಡಲು ಯಾರ ದೊಣ್ಣೆನಾಯಕನ ಅಪ್ಪಣೆ ಬೇಕಿಲ್ಲ’ ಎಂದೂ ಶಾಸಕರು ಹೇಳಿರುವ ದೃಶ್ಯವನ್ನು ಮೊಬೈಲ್‍ನಲ್ಲಿ ಸೆರೆಹಿಡಿದ ಯುವಕರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.