ADVERTISEMENT

ಕಾರವಾರ: ಕಾಂಗ್ರೆಸ್ ಭವನಕ್ಕೆ ಸರ್ಕಾರಿ ನಿವೇಶನ

ಭಟ್ಕಳದಲ್ಲಿ ಸರ್ಕಾರಿ ಕಟ್ಟಡ, ಹೊನ್ನಾವರ, ಕುಮಟಾದಲ್ಲಿ ಸರ್ಕಾರಿ ನಿವೇಶನಕ್ಕೆ ಪ್ರಸ್ತಾವ

ಗಣಪತಿ ಹೆಗಡೆ
Published 10 ಫೆಬ್ರುವರಿ 2026, 7:49 IST
Last Updated 10 ಫೆಬ್ರುವರಿ 2026, 7:49 IST
ಭಟ್ಕಳದ ಹಳೆಯ ಉಪವಿಭಾಗಾಧಿಕಾರಿ ಕಚೇರಿ ಕಟ್ಟಡದಲ್ಲಿ ಸದ್ಯ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ನಡೆಯುತ್ತಿರುವುದು
ಭಟ್ಕಳದ ಹಳೆಯ ಉಪವಿಭಾಗಾಧಿಕಾರಿ ಕಚೇರಿ ಕಟ್ಟಡದಲ್ಲಿ ಸದ್ಯ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ನಡೆಯುತ್ತಿರುವುದು   

ಗಣಪತಿ ಹೆಗಡೆ

ಕಾರವಾರ: ಕಾಂಗ್ರೆಸ್ ಪಕ್ಷದ ಚಟುವಟಿಕೆಗಳಿಗೆ ಪೂರಕವಾಗುವಂತೆ ತಾಲ್ಲೂಕು ಕೇಂದ್ರಗಳಲ್ಲಿ ಕಾಂಗ್ರೆಸ್ ಭವನ ತೆರೆಯಲು ಮುಂದಾಗಲಾಗಿದೆ. ಇದಕ್ಕಾಗಿ ಜಿಲ್ಲೆಯ ಮೂರು ಕಡೆಗಳಲ್ಲಿ ಸರ್ಕಾರಿ ಜಾಗ ಮಂಜೂರಾತಿಗೆ ಪ್ರಯತ್ನ ನಡೆಸಿರುವುದು ಬೆಳಕಿಗೆ ಬಂದಿದೆ.

ಭಟ್ಕಳ, ಮಂಕಿ ಮತ್ತು ಕುಮಟಾದಲ್ಲಿ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಸರ್ಕಾರಿ ಜಾಗವನ್ನು ಮಂಜೂರಾತಿ ನೀಡಲು ಕಾಂಗ್ರೆಸ್ ಭವನ ಟ್ರಸ್ಟ್ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.

ADVERTISEMENT

ಭಟ್ಕಳ ಪಟ್ಟಣ ವ್ಯಾಪ್ತಿಯ ಸೂಸಗಡಿ ಗ್ರಾಮದ ಸರ್ವೆ ನಂ.609ರಲ್ಲಿನ 13 ಗುಂಟೆ, ಹೊನ್ನಾವರ ತಾಲ್ಲೂಕಿನ ಮಂಕಿ ಗ್ರಾಮದ ಸರ್ವೆ ನಂ.29ರಲ್ಲಿನ 20 ಗುಂಟೆ ಮತ್ತು ಕುಮಟಾ ಪಟ್ಟಣ ವ್ಯಾಪ್ತಿಯ ಕುಮಟಾ ಗ್ರಾಮದ ಸರ್ವೆ ನಂ.465/ಅ ದಲ್ಲಿರುವ 6 ಗುಂಟೆ ಜಾಗವನ್ನು ಕಾಂಗ್ರೆಸ್ ಭವನ ನಿರ್ಮಾಣದ ಉದ್ದೇಶಕ್ಕೆ ಕಾಂಗ್ರೆಸ್ ಭವನ ಟ್ರಸ್ಟ್‌ನ ಟ್ರಸ್ಟಿ ವಿಜಯ ಮುಳಗುಂದ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಟ್ರಸ್ಟ್ ಮಂಜೂರಾತಿಗೆ ಕೇಳಿರುವ ಭಟ್ಕಳದ ಸೂಸಗಡಿಯಲ್ಲಿರುವ ಜಾಗದಲ್ಲಿ ಹಳೆಯ ಉಪವಿಭಾಗಾಧಿಕಾರಿ ಕಚೇರಿ ಕಟ್ಟಡವಿದೆ. ಅಲ್ಲಿ ಸದ್ಯ ಜಿಲ್ಲಾ ಉಸ್ತುವಾರಿ ಸಚಿವರ ಸರ್ಕಾರಿ ಕಚೇರಿ ನಡೆಸಲಾಗುತ್ತಿದೆ.

‘ಟ್ರಸ್ಟ್ ಕೋರಿರುವ ಜಾಗಗಳ ಮಂಜೂರಾತಿಗೆ ಅವಕಾಶ ಇರುವ ಬಗ್ಗೆ ಸರ್ಕಾರದ ಸೂಚನೆ ಆಧರಿಸಿ ವರದಿ ನೀಡಿರುವ ಜಿಲ್ಲಾಧಿಕಾರಿ ಮೂರು ಸ್ಥಳಗಳು ಪಟ್ಟಣಗಳ ವ್ಯಾಪ್ತಿಯಲ್ಲಿರುವ ಸರ್ಕಾರಿ ಭೂಮಿ ಆಗಿರುವುದರಿಂದ ಕರ್ನಾಟಕ ಭೂ ಮಂಜೂರಾತಿ ನಿಯಮಗಳ ಪ್ರಕಾರ ಮಂಜೂರಾತಿ ಅಸಾಧ್ಯ ಎಂದು ವರದಿ ನೀಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

‘ನಗರ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿರುವ ಸರ್ಕಾರಿ ಭೂಮಿಯನ್ನು ಸರ್ಕಾರಿ ಯೋಜನೆಗಳಿಗೆ ಮೀಸಲಿಡುವುದು ಕಡ್ಡಾಯ. ಅವುಗಳನ್ನು ಖಾಸಗಿ ವ್ಯಕ್ತಿ ಅಥವಾ ಸಂಸ್ಥೆಗೆ ಹಸ್ತಾಂತರಿಸಲು ಸಾಧ್ಯವಿಲ್ಲ. ಆದರೆ, ವಿಶೇಷ ಪ್ರಕರಣಗಳಲ್ಲಿ ಸರ್ಕಾರವೇ ಭೂಮಿಯನ್ನು ಖಾಸಗಿ ಸಂಸ್ಥೆಗೆ ಹಸ್ತಾಂತರಿಸಲು ಅವಕಾಶವಿದೆ. ಆದರೆ, ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಳ್ಳಬೇಕಾಗುತ್ತದೆ’ ಎಂದು ಕಂದಾಯ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ತಿಳಿಸಿದರು.

‘ಸರ್ಕಾರಿ ಯೋಜನೆಗೆ ಬಳಕೆಯಾಗದ, ಅಗತ್ಯವಿರುವ ಭೂಮಿಯನ್ನು ಖಾಸಗಿ ಟ್ರಸ್ಟ್‌ಗೆ ಪಡೆಯಲು ಅವಕಾಶವಿದೆ. ಈ ಹಿಂದೆ ಶಿರಸಿಯಲ್ಲಿಯೂ ಸರ್ಕಾರಿ ಜಾಗವನ್ನು ದೀನದಯಾಳ ಟ್ರಸ್ಟ್‌ಗೆ ನೀಡಲಾಗಿದೆ. ಅದೇ ಜಾಗದಲ್ಲಿ ಬಿಜೆಪಿ ರಾಜಕೀಯ ಚಟುವಟಿಕೆ ನಡೆಸುತ್ತಿದೆ’ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದರು.

ಅಧಿಕಾರ ದುರ್ಬಳಕೆಯ ಪರಮಾವಧಿ

‘ಜಿಲ್ಲೆಯಲ್ಲಿ ಸೀಮಿತ ಸಂಖ್ಯೆಯಲ್ಲಿ ಕಂದಾಯ ಭೂಮಿ ಇದ್ದು ಸರ್ಕಾರಿ ಯೋಜನೆಗಳಿಗೆ ನಿವೇಶನಗಳ ಲಭ್ಯತೆಯ ಕೊರತೆ ಇದೆ. ಅಂತದ್ದರಲ್ಲಿ ಸರ್ಕಾರಿ ಭೂಮಿಯನ್ನು ಪಕ್ಷದ ಚಟುವಟಿಕೆ ಉದ್ದೇಶಕ್ಕೆ ಪಡೆಯಲು ಕಾಂಗ್ರೆಸ್ ಮುಂದಾಗಿರುವುದು ಅಧಿಕಾರ ದುರ್ಬಳಕೆಯ ಪರಮಾವಧಿ’ ಎಂದು ಬಿಜೆಪಿ ಜಿಲ್ಲಾ ಘಟಕದ ವಕ್ತಾರ ಸದಾನಂದ ಭಟ್ ಆರೋಪಿಸಿದ್ದಾರೆ. ‘ವಿದ್ಯಾರ್ಥಿ ವಸತಿ ನಿಲಯಗಳು ಸರ್ಕಾರಿ ಕಚೇರಿಗಳು ಸ್ವಂತ ಕಟ್ಟಡವಿಲ್ಲದೆ ಬಾಡಿಗೆ ಕಟ್ಟಡ ಅವಲಂಬಿಸಿವೆ. ಹೊಸ ಕಟ್ಟಡ ನಿರ್ಮಾಣಕ್ಕೆ ನಿವೇಶನಗಳ ಕೊರತೆಯ ಕಾರಣ ನೀಡಲಾಗುತ್ತಿದೆ. ಇಂತಹ ಸಮಸ್ಯೆಗಳ ನಡುವೆಯೇ ಸರ್ಕಾರಿ ಭೂಮಿಯನ್ನು ಪಕ್ಷದ ಭವನ ನಿರ್ಮಿಸಲು ಬಳಕೆಗೆ ನೀಡಲು ಆಕ್ಷೇಪವಿದೆ’ ಎಂದರು.

ಭವನಕ್ಕೆ ಜಾಗ ಸಿಕ್ಕಿಲ್ಲ

‘ಶಿರಸಿಯಲ್ಲಿನ ಕಾಂಗ್ರೆಸ್ ಜಿಲ್ಲಾ ಕಚೇರಿ ದಾಂಡೇಲಿಯಲ್ಲಿನ ತಾಲ್ಲೂಕು ಕಚೇರಿಗಳಿಗೆ ಸ್ವಂತ ನಿವೇಶನಗಳಿವೆ. ರಾಜ್ಯದಲ್ಲಿ ನಿರ್ಮಾಣಗೊಳ್ಳಲಿರುವ 100 ಕಾಂಗ್ರೆಸ್ ಭವನಗಳ ಪೈಕಿ ಶಿರಸಿಯ ಕಚೇರಿ ಕಟ್ಟಡವೂ ಒಂದು. ದಾಂಡೇಲಿಯಲ್ಲಿ ಕಟ್ಟಡ ನಿರ್ಮಾಣ ನಡೆಯುತ್ತಿದೆ. ಉಳಿದ ಕಡೆಗಳಲ್ಲಿ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಸ್ವಂತ ಕಟ್ಟಡವಿಲ್ಲ. ಸೂಕ್ತ ಜಾಗ ಸಿಗದ ಕಾರಣ ಅನುಕೂಲವಾಗುವ ಜಾಗಗಳನ್ನು ಗುರುತಿಸಿ ಮಂಜೂರಾತಿಗೆ ಪ್ರಸ್ತಾವ ನೀಡಲಾಗಿದೆ’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸಾಯಿ ಗಾಂವಕರ್ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.