ADVERTISEMENT

ಶಿರಸಿ | ಸೈಬರ್ ಅಪರಾಧ: ₹1.29 ಕೋಟಿ ವಂಚನೆ

ಜಾಗೃತಿ ನಡುವೆಯೂ ವಂಚನೆಯ ಜಾಲಕ್ಕೆ ಬೀಳುತ್ತಿರುವ ವಿದ್ಯಾವಂತರು

ರಾಜೇಂದ್ರ ಹೆಗಡೆ
Published 1 ಆಗಸ್ಟ್ 2025, 6:17 IST
Last Updated 1 ಆಗಸ್ಟ್ 2025, 6:17 IST
<div class="paragraphs"><p> ವಂಚನೆ</p></div>

ವಂಚನೆ

   

ಶಿರಸಿ: ಸರ್ಕಾರ, ಪೊಲೀಸರ ಜಾಗೃತಿ ಕಾರ್ಯಕ್ರಮಗಳ ಹೊರತಾಗಿಯೂ ಶಿರಸಿ ಉಪವಿಭಾಗದ ವ್ಯಾಪ್ತಿಯಲ್ಲಿ ಸೈಬ‌ರ್ ಅಪರಾಧ ನಡೆಯುತ್ತಲೇ ಇದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಡೆಬಿಟ್, ಕ್ರೆಡಿಟ್ ಕಾರ್ಡ್, ಆನ್‌ಲೈನ್ ಬ್ಯಾಂಕಿಂಗ್ ವಂಚನೆ ಪ್ರಕರಣಗಳಡಿ ಸೈಬರ್ ಕಳ್ಳರ ಪಾಲಾಗಿರುವ ಹಣದ ಮೊತ್ತ ಮೂರು ಪಟ್ಟು ಹೆಚ್ಚಿದೆ. 

ಪೊಲೀಸ್ ಇಲಾಖೆ ಮಾಹಿತಿ ಪ್ರಕಾರ 2022-23ರಲ್ಲಿ ಉಪವಿಭಾಗ ವ್ಯಾಪ್ತಿಯಲ್ಲಿ 9 ಸೈಬರ್ ವಂಚನೆ ಪ್ರಕರಣ ದಾಖಲಾಗಿದ್ದವು. ಅಂದಾಜು ₹15-₹20 ಲಕ್ಷ ಎಗರಿಸಲಾಗಿತ್ತು. 2023-24ರಲ್ಲಿ 20 ಪ್ರಕರಣ ವರದಿಯಾಗಿದ್ದು, ₹45 ಲಕ್ಷಕ್ಕೂ ಹೆಚ್ಚಿನ ವಂಚನೆಯಾಗಿತ್ತು. 2025ರಲ್ಲಿ ಈವರೆಗೆ 9 ಪ್ರಕರಣಗಳಷ್ಟೇ ದಾಖಲಾಗಿದೆ. ಈ ಪ್ರಕರಣಗಳಿಂದ ಒಟ್ಟೂ ₹1.29 ಕೋಟಿ ವಂಚಕರ ಕೈಸೇರಿದೆ. ಆ ಮೂಲಕ ಉಪವಿಭಾಗ ವ್ಯಾಪ್ತಿಯಲ್ಲಿ ಒಂದೇ ವರ್ಷದಲ್ಲಿ ವಂಚನೆ ಪ್ರಕರಣದಡಿ ಕಳೆದುಕೊಂಡ ಮೊತ್ತ ಮೂರು ಪಟ್ಟು ಏರಿಕೆಯಾಗಿದೆ. ಅದರಲ್ಲೂ ₹1 ಲಕ್ಷ ಮೇಲ್ಪಟ್ಟು ವಂಚನೆಯಾದ ಪ್ರಕರಣಗಳನ್ನಷ್ಟೇ ಪರಿಗಣಿಸಲಾಗಿದೆ. ಹೀಗಾಗಿ ₹1 ಲಕ್ಷಕ್ಕಿಂತ ಕಡಿಮೆ ವಂಚನೆ ಪ್ರಕರಣ ಲೆಕ್ಕಕ್ಕೆ ಪಡೆದುಕೊಂಡರೆ ವಂಚನೆ ಪ್ರಮಾಣ ಇನ್ನಷ್ಟು ಏರಿಕೆ ಆಗುತ್ತದೆ. 

ADVERTISEMENT

‘ಲಕ್ಷಾಂತರ ರೂಪಾಯಿ ಕಳೆದುಕೊಂಡ ವ್ಯಕ್ತಿಗಳು ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆಯೇ ಹೊರತು ಸಾವಿರಾರು ರೂಪಾಯಿ ಕಳೆದುಕೊಂಡರೂ ದೂರು ನೀಡದ ಪ್ರಕರಣ ನೂರಾರಿವೆ. ಬ್ಯಾಂಕ್ ಅಕೌಂಟ್, ಆಧಾರ್‌ ಕಾರ್ಡ್, ರೇಷನ್ ಕಾರ್ಡ್ ಸರಿಪಡಿಸುವ ಹೆಸರಿನಲ್ಲಿ ಸುಳ್ಳು ಮಾಹಿತಿಗಳ ಮೂಲಕ ಸಾರ್ವಜನಿಕರ ದಿಕ್ಕು ತಪ್ಪಿಸುವ ಆನ್ ಲೈನ್ ವಂಚಕರು ಸಾರ್ವಜನಿಕರ ಮಾಹಿತಿ ಪಡೆದು ಲಕ್ಷ ಲಕ್ಷ ಹಣ ದೋಚುತ್ತಿದ್ದಾರೆ. ಪ್ರತಿ ದಿನ ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಯಲ್ಲಿ ಒಂದಿಲ್ಲೊಂದು ಆನ್ ಲೈನ್ ವಂಚನೆ ಪ್ರಕರಣ ದಾಖಲಾಗುತ್ತಿದೆ. ಆದರೆ ಈವರೆಗೂ ಯಾವುದೇ ಪ್ರಕರಣದಲ್ಲಿ ಹಣ ವಾಪಸಾತಿ ಆದ ಉದಾಹರಣೆಯಿಲ್ಲ’ ಎಂಬುದು ಪೊಲೀಸ್ ಅಧಿಕಾರಿಯೊಬ್ಬರ ಮಾತು. 

‘ಸೈಬ‌ರ್ ವಂಚನೆಗೆ ಒಳಗಾಗಿರುವುದು ಗೊತ್ತಾದರೆ ತಕ್ಷಣ ಕಾರ್ಡ್‌‍ ಬ್ಲಾಕ್ ಮಾಡಿಸಬೇಕು. ಪದೇಪದೆ ವೆಬ್‌ಸೈಟ್‌ಗಳಲ್ಲಿ ಆನ್‌ಲೈನ್ ಪಾವತಿ ಸಾಧ್ಯವಾದಷ್ಟು ತಪ್ಪಿಸಬೇಕು. ಯಾವಾಗಲೂ ಆನ್‌ಲೈನ್ ಬ್ಯಾಂಕ್ ಖಾತೆ ನಿರ್ವಹಣೆಗೆ ಭದ್ರವಾದ ಪಾಸ್‌ವರ್ಡ್ ಇಟ್ಟುಕೊಳ್ಳಬೇಕು. ಸಾರ್ವಜನಿಕ ಸ್ಥಳಗಳಲ್ಲಿ ವೈಫೈ ಅಥವಾ ಇಂಟರ್‌ನೆಟ್ ಸಂಪರ್ಕ ಪಡೆದುಕೊಳ್ಳಬೇಡಿ. ಕಂಪ್ಯೂಟರ್ ಹಾಗೂ ಮೊಬೈಲ್ ಅಪ್ಲಿಕೇಷನ್‍ ಅನ್ನು ನಿರಂತರವಾಗಿ ಅಪ್‌ಡೇಟ್ ಮಾಡುತ್ತಿರಬೇಕು’ ಎನ್ನುತ್ತಾರೆ ಅವರು. 

‘ಕೆವೈಸಿ ಅಪ್‌ಡೇಟ್, ಖಾತೆ ನವೀಕರಣ ಕರೆ, ಸಂದೇಶ, ವಾಟ್ಸ್‌ಆಪ್ ಮಾಹಿತಿ ನಂಬಬಾರದು. ಕೆವೈಸಿ ಅಪ್‌ಡೇಟ್ ಅಥವಾ ಇನ್ನಾವುದೇ ಮಾಹಿತಿ ಇದ್ದರು ನೇರ ಬ್ಯಾಂಕ್‌ಗೆ ಹೋಗಿ ವಿಚಾರಿಸಬೇಕು. ಯಾವುದೇ ರೀತಿ ವೈಯಕ್ತಿಕ ವಿವರ, ಒಟಿಪಿಯನ್ನು ಯಾರೊಂದಿಗೂ ಹಂಚಿಕೊಳ್ಳಲೇಬೇಡಿ ಎಂದು ಜಾಗೃತಿ ಮೂಡಿಸಲಾಗುತ್ತಿದೆ. ಆದರೂ ಕೆಲವು ಉದ್ದಿಮೆದಾರರು, ಸಾರ್ವಜನಿಕರು ಅದರಲ್ಲೂ ವಿದ್ಯಾವಂತರೇ ಈ ವಂಚನೆಯ ಜಾಲಕ್ಕೆ ಬೀಳುತ್ತಿದ್ದಾರೆ. ಹೀಗಾಗಿ ಸಾರ್ವಜನಿಕರ ಹಾಗೂ ಉದ್ದಿಮೆದಾರರ ಸಭೆ ಕರೆದು ಸೈಬರ್ ಜಾಗೃತಿ ಮೂಡಿಸಲಾಗುವುದು’ ಎನ್ನುತ್ತಾರೆ ಶಿರಸಿ ಡಿಎಸ್ಪಿ ಗೀತಾ ಪಾಟೀಲ. 

‘ಯಾವುದೇ ಠಾಣೆಯಲ್ಲೂ ದೂರು ದಾಖಲು’

‘ಈ ಹಿಂದೆ ಆನ್‍ಲೈನ್ ವಂಚನೆ ಪ್ರಕರಣ ನಡೆದಾಗ ದೂರುದಾರರು ಕಾರವಾರದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಬೇಕಿತ್ತು. ಆದರೆ ಈಗ ಸಾಧ್ಯವಾದಷ್ಟು ಬೇಗ ಪ್ರಕರಣ ಬೇಧಿಸಲು ಅನುಕೂಲವಾಗುವಂತೆ ಎಲ್ಲ ಪೊಲೀಸ್ ಠಾಣೆಗಳಲ್ಲಿ ಈ ಕುರಿತು ಪ್ರಕರಣ ದಾಖಲಿಸುವ ವ್ಯವಸ್ಥೆ ಜಾರಿಗೆ ತರಲಾಗಿದೆ. ಪ್ರತಿ ಠಾಣೆಯಲ್ಲೂ ಒಬ್ಬ ಸಿಬ್ಬಂದಿಯನ್ನು ಇಂಥ ಪ್ರಕರಣ ದಾಖಲಿಸಿಕೊಳ್ಳುವ ಸಲುವಾಗಿಯೇ ನೇಮಿಸಿಕೊಳ್ಳಲಾಗಿದೆ’ ಎಂದು ಡಿಎಸ್‌ಪಿ ಗೀತಾ ಪಾಟೀಲ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.