ADVERTISEMENT

ಟ್ಯಾಗೋರ್ ತೀರಕ್ಕೆ ಕೊಳಚೆ ನೀರಿನ ಕಪ್ಪು ಚುಕ್ಕೆ

ವಾಯು ವಿಹಾರಿಗಳಿಗೆ ದುರ್ವಾಸನೆಯ ವೇದನೆ; ಮೀನುಗಾರಿಕೆಗೂ ತೊಂದರೆ

ದೇವರಾಜ ನಾಯ್ಕ
Published 6 ಮೇ 2019, 9:21 IST
Last Updated 6 ಮೇ 2019, 9:21 IST
ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರಕ್ಕೆ ಕೋಣೆನಾಲಾದ ಕೊಳಚೆ ನೀರು ಸೇರುತ್ತಿರುವುದು
ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರಕ್ಕೆ ಕೋಣೆನಾಲಾದ ಕೊಳಚೆ ನೀರು ಸೇರುತ್ತಿರುವುದು   

ಕಾರವಾರ: ರವೀಂದ್ರನಾಥ ಟ್ಯಾಗೋರ್ ಕಡಲತೀರ ವಾಯು ವಿಹಾರಿಗಳಿಗೆ ಅಚ್ಚುಮೆಚ್ಚಿನ ತಾಣ. ಕಡಲ ಅಲೆಗಳ ಜತೆ ಹಗುರವಾಗಿ ಬೀಸುವ ತಂಗಾಳಿಯಲ್ಲಿ ಒಂದಷ್ಟು ಸಮಯ ಕಳೆಯಲೆಂದು ಇಲ್ಲಿಗೆ ಬರುವವರ ಸಂಖ್ಯೆ ಅಪಾರ. ಆದರೆ, ಕೋಣೆನಾಲಾ ಹಾಗೂ ಮೀನು ಮಾರುಕಟ್ಟೆಯ ಕೊಳಚೆ ನೀರಿನಿಂದಾಗಿ ಅವರಿಗೆ ದುರ್ವಾಸನೆ ಕಾಡುತ್ತದೆ.

ಲಂಡನ್‌ ಬ್ರಿಜ್‌ನಿಂದ ಕೋಡಿಬಾಗದವರೆಗೆ ಹಬ್ಬಿರುವ ವಿಶಾಲ ಕಡಲತೀರದಕ್ಕೆ ನೂರಾರು ಮಂದಿ ಬರುತ್ತಾರೆ. ಯೋಗಾಸನ, ನೃತ್ಯ, ಕರಾಟೆ, ಈಜು, ವ್ಯಾಯಾಮ, ಕ್ರೀಡೆ ಹೀಗೆ ಹಲವು ಚಟುವಟಿಕೆಯಲ್ಲಿ ತೊಡಗಿಕೊಳ್ಳುತ್ತಾರೆ. ಹೀಗಿರುವಾಗ ವಿಪರೀತ ದುರ್ವಾಸನೆ ಬೀರುವ ಕೊಳಕು ನೀರನ್ನು ಸಮುದ್ರಕ್ಕೆ ನೇರವಾಗಿ ಬಿಡುತ್ತಿರುವುದುಅವರ ಕೆಂಗಣ್ಣಿಗೆ ಗುರಿಯಾಗಿದೆ.

ಇತ್ತ ಮೀನುಮಾರುಕಟ್ಟೆಯಲ್ಲಿ ಕೆಲವರು ಎಸೆದ ಮೀನಿನ ತ್ಯಾಜ್ಯಗಳು, ಪ್ಲಾಸ್ಟಿಕ್ ಕವರ್‌ಗಳು ಸಮುದ್ರಕ್ಕೆ ಸೇರುತ್ತಿವೆ. ಸರಿಯಾದ ನಿರ್ವಹಣೆಯಿಲ್ಲದ ಕಾರಣ ದುರ್ವಾಸನೆ ಹರಡಿ ಅದರ ಸಮೀಪ ಮೂಗು ಮುಚ್ಚಿಕೊಂಡೇ ವಿಹರಿಸಬೇಕಾಗಿದೆ.

ADVERTISEMENT

ಈ ಎರಡೂ ಕಡೆಗಳಿಂದ ಬರುವ ಕೊಳಚೆ ನೀರಿನಲ್ಲಿ ಪ್ಲಾಸ್ಟಿಕ್‌ ವಸ್ತುಗಳು, ಬುಟ್ಟಿಗಳೂ ಕಡಲಿಗೆ ಸೇರುತ್ತಿವೆ. ಇದರಿಂದ ಮೀನುಗಾರರಿಗೇ ಹೆಚ್ಚಿನ ನಷ್ಟ ಉಂಟಾಗುತ್ತಿದೆ. ಸಮುದ್ರಕ್ಕೆ ಬೀಸಿದ ಬಲೆಗಳನ್ನುಎಳೆದಾಗ ಕಸದ ರಾಶಿಯೇ ಅವುಗಳಲ್ಲಿ ಬರುತ್ತಿವೆ. ಇನ್ನೊಂದೆಡೆ, ಹರಿತವಾದ ತ್ಯಾಜ್ಯಗಳಿಗೆ ಸಿಲುಕಿ ಬಲೆಗಳು ಹರಿದು ಹೋಗುತ್ತಿವೆ ಎಂದು ಮೀನುಗಾರರೇ ಬೇಸರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.