ADVERTISEMENT

ಕಾಳಿಯಲ್ಲಿ ಕಂಡು ಕೇಳರಿಯದ ಪ್ರವಾಹ: ಗುರುವಾರವೂ ಶಾಲೆ, ಕಾಲೇಜುಗಳಿಗೆ ರಜೆ

ಮುಂದುವರಿಯದ ಮಳೆಯ ಅಬ್ಬರ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2019, 14:13 IST
Last Updated 7 ಆಗಸ್ಟ್ 2019, 14:13 IST
ಕಾರವಾರ ತಾಲ್ಲೂಕಿನ ಮಲ್ಲಾಪುರದಲ್ಲಿ ಪ್ರವಾಹ ಪೀಡಿತ ಪ್ರದೇಶದ ಜನರನ್ನು ಸೀಬರ್ಡ್ ನೌಕಾನೆಲೆಯ ಸಿಬ್ಬಂದಿ ಬುಧವಾರ ಸುರಕ್ಷಿತ ಜಾಗಕ್ಕೆ ಕರೆದುಕೊಂಡು ಹೋದರು.
ಕಾರವಾರ ತಾಲ್ಲೂಕಿನ ಮಲ್ಲಾಪುರದಲ್ಲಿ ಪ್ರವಾಹ ಪೀಡಿತ ಪ್ರದೇಶದ ಜನರನ್ನು ಸೀಬರ್ಡ್ ನೌಕಾನೆಲೆಯ ಸಿಬ್ಬಂದಿ ಬುಧವಾರ ಸುರಕ್ಷಿತ ಜಾಗಕ್ಕೆ ಕರೆದುಕೊಂಡು ಹೋದರು.   

ಕಾರವಾರ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ನದಿಗಳು ಹಾಗೂ ಹಳ್ಳ ಕೊಳ್ಳಗಳೆಲ್ಲ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಸತತ ಎರಡನೇ ದಿನವಾದ ಬುಧವಾರವೂ ಕಾಳಿಯ ರೌದ್ರಾವತಾರ ಮುಂದುವರಿದಿತ್ತು.

ಕದ್ರಾ ಅಣೆಕಟ್ಟೆಗೆ ಹಿಂದೆಂದೂ ಕಂಡು ಕೇಳರಿಯದಂತಹ ಪ್ರಮಾಣದಲ್ಲಿ ಒಳಹರಿವು ಬರುತ್ತಿದೆ. ಬುಧವಾರ ಮಧ್ಯಾಹ್ನದ ವೇಳೆಗೆ 1.42 ಲಕ್ಷ ಕ್ಯುಸೆಕ್ ದಾಖಲಾಗಿದ್ದ ಕಾರಣ 1.52 ಲಕ್ಷ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಯಿತು. ಜಲಾಶಯದಲ್ಲಿ ನೀರಿನ ಮಟ್ಟವನ್ನು ಕಾಯ್ದುಕೊಳ್ಳುವ ಸಲುವಾಗಿಅಣೆಕಟ್ಟೆಯ 10 ಗೇಟ್‌ಗಳು ತೆರೆದೇ ಇಡಲಾಗಿತ್ತು.

ಇದರ ಪರಿಣಾಮ ಮಲ್ಲಾಪುರದ ಕೈಗಾ ಟೌನ್‌ಶಿಪ್, ಮಲ್ಲಾಪುರ ಗ್ರಾಮ, ಹಿಂದೂವಾಡ, ಕ್ರಿಶ್ಚಿಯನ್ ವಾಡ, ಮುಸ್ಲಿಂ ವಾಡಗಳಲ್ಲಿ ನೀರು ತುಂಬಿತು. ಕೈಗಾ– ಕಾರವಾರ ಹೆದ್ದಾರಿ ಮತ್ತಷ್ಟು ಪ್ರಮಾಣದಲ್ಲಿ ಜಲಾವೃತವಾಯಿತು.

ADVERTISEMENT

ನೆರೆ ಪೀಡಿತರ ನೆರವಿಗೆ ಅಗ್ನಿಶಾಮಕ ದಳ, ಪೊಲೀಸ್ ಹಾಗೂ ನೌಕಾಪಡೆಯ ಸಿಬ್ಬಂದಿ ಧಾವಿಸಿದ್ದಾರೆ. ಮಂಗಳವಾರ ತಡರಾತ್ರಿಯವರೆಗೂ ಕಾರ್ಯಾಚರಣೆ ಮಾಡಲಾಗಿದ್ದು, ನೌಕಾಪಡೆಯ ಸಿಬ್ಬಂದಿ 500 ಜನರನ್ನು ರಕ್ಷಿಸಿದ್ದಾರೆ. ಬುಧವಾರ ಬೆಳಿಗ್ಗೆ ಏಳು ಗಂಟೆಗೇ ಮತ್ತೆ ರಕ್ಷಣಾ ಕಾರ್ಯ ಆರಂಭಿಸಿ, ಕೈಗಾ ಅಣುವಿದ್ಯುತ್ ಸ್ಥಾವರದ 100 ಸಿಬ್ಬಂದಿಯನ್ನು ಟೌನ್‌ಶಿಪ್‌ನಿಂದ ತೆರವು ಮಾಡಲಾಯಿತು. ಅಂತೆಯೇ ಹಿಂದೂವಾಡದಲ್ಲಿ 55 ಮಹಿಳೆಯರು ಮತ್ತು ಮಕ್ಕಳನ್ನು ಕೂಡ ಸುರಕ್ಷಿತ ಸ್ಥಳಗಳಿಗೆ ಕರೆದುಕೊಂಡು ಬರಲಾಯಿತು.

ಸೀಬರ್ಡ್ ನೌಕಾನೆಲೆಯಿಂದ ತುರ್ತು ಕಾರ್ಯಾಚರಣೆಗೆ ಮೂರು ವಾಹನಗಳು, ಮುಳುಗು ತಜ್ಞರು, ಜೆಮಿನಿ ದೋಣಿಗಳು, ಲೈಫ್ ಜಾಕೆಟ್‌ಗಳು, ಹಗ್ಗ ಮುಂತಾದ ಸಲಕರಣೆಗಳನ್ನು ಪ್ರವಾಹ ಪೀಡಿತ ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ನೌಕಾಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.

ಶಾಸಕಿ ರೂಪಾಲಿ ನಾಯ್ಕ ಅಂಕೋಲಾ ತಾಲ್ಲೂಕಿನಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರು. ಸಂಪೂರ್ಣ ಜಲಾವೃತವಾಗಿರುವ ಅಗ್ರಗೋಣ, ಕೊಡ್ಸಣಿ, ಉಳುವರೆ, ಜೂಗ, ಶೇಡಿಕಟ್ಟೆ ಗ್ರಾಮಗಳಲ್ಲಿ ಸ್ಥಳೀಯರೊಂದಿಗೆ ಚರ್ಚಿಸಿದರು.ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಜನ, ಜಾನುವಾರುರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಪ್ರವಾಸ ಮುಂದೂಡಲುಜಿಲ್ಲಾಧಿಕಾರಿ ಮನವಿ:ಉತ್ತರ ಕನ್ನಡ ಜಿಲ್ಲೆಯಾದ್ಯಂತ ಭಾರಿ ಮಳೆ ಹಾಗೂ ಅದರಿಂದ ಹಾನಿ ಹೆಚ್ಚಾಗುತ್ತಿದೆ. ಆದ್ದರಿಂದಮುಂದಿನ ಮೂರು ದಿನ ಹೊರರಾಜ್ಯ ಹಾಗೂ ಹೊರ ಜಿಲ್ಲೆಗಳ ಪ್ರವಾಸಿಗರು ಜಿಲ್ಲೆಗೆಪ್ರಯಾಣಿಸದಂತೆಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಮನವಿ ಮಾಡಿದ್ದಾರೆ.

ಜಿಲ್ಲೆಯನ್ನು ಪ್ರವೇಶಿಸುವ ಎಲ್ಲ ರಸ್ತೆಗಳಲ್ಲೂ ಪ್ರವಾಹ, ಗುಡ್ಡ ಕುಸಿತ ಅಥವಾ ಮರ ಬೀಳುವ ಅಪಾಯಕಾರಿ ಸಂದರ್ಭಗಳೇ ಹೆಚ್ಚಿವೆ. ಆದ್ದರಿಂದ ಈ ದಿನಗಳಲ್ಲಿ ಪ್ರಯಾಣಿಸಿಸಂಕಷ್ಟಕ್ಕೆ ಗುರಿಯಾಗಬಾರದು. ಹಾಗಾಗಿ ಪ್ರವಾಸವನ್ನು ಮುಂದೂಡುವಂತೆ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.