ADVERTISEMENT

ಗೋಕರ್ಣ: ಹಬ್ಬಕ್ಕೆ ಸಿದ್ಧ ಪರಿಸರ ಸ್ನೇಹಿ ಗಣಪ

ಗಣಪತಿ ಮೂರ್ತಿ ಮಾಡುವುದೇ ಗುನಗ ಕುಟುಂಬದ ಕಸುಬು

ರವಿ ಸೂರಿ
Published 29 ಆಗಸ್ಟ್ 2022, 19:31 IST
Last Updated 29 ಆಗಸ್ಟ್ 2022, 19:31 IST
ಗೋಕರ್ಣದ ವಿಠಲ ಗುನಗ ಅವರ ಮನೆಯಲ್ಲಿ ಹಬ್ಬಕ್ಕೆ ತಯಾರಾದ ಗಣಪತಿ ಮೂರ್ತಿಗಳು, ವಿನಾಯಕ ಗುನಗ ಅವರ ಕೈಚಳಕದಲ್ಲಿ ಅರಳಿದ ಬಾಲ ಗಣಪ
ಗೋಕರ್ಣದ ವಿಠಲ ಗುನಗ ಅವರ ಮನೆಯಲ್ಲಿ ಹಬ್ಬಕ್ಕೆ ತಯಾರಾದ ಗಣಪತಿ ಮೂರ್ತಿಗಳು, ವಿನಾಯಕ ಗುನಗ ಅವರ ಕೈಚಳಕದಲ್ಲಿ ಅರಳಿದ ಬಾಲ ಗಣಪ   

ಗೋಕರ್ಣ: ಗಣಪತಿ ಮೂರ್ತಿ ಮಾಡಲು ಗೋಕರ್ಣದಲ್ಲಿ ಬಹಳ ಪ್ರಸಿದ್ಧಿ ಪಡೆದಿರುವುದು ಗುನಗ ಕುಟುಂಬ. ಪರಿಸರ ಸ್ನೇಹಿ ಗಣಪತಿ ಮೂರ್ತಿ ತಯಾರಿಸುವುದು ಇವರ ಕುಲಕಸುಬು.

ಶತಮಾನದ ಹಿಂದಿನಿಂದಲೂ ಪರಿಸರಕ್ಕೆ ಧಕ್ಕೆಯಾಗದಂತೆ ಮಣ್ಣಿನ ಗಣಪತಿ ಮೂರ್ತಿಗಳನ್ನು ತಯಾರಿಸುತ್ತಾ ಬಂದಿದ್ದಾರೆ. ಸುಮಾರು ಐದು ತಲೆಮಾರುಗಳಿಂದಲೂ ಗಣಪತಿ ಮೂರ್ತಿ ಮಾಡುವುದೇ ಈ ಕುಟುಂಬದ ಮುಖ್ಯ ಕಾಯಕ.

ವಿಠಲ ಗುನಗ, ವಿನಾಯಕ ಗುನಗ ಎಂಬ ಎರಡು ಕುಟುಂಬಗಳು ಗೋಕರ್ಣದಲ್ಲಿದ್ದು, ಇಬ್ಬರೂ ಸೇರಿ ಸುಮಾರು 1,000 ಗಣಪತಿ ಮೂರ್ತಿಗಳನ್ನು ತಯಾರಿಸುತ್ತಾರೆ. ಇದಕ್ಕಾಗಿ ಇವರು ಹಬ್ಬಕ್ಕೆ ಮೂರು ತಿಂಗಳು ಇರುವಾಗಲೇ ಕಾರ್ಯ ಪ್ರವರ್ತರಾಗುತ್ತಾರೆ.

ADVERTISEMENT

ಗಣಪತಿ ಮೂರ್ತಿ ಮಾರಾಟದಿಂದ ಬಂದ ಹಣದಿಂದಲೇ ವರ್ಷ ಪೂರ್ತಿ ಇವರ ಜೀವನ ಸಾಗಬೇಕು. ಜೀವನ ನಡೆಸಲು ಎಷ್ಟೇ ಕಷ್ಟವಾದರೂ ಇದೇ ವೃತ್ತಿಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ.ವಿಠಲ ಗುನಗ ಅವರ ಮಗ ರವಿ ಕಲಾಕಾರರಾಗಿ ನಾಡಿನಾದ್ಯಂತ ಪ್ರಸಿದ್ಧಿ ಪಡೆದಿದ್ದಾರೆ.

‘ಬೇಡಿಕೆಗೆ ತಕ್ಕಂತೆ ವಿವಿಧ ಭಂಗಿಗಳಲ್ಲಿ ಕುಳಿತಿರುವ, ನಿಂತಿರುವ ಗಣಪತಿ ಮೂರ್ತಿಯನ್ನು ಆಕರ್ಷಕವಾಗಿ ತಯಾರಿಸುವುದು ಭಕ್ತರ ಮೆಚ್ಚುಗೆಗೆ ಕಾರಣವಾಗಿದೆ. ನಾವು ಬಳಸುವ ಬಣ್ಣಗಳೂ
ಯಾವುದೇ ರಾಸಾಯನಿಕವಲ್ಲ. ನೀರಿನಲ್ಲಿ ಹಾಕಿದರೂ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ’ ಎನ್ನುತ್ತಾರೆ ಕಲಾವಿದವಿಠಲ
ಗುನಗ.

ಸುತ್ತಮುತ್ತಲಿನ ಹಳ್ಳಿಯವರೆಲ್ಲಾ ಇವರ ಹತ್ತಿರವೇ ಗಣಪತಿ ತೆಗೆದುಕೊಳ್ಳುತ್ತಾರೆ. ಹಬ್ಬ ಸಮೀಪಿಸುತ್ತಿದ್ದಂತೆಯೇ ಮನೆಯ ಹೆಂಗಸರು, ಮಕ್ಕಳೂ ಇವರಿಗೆ ಕೈ ಜೋಡಿಸಿ ಗಣಪತಿ ಮೂರ್ತಿ ಮಾಡಲು ಸಹಾಯ ಮಾಡುತ್ತಾರೆ. ವಿಶೇಷವೆಂದರೆ ಇವರಲ್ಲಿ ಹಣದ ಬೇಡಿಕೆ ಕಡಿಮೆ. ಮೂರ್ತಿ ತೆಗೆದುಕೊಂಡು ಹೋದವರು ಕೊಟ್ಟಷ್ಟು ಹಣವನ್ನು ಇವರು ಪಡೆಯುತ್ತಾರೆ ಎಂಬುದು ಸ್ಥಳೀಯರು ಗುನಗ ಕುಟುಂಬದ ಬಗ್ಗೆ ಹೇಳುವ ಹೆಮ್ಮೆಯ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.