ADVERTISEMENT

ಶಿವನಾಮ ಘೋಷದೊಂದಿಗೆ ಬ್ರಹ್ಮರಥೋತ್ಸವ ಸಂಪನ್ನ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2019, 12:33 IST
Last Updated 7 ಮಾರ್ಚ್ 2019, 12:33 IST
ಗೋಕರ್ಣದ ರಥಬೀದಿಯಲ್ಲಿ ಮಹಾಬಲೇಶ್ವರ ದೇವರ ರಥವನ್ನು ಸಾವಿರಾರು ಭಕ್ತರು ಗುರುವಾರ ಎಳೆದರು
ಗೋಕರ್ಣದ ರಥಬೀದಿಯಲ್ಲಿ ಮಹಾಬಲೇಶ್ವರ ದೇವರ ರಥವನ್ನು ಸಾವಿರಾರು ಭಕ್ತರು ಗುರುವಾರ ಎಳೆದರು   

ಗೋಕರ್ಣ: ಮಹಾಶಿವರಾತ್ರಿಯ ಅಂಗವಾಗಿ ಇಲ್ಲಿನ ಮಹಾಬಲೇಶ್ವರ ದೇವಸ್ಥಾನದಲ್ಲಿ ಗುರುವಾರ ಬ್ರಹ್ಮರಥೋತ್ಸವವನ್ನು ಶ್ರದ್ಧಾ ಭಕ್ತಿಯಿಂದ ನೆರವೇರಿಸಲಾಯಿತು. ಸಾವಿರಾರು ಭಕ್ತರು ತೇರೆಳೆದು ಭಕ್ತಿ ಸಮರ್ಪಿಸಿದರು.

ರಥಬೀದಿಯಲ್ಲಿ ಸಾಗಿದ ರಥದಲ್ಲಿ ಮುಖ್ಯ ದೇವರಾದ ಮಹಾಬಲೇಶ್ವರನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ವೆಂಕಟ್ರಮಣ ದೇವಸ್ಥಾನದವರೆಗೆ ಸಾಗಿದ ರಥವನ್ನು ತಿರುಗಿ ಮೂಲಸ್ಥಾನಕ್ಕೆ ತಂದು ನಿಲ್ಲಿಸಲಾಯಿತು. ಎತ್ತರದ ರಥ ಎಂದೇ ಪ್ರಸಿದ್ಧಿಯಾಗಿರುವ, ಅತಿ ಪುರಾತನ ರಥವನ್ನು ಬಣ್ಣ– ಬಣ್ಣದ ಬಾವುಟಗಳಿಂದ, ತಳಿರು–ತೋರಣಗಳಿಂದ, ಹೂವಿನಿಂದ ಆಕರ್ಷಕವಾಗಿ ಶೃಂಗರಿಸಲಾಗಿತ್ತು.

ಸ್ಥಳೀಯರೇ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ನೂರಾರು ವಿದೇಶಿಯರೂ ಕುಣಿದು ಸಂಭ್ರಮಿಸಿದರು. ರಥೋತ್ಸವ ಸಾಗಿದ ದಾರಿಯುದ್ದಕ್ಕೂ‘ಹರ ಹರ ಮಹಾದೇವ’ ಎಂಬ ಶಿವಸ್ತುತಿಗಳನ್ನು ಭಕ್ತರು ಪಠಿಸಿದರು.

ADVERTISEMENT

ರಸ್ತೆಯ ಎರಡೂ ಪಕ್ಕದಲ್ಲಿ ಮನೆಗಳ ಮಹಡಿಗಳ ಮೇಲೆ ನಿಂತಿದ್ದಭಕ್ತರು ಫೋಟೊ ತೆಗೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಈ ಬಾರಿ ಪ್ರತಿ ವರ್ಷಕ್ಕಿಂತ ಮೊದಲೇ ರಥೋತ್ಸವಸಂಪನ್ನಗೊಂಡಕಾರಣ ಅನೇಕಭಕ್ತರು ರಥೋತ್ಸವದ ಕ್ಷಣಗಳಿಂದ ವಂಚಿತರಾದರು.

ಕಂದಾಯ ಇಲಾಖೆ, ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿದ್ದು, ಯಾವುದೇ ಅಹಿತಕರ ಘಟನೆಗಳು ಆಗದಂತೆ ನೋಡಿಕೊಂಡರು. ಪೊಲೀಸರು ಹೆಚ್ಚಿನ ಭದ್ರತೆ ಒದಗಿಸಿ ಶಾಂತ ರೀತಿಯಲ್ಲಿ ರಥೋತ್ಸವ ನಡೆಯುವಂತೆ ನೋಡಿಕೊಂಡು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.