ADVERTISEMENT

ಕಾರವಾರ: ಮುಂದುವರಿದ ಮಳೆ, ಕದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 13 ಜೂನ್ 2020, 2:14 IST
Last Updated 13 ಜೂನ್ 2020, 2:14 IST
ನದಿಭಾಗದ ಮನೆಗಳಿಗೆ ನೀರು ನುಗ್ಗಿರುವುದು
ನದಿಭಾಗದ ಮನೆಗಳಿಗೆ ನೀರು ನುಗ್ಗಿರುವುದು   

ಕಾರವಾರ:ಕರಾವಳಿಯಲ್ಲಿ ಭಾರಿ ಮಳೆ ಮುಂದುವರಿದಿದೆ. ಶುಕ್ರವಾರ ದಿನವಿಡೀ ಸುರಿದಿದ್ದ ವರ್ಷಧಾರೆಯು ರಾತ್ರಿ ಸ್ವಲ್ಪ ಬಿಡುವು ನೀಡಿತ್ತು. ಶನಿವಾರ ಮುಂಜಾನೆಯಿಂದಲೇ ಜೋರಾಗಿ ಮಳೆ ಬೀಳುತ್ತಿದೆ.

ತಾಲ್ಲೂಕಿನ ಕದ್ರಾ ಜಲಾಶಯಕ್ಕೆ ಒಳಹರಿವು ಏರಿಕೆಯಾಗಿದೆ. 34.50 ಮೀಟರ್ ಗರಿಷ್ಠ ಎತ್ತರದ ಜಲಾಶಯದಲ್ಲಿ ಶುಕ್ರವಾರ 30.15 ಮೀಟರ್ ನೀರು ಸಂಗ್ರಹವಾಗಿತ್ತು. ಕಳೆದ ವರ್ಷ ಪ್ರವಾಹದ ಸಂದರ್ಭದ ಅನುಭವದ ಮೇರೆಗೆ ಈ ವರ್ಷ ಜಲಾಶಯದಲ್ಲಿ ಗರಿಷ್ಠ 32.50 ಮೀಟರ್ ನಷ್ಟೇ ನೀರು ಸಂಗ್ರಹಿಸಲು ಜಿಲ್ಲಾಡಳಿತ ಮತ್ತು ಕೆಪಿಸಿಎಲ್ ಅಧಿಕಾರಿಗಳ ಜಂಟಿ ಸಮಿತಿ ನಿರ್ಧರಿಸಿದೆ. ಹಾಗಾಗಿ ಮಳೆ ಇದೇ ಪ್ರಮಾಣದಲ್ಲಿ ಮುಂದುವರಿದರೆ ಶೀಘ್ರವೇ ನಿಗದಿತ ಮಟ್ಟಕ್ಕೆ ನೀರು ತಲುಪುವ ಸಾಧ್ಯತೆಯಿದೆ.

ಕರ್ನಾಟಕದ ವಿದ್ಯುತ್ ನಿಗಮವು ಜಲಾಶಯದ ಕೆಳಗಿನ ಭಾಗದ ನಿವಾಸಿಗಳಿಗೆ ಮೊದಲ ಮುನ್ಸೂಚನೆ ನೀಡಿದ್ದು, ಜಲಾಶಯದ ಸುರಕ್ಷತೆಯ ದೃಷ್ಟಿಯಿಂದ ಹೆಚ್ಚುವರಿ ನೀರನ್ನು ಹೊರ ಬಿಡಲಾಗುವುದು ಎಂದು ತಿಳಿಸಿದೆ. ಕಾಳಿ ನದಿಯ ಇಕ್ಕೆಲಗಳಲ್ಲಿ ವಾಸಿಸುತ್ತಿರುವವರು ತಮ್ಮ ಜಾನುವಾರುಗಳೊಂದಿಗೆ ಸುರಕ್ಷಿತ ಪ್ರದೇಶಕ್ಕೆ ತೆರಳುವಂತೆ ಸೂಚಿಸಿದೆ.

ಅಂಕೋಲಾ ತಾಲ್ಲೂಕಿನಲ್ಲಿ ಶುಕ್ರವಾರ ಸಂಜೆ ಭಾರಿ ಮಳೆಯಿಂದ ನದಿಬಾಗ ಪ್ರದೇಶದಲ್ಲಿ ಹಳ್ಳ ಉಕ್ಕಿ ಹರಿದು ಸುಮಾರು 40 ಮನೆಗಳು ಜಲಾವೃತವಾಗಿದ್ದವು. ಸ್ಥಳೀಯರು ಹಳ್ಳದ ಕೋಡಿ ಒಡೆದು ನೀರು ಸಮುದ್ರಕ್ಕೆ ಸೇರುವಂತೆ ಮಾಡಿದ ಬಳಿಕ ನಿವಾಸಿಗಳು ನಿಟ್ಟುಸಿರು ಬಿಟ್ಟರು.

ನದಿಬಾಗದ ಶಾಲೆಯಲ್ಲಿ ಪರಿಹಾರ ಕೇಂದ್ರ ತೆರೆಯಲಾಗಿದ್ದು, ಸುಮಾರು 80 ಜನರನ್ನು ಅಲ್ಲಿಗೆ ಸ್ಥಳಾಂತರಿಸಲಾಗಿತ್ತು. ತಾಲ್ಲೂಕು ಆಡಳಿತದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.