
ಗೋಕರ್ಣ: ಮಳೆಗಾಲ ಪ್ರಾರಂಭವಾಗಿ ಶುಕ್ರವಾರ ಸುರಿದ ಪ್ರಥಮ ರಭಸದ ಮಳೆಗೇ ಗೋಕರ್ಣದ ಹಲವು ಕಡೆ ನೀರು ತುಂಬಿ ಪರದಾಡುವ ಸ್ಥಿತಿ ಉಂಟಾಯಿತು. ಮಹಾಬಲೇಶ್ವರನ ಗರ್ಭಗುಡಿಯೂ ಜಲಾವೃತವಾಗಿ, ಆತ್ಮಲಿಂಗ ಗಂಟೆಗಳ ಕಾಲ ರಾಡಿ ನೀರಿನಿಂದ ಮುಳುಗಿತ್ತು.
ಒಂದು ಗಂಟೆ ಕಾಲ ಭಕ್ತರಿಗೆ ಆತ್ಮಲಿಂಗದ ದರ್ಶನಕ್ಕೆ ಅವಕಾಶ ನಿಲ್ಲಿಸಲಾಗಿತ್ತು. ಸಮುದ್ರದಲ್ಲೂ ಭರತವಿದ್ದು, ಸಂಗಮದ ನಾಲೆಯಿಂದ ಬಂದ ಮಳೆಯ ನೀರು ಸಮುದ್ರಕ್ಕೆ ಸೇರದಿರುವುದೇ ಇದಕ್ಕೆ ಕಾರಣವಾಗಿತ್ತು. ಆ ನೀರು ಗರ್ಭಗುಡಿಯಿಂದ ತೀರ್ಥ ಹೊರಹೋಗುವ ಸೋಮಸೂತ್ರದಿಂದ ಒಳನುಗ್ಗಿ ಗರ್ಭಗುಡಿ ಜಲಾವೃತವಾಗಿತ್ತು. ನೀರೆಲ್ಲಾ ಹೊರಹಾಕಿದ ಮೇಲೆ ಮಧ್ಯಾಹ್ನ 3 ಗಂಟೆಯ ನಂತರ ಮಹಾಪೂಜೆ ನೆರವೇರಿಸಲಾಯಿತು.
ಪ್ರತಿ ವರ್ಷ ಮಳೆಗಾಲದಲ್ಲಿ ಕೆಲವು ಸಲ ಈ ಸಮಸ್ಯೆಯಾಗುತ್ತಿದ್ದು, ಶಾಸಕರಾಗಲಿ, ಅಧಿಕಾರಿಗಳಾಗಲಿ ಪರಿಹಾರ ದೊರಕಿಸದಿರುವುದು ಭಕ್ತರಲ್ಲಿ ಬೇಸರ ಮೂಡಿಸಿದೆ.
ರಥಬೀದಿ, ಗಂಜಿಗದ್ದೆಯಲ್ಲೂ ರಸ್ತೆಯ ಮೇಲೆ ನೀರು ತುಂಬಿ ಜನರು ಪರದಾಡುವಂತಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.