
ಜೊಯಿಡಾ ತಾಲ್ಲೂಕಿಗೆ ಮೂಲಸೌಕರ್ಯ ಒದಗಿಸುವುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಜೊಯಿಡಾ ಘಟಕದ ವತಿಯಿಂದ ತಹಶೀಲ್ದಾರ್ ಮಂಜುನಾಥ ಮುನ್ನೊಳ್ಳಿ ಅವರಿಗೆ ಮನವಿ ಸಲ್ಲಿಸಲಾಯಿತು
ಜೊಯಿಡಾ: ತಾಲ್ಲೂಕಿಗೆ ಮೂಲಸೌಕರ್ಯಗಳನ್ನು ಒದಗಿಸುವುವಂತೆ ಆಗ್ರಹಿಸಿ ಕರ್ನಾಟಕ ರೈತ ಪ್ರಾಂತ ಸಂಘದ ಜೊಯಿಡಾ ಘಟಕದ ವತಿಯಿಂದ ಕಿರವತ್ತಿಯಿಂದ ಜೊಯಿಡಾ ತಹಶೀಲ್ದಾರ್ ಕಚೇರಿವರೆಗೆ ಸೋಮವಾರ ಪಾದಯಾತ್ರೆ ನಡೆಸಿ, ಮನವಿ ನೀಡಲಾಯಿತು.
ಘಟಕದ ಅಧ್ಯಕ್ಷ ಪ್ರೇಮಾನಂದ ವೇಳಿಪ, ‘ಮೂಲಸೌಕರ್ಯಕ್ಕೆ ಹೋರಾಟ ಮಾಡುವ ದಿನಗಳು ಬಂದಿದ್ದು ದುಃಖಕರ. ಸರ್ಕಾರಕ್ಕೆ ನಾಚಿಕೆ ಆಗಬೇಕು. ಅನೇಕ ಬಾರಿ ಮನವಿ ನೀಡಿದರು ಪ್ರಯೋಜನ ವಾಗಿಲ್ಲ’ ಎಂದು ಆರೋಪಿಸಿದರು.
‘ಕೆಲವು ಗ್ರಾಮಗಳಿಗೆ ಸರಿಯಾದ ಬಸ್ ಸೌಕರ್ಯ, ಬಿಎಸ್ಎನ್ಎಲ್ ಟವರ್ ಇಲ್ಲ. ನ್ಯಾಯ ಬೆಲೆ ಅಂಗಡಿ ನೀಡಬೇಕು. ಅರಣ್ಯ ಪ್ಯಾಕೇಜ್ ಆಮಿಷ ಬಂದ್ ಮಾಡಬೇಕು. ಕುಣಬಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು’ ಎಂದು ಆಗ್ರಹಿಸಿದರು.
ಜಿಲ್ಲಾ ಅಧ್ಯಕ್ಷ ತಿಲಕ್ ಗೌಡ ಮಾತನಾಡಿ,‘ ಜೊಯಿಡಾ ಪ್ರದೇಶವನ್ನು ಸರ್ಕಾರ ಸಂಪೂರ್ಣ ಕಡೆಗಣಿಸಿದೆ. ಸ್ವಾತಂತ್ರ್ಯ ನಂತರವೂ ಮೂಲಸೌಕರ್ಯಕ್ಕಾಗಿ ಹೋರಾಟ ಅನಿವಾರ್ಯವಾಗಿದೆ. ಮುಂದೆ ಸ್ವಾತಂತ್ರ್ಯ ಹೋರಾಟ ಮಾದರಿಯಲ್ಲಿ ಹೋರಾಟ ಆಗಬೇಕು. ಭೂಮಿ ಹಕ್ಕು ಸಿಗಬೇಕು’ ಎಂದರು.
ಜಿಲ್ಲಾ ಕಾರ್ಯದರ್ಶಿಗಳಾದ ಶ್ಯಾಮನಾಥ ನಾಯ್ಕ, ಸ್ಯಾಮಸನ್ ಮಾತನಾಡಿದರು.
ನಾಗೊಡಾ ಗ್ರಾಮ ಪಂಚಾಯಿತಿ ಅಧ್ಯಕ್ಷೆ ದಿವ್ಯಾ ನಾಯ್ಕ, ಸದಸ್ಯ ದಿಗಂಬರ ದೇಸಾಯಿ, ಪ್ರಮುಖರಾದ ವಿಕಾಸ ವೇಳಿಪ, ಸಂತೋಷ ವೇಳಿಪ, ಜಯಂತ ವೇಳಿಪ, ಮಾಬಳು ಕುಂಡಲಕರ, ಕೃಷ್ಣಾ ಮಿರಾಶಿ, ದಯಾನಂದ ಕುಮಗಾಳಕರ, ಪ್ರಧಾನ ಕಾರ್ಯದರ್ಶಿ ರಾಜೇಶ ಗಾವಡಾ ಭಾಗವಹಿಸಿದ್ದರು.
ಇದಕ್ಕೂ ಮುನ್ನ ಕಿರವತ್ತಿಯಿಂದ 11 ಕಿ.ಮೀ. ಪಾದಯಾತ್ರೆಯಲ್ಲಿ ಬಂದ ಪ್ರತಿಭಟನಕಾರರು ತಹಶೀಲ್ದಾರ್ ಕಚೇರಿ ಮುಂಭಾಗದ ಖಾಲಿ ಇರುವ ಪ್ರದೇಶಗಳಲ್ಲಿ ಅಹೋರಾತ್ರಿ ಧರಣಿ ನಡೆಸಿದರು.
ತಹಶೀಲ್ದಾರ್ ಮಂಜುನಾಥ ಮುನ್ನಳ್ಳಿ ಮನವಿ ಸ್ವೀಕರಿಸಿ, ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಸಲ್ಲಿಸುವುದಾಗಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.