ADVERTISEMENT

ಕಾರವಾರ | ಶೋಷಿಸುವ ವ್ಯವಸ್ಥೆ ನಿರ್ಮೂಲನೆಯಾಗಲಿ: ದಿವ್ಯಶ್ರೀ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 6:37 IST
Last Updated 17 ಫೆಬ್ರುವರಿ 2026, 6:37 IST
ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆ ದಜೀತ ಪದ್ಧತಿ ನಿರ್ಮೂಲನೆ ಜಾಗೃತಿ ಕಾರ್ಯಾಗಾರದಲ್ಲಿ ಅಧಿಕಾರಿಗಳಿಗೆ ಹಿರಿಯ ಸಿವಿಲ್ ನ್ಯಾಯಾಧೀಶೆ ದಿವ್ಯಶ್ರೀ ಸಿ.ಎಂ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು.
ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆ ದಜೀತ ಪದ್ಧತಿ ನಿರ್ಮೂಲನೆ ಜಾಗೃತಿ ಕಾರ್ಯಾಗಾರದಲ್ಲಿ ಅಧಿಕಾರಿಗಳಿಗೆ ಹಿರಿಯ ಸಿವಿಲ್ ನ್ಯಾಯಾಧೀಶೆ ದಿವ್ಯಶ್ರೀ ಸಿ.ಎಂ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು.   

ಕಾರವಾರ:‘ಜನರನ್ನು ಶೋಷಿಸುವ, ಕೀಳರಿಮೆ ಮೂಡಿಸಲು ಕಾರಣವಾಗುವ ಜೀತ ಪದ್ಧತಿಗೆ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ದಿವ್ಯಶ್ರೀ ಸಿ.ಎಂ. ಹೇಳಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತವು ಜೀತ ಪದ್ದತಿ ನಿರ್ಮೂಲನಾ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಕೃಷಿ, ಉದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಜೀತ ಪದ್ಧತಿ ಇಂದಿಗೂ ಜೀವಂತವಿದೆ. ಒಬ್ಬರನ್ನು ನಿಕೃಷ್ಟರಂತೆ ಕಾಣುವ ಇಂತಹ ವ್ಯವಸ್ಥೆ ಪ್ರಜಾಪ್ರಭುತ್ವ ವ್ಯವಸ್ಥೆಯ ಅಣಕ. ಅಲ್ಲದೇ, ಶೋಷಿತರನ್ನು ಮತ್ತಷ್ಟು ಶೋಷಿಸುವ ವ್ಯವಸ್ಥೆ. ಅಂತಹ ವ್ಯವಸ್ಥೆ ನಿರ್ಮೂಲನೆಗೆ ಪರಿಣಾಮಕಾರಿ ಜಾಗೃತಿಯೇ ದಾರಿ’ ಎಂದರು.

ADVERTISEMENT

‘ಜೀತ ಪದ್ದತಿ ನಿಷೇಧ ಕಾಯ್ದೆ ಜಾರಿಗೆ ಬಂದು 50 ವರ್ಷ ಕಳೆದರೂ ದೇಶದಲ್ಲಿ ಜೀತ ಪದ್ದತಿ ಜೀವಂತವಾಗಿದೆ. ಜೀತ ಪದ್ಧತಿ  ನಿರ್ಮೂಲನೆ ಮಾಡಲು ಸಾಮೂಹಿಕ ಜವಾಬ್ದಾರಿ ಹೊರಬೇಕು. ಸಮಾಜ ಒಗ್ಗೂಡಿ ಜೀತ ಪದ್ದತಿಗೆ ಸಿಲುಕಿ ಸಂಕಷ್ಟಕ್ಕೆ ಒಳಗಾದ ಜನರಿಗೆ ನ್ಯಾಯ ಒದಗಿಸಲು ಕಾರ್ಯನಿರ್ವಹಿಸಬೇಕು’ ಎಂದರು.

ಜೀತ ಪದ್ಧತಿ ನಿರ್ಮೂಲನೆ ಕುರಿತು ಉಪನ್ಯಾಸ ನೀಡಿದ ಕ್ರಿಸ್ಟೋಫರ್ ಸ್ಟ್ಯಾನಿ, ‘ಜೀತ ಪದ್ದತಿಯ ಸ್ವರೂಪದ ಬಗ್ಗೆ ಅಧಿಕಾರಿಗಳು ವಿವರವಾಗಿ ತಿಳಿದುಕೊಳ್ಳಬೇಕು. ಜನರ ಶೋಷಣೆ ನಡೆಯುತ್ತಿದ್ದು, ಅನಕ್ಷರತೆ, ಬಡತನ, ನಿರುದ್ಯೋಗ ಸಮಸ್ಯೆಯನ್ನು ದುರುಪಯೋಗ ಪಡೆದುಕೊಂಡು ಜೀತ ಪದ್ದತಿಗೆ ಒಳಪಡಿಸಲಾಗುತ್ತದೆ. ಮಾನವ ಕಳ್ಳ ಸಾಗಣೆಗೂ ಇದು ಕಾರಣವಾಗಿದೆ’ ಎಂದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಪ್ರಕಾಶ ಹಾಲಮ್ಮನವರ್, ಚುನಾವಣೆ ಶಾಖೆಯ ತಹಶೀಲ್ದಾರ ಪ್ರಮೋದ ನಾಯ್ಕ, ಕಾರ್ಮಿಕ ಇಲಾಖೆ ಅಧಿಕಾರಿಗಳಾದ ಲಲಿತಾ ಸಾತೇನಹಳ್ಳಿ, ವೀಣಾ ಮಾಸ್ತಿ, ಸಂಪನ್ಮೂಲ ವ್ಯಕ್ತಿ ಚೈತ್ರ ವೆಂಕಟೇಶ, ಇತರರು ಪಾಲ್ಗೊಂಡಿದ್ದರು.

ಬಡತನ ಶಿಕ್ಷಣ ನಿರುದ್ಯೋಗ ಸಾಲದ ಸುಳಿವು ಜಾತಿ ಪದ್ಧತಿ ಜೀತ ಪದ್ದತಿ ಜೀವಂತವಿರಲು ಕಾರಣವಾಗುತ್ತಿದೆ. ಇವೆಲ್ಲ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು
ದಿವ್ಯಶ್ರೀ ಸಿ.ಎಂ ಹಿರಿಯ ಸಿವಿಲ್ ನ್ಯಾಯಾಧೀಶೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.