ADVERTISEMENT

ಕಾರವಾರ: ಅಬ್ಬರಿಸುತ್ತಿರುವ 'ತೌಕ್ತೆ' ಚಂಡಮಾರುತ, ಅಪಾರ ಹಾನಿ

​ಪ್ರಜಾವಾಣಿ ವಾರ್ತೆ
Published 16 ಮೇ 2021, 4:02 IST
Last Updated 16 ಮೇ 2021, 4:02 IST
ಶನಿವಾರ ತಡರಾತ್ರಿಯಿಂದ ಮಳೆ ಕಡಿಮೆಯಾಗಿದ್ದರೂ ಭಾರಿ ವೇಗದಲ್ಲಿ ಗಾಳಿ ಬೀಸುತ್ತಿದೆ.
ಶನಿವಾರ ತಡರಾತ್ರಿಯಿಂದ ಮಳೆ ಕಡಿಮೆಯಾಗಿದ್ದರೂ ಭಾರಿ ವೇಗದಲ್ಲಿ ಗಾಳಿ ಬೀಸುತ್ತಿದೆ.   

ಕಾರವಾರ: 'ತೌಕ್ತೆ' ಚಂಡಮಾರುತವು ಕಾರವಾರ ಸುತ್ತಮುತ್ತ ಅಬ್ಬರಿಸುತ್ತಿದೆ. ಶನಿವಾರ ತಡರಾತ್ರಿಯಿಂದ ಮಳೆ ಕಡಿಮೆಯಾಗಿದ್ದರೂ ಭಾರಿ ವೇಗದಲ್ಲಿ ಗಾಳಿ ಬೀಸುತ್ತಿದೆ. ಹಲವು ಬೃಹತ್ ಮರಗಳು ಬುಡಮೇಲಾಗಿ ರಸ್ತೆಗೆ ಅಡ್ಡಲಾಗಿ ಬಿದ್ದಿವೆ.

ಕಾರವಾರದ ಹಬ್ಬುವಾಡದಲ್ಲಿ ದೊಡ್ಡ ಮರವೊಂದು ರಾಜ್ಯ ಹೆದ್ದಾರಿ ಮೇಲೆ ಬಿದ್ದ ಪರಿಣಾಮ, ಅಗತ್ಯ ವಸ್ತುಗಳಾದ ಹಾಲು, ತರಕಾರಿ ಮುಂತಾದವುಗಳ ಪೂರೈಕೆಗೆ ಅಡ್ಡಿಯಾಗಿತ್ತು. ನಗರಸಭೆ ಸಿಬ್ಬಂದಿ ಮರವನ್ನು ತೆರವು ಮಾಡಿದರು. ಈ ರೀತಿ ನಗರದ ಹಲವೆಡೆ ಮರಗಳು, ಟೊಂಗೆಗಳು ಮುರಿದಿವೆ.

ನೂರಾರು ವಿದ್ಯುತ್ ಕಂಬಗಳು, ಪರಿವರ್ತಕಗಳಿಗೂ ಹಾನಿಯಾಗಿದ್ದು, ನಗರದಲ್ಲಿ ಶನಿವಾರ ರಾತ್ರಿಯಿಂದಲೇ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. ಹಲವು ಮನೆಗಳಿಗೆ ಹೊದಿಸಲಾಗಿದ್ದ ಕಬ್ಬಿಣದ ಶೀಟುಗಳು ಗಾಳಿಯ ಅಬ್ಬರಕ್ಕೆ ಸಿಲುಕಿ ಹಾರಿಹೋಗಿವೆ.

ADVERTISEMENT

ಸಮುದ್ರದ ಅಲೆಗಳು ಬೃಹದಾಕಾರ ತಾಳಿದ್ದು, ದಡದಲ್ಲಿ ಸಾಕಷ್ಟು ಮುಂದಕ್ಕೆ ಬಂದು ಅಪ್ಪಳಿಸುತ್ತಿವೆ. ಇದರ ಪರಿಣಾಮ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳದ ಹಲವು ಕಡೆಗಳಲ್ಲಿ ಕಡಲ್ಕೊರೆತ ಶುರುವಾಗಿದೆ.

ಕುಮಟಾದ ಶಶಿ ಹಿತ್ತಲು ಹಾಗೂ ಕಲಭಾಗ ಪ್ರದೇಶಕ್ಕೆ ಸಮುದ್ರದ ನೀರು ನುಗ್ಗಿದ್ದು ಹಲವು ಕುಟುಂಬಗಳನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಹೊನ್ನಾವರ ತಾಲ್ಲೂಕಿನ ಪಾವಿನಕುರ್ವಾದಲ್ಲಿ ಪರಿಹಾರ ಕೇಂದ್ರದಲ್ಲಿ ಸುಮಾರು 50 ಮಂದಿ ಆಶ್ರಯ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.