ADVERTISEMENT

ಕಾರವಾರ | 60 ದಿನಗಳ ಬಳಿಕ ಕಡಲಿಗಿಳಿದ ಬೋಟುಗಳು: ಸಮಾಧಾನ ತಂದ ಸಿಗಡಿ ರಾಶಿ

ಟ್ರಾಲರ್ ದೋಣಿಗಳಿಂದ ಬೇಟೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2025, 6:30 IST
Last Updated 2 ಆಗಸ್ಟ್ 2025, 6:30 IST
ಕಾರವಾರದ ಬೈತಕೋಲ ಮೀನುಗಾರಿಕೆ ಬಂದರಿನಲ್ಲಿ ಸಿಗಡಿ ಮೀನುಗಳನ್ನು ಬುಟ್ಟಿಗೆ ತುಂಬಿ, ಕೆಳಕ್ಕೆ ಬೀಳದಂತೆ ಕಾರ್ಮಿಕರು ಸರಿಪಡಿಸಿದರು 
ಕಾರವಾರದ ಬೈತಕೋಲ ಮೀನುಗಾರಿಕೆ ಬಂದರಿನಲ್ಲಿ ಸಿಗಡಿ ಮೀನುಗಳನ್ನು ಬುಟ್ಟಿಗೆ ತುಂಬಿ, ಕೆಳಕ್ಕೆ ಬೀಳದಂತೆ ಕಾರ್ಮಿಕರು ಸರಿಪಡಿಸಿದರು    

ಕಾರವಾರ: 60 ದಿನಗಳ ನಿಷೇಧ ಅವಧಿ ಮುಗಿದ ಬೆನ್ನಲ್ಲೇ ಮೀನು ಬೇಟೆಗೆ ಸಮುದ್ರಕ್ಕೆ ಇಳಿದ ಟ್ರಾಲರ್ ಬೋಟುಗಳು ಮೊದಲ ದಿನ ಸಮಾಧಾನಕರ ಎನ್ನುವಷ್ಟು ಪ್ರಮಾಣದಲ್ಲಿ ಸಿಗಡಿ ಮೀನು ಹಿಡಿದು ತಂದವು.

ಇಲ್ಲಿನ ಬೈತಕೋಲ ಮೀನುಗಾರಿಕೆ ಬಂದರು ಸೇರಿದಂತೆ ಬೇಲೆಕೇರಿ, ತದಡಿ, ಹೊನ್ನಾವರ, ಭಟ್ಕಳದ ಬಂದರುಗಳಿಂದ ಟ್ರಾಲರ್ ಬೋಟುಗಳು ಶುಕ್ರವಾರದಿಂದ ಮೀನುಗಾರಿಕೆ ಚಟುವಟಿಕೆ ಆರಂಭಿಸಿವೆ. ಬಹುತೇಕ ಬೋಟುಗಳಿಗೆ ಉತ್ತಮ ಪ್ರಮಾಣದಲ್ಲಿ ಕೆಂಪು ಸಿಗಡಿ (ತೇಮ್ಲಿ) ಮೀನುಗಳ ರಾಶಿ ಲಭಿಸಿದೆ.

ಜೂನ್ 1 ರಿಂದ ಯಾಂತ್ರೀಕೃತ ಮೀನುಗಾರಿಕೆ ನಿಷೇಧ ಅವಧಿ ಜಾರಿಯಾಗಿದ್ದರಿಂದ ಮೀನುಗಾರಿಕೆ ಬೋಟುಗಳು ಬಂದರು ಪ್ರದೇಶದಲ್ಲಿ ಲಂಗರು ಹಾಕಿದ್ದವು. 15 ದಿನಗಳಿಂದ ಬೋಟುಗಳನ್ನು ಶುಚಿಗೊಳಿಸಿ, ಪರಿಕರಗಳನ್ನು ಸಿದ್ಧಪಡಿಸಿಕೊಂಡಿದ್ದ ಮೀನುಗಾರರು ನಸುಕಿನ ಜಾವವೇ ಆಳ ಸಮುದ್ರದತ್ತ ಸಾಗಿದ್ದರು.

ADVERTISEMENT

‘ಟ್ರಾಲರ್ ಬೋಟುಗಳು ತೀರಾ ಆಳ ಸಮುದ್ರದತ್ತ ಸಾಗದೆ, ದಡದಿಂದ 10 ನಾಟಿಕಲ್ ವ್ಯಾಪ್ತಿಯೊಳಗೆ ಆರಂಭದಲ್ಲಿ ಮೀನುಗಾರಿಕೆ ನಡೆಸಿವೆ. ಎರಡು ವಾರಗಳಿಂದ ಸಮುದ್ರದಲ್ಲಿ ಉಂಟಾಗಿದ್ದ ಚಂಡಮಾರುತ ತಗ್ಗಿದ್ದರಿಂದ ಅಲೆಗಳ ರಭಸವೂ ಕಡಿಮೆ ಇರುವುದು ಮೀನುಗಾರಿಕೆಗೆ ಅನುಕೂಲವಾಯಿತು. ಉತ್ತಮ ಮಳೆ, ವೇಗದ ಗಾಳಿ ಬೀಸಿದ್ದರಿಂದ ನಿರೀಕ್ಷಿತ ಪ್ರಮಾಣದ ಮೀನುಗಳು ಮೊದಲ ದಿನ ಲಭಿಸಿವೆ’ ಎಂದು ಟ್ರಾಲರ್ ಬೋಟ್ ಮಾಲೀಕ ಸಂಪತ್ ಹರಿಕಂತ್ರ ತಿಳಿಸಿದರು.

‘ಮೀನುಗಳ ಲಭ್ಯತೆ ಉತ್ತಮ ಎನಿಸಿದ್ದರೂ ಈ ಹಿಂದಿನ ವರ್ಷಕ್ಕೆ ಹೋಲಿಸಿದರೆ ಪ್ರಮಾಣ ಕಡಿಮೆಯೇ ಇದೆ. ಹಿಂದೆಲ್ಲ ₹135–₹140 ದರಕ್ಕೆ ಮಾರಾಟವಾಗುತ್ತಿದ್ದ ಪ್ರಗತಿ ಕೆಜಿ ಸಿಗಡಿ ದರ ಈ ಬಾರಿ ₹110ಕ್ಕೆ ಇಳಿಕೆಯಾಗಿದೆ. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಸಮಾಧಾನಕರ ದರ ಎನ್ನಬಹುದು’ ಎಂದರು.

ಮೀನುಗಾರಿಕೆ ಚಟುವಟಿಕೆ ಇಲ್ಲದೆ ಭಣಗುಡುತ್ತಿದ್ದ ಬಂದರಿನಲ್ಲಿ ಕಾರ್ಮಿಕರು, ವ್ಯಾಪಾರಿಗಳ ಸಂತೆಯೇ ನೆರೆಯಲಾರಂಭಿಸಿದೆ. ಮೊದಲ ದಿನ ಮೀನು ಸಾಗಾಟದ ವಾಹನಗಳ ಓಡಾಟದಿಂದ ಬಂದರು ರಸ್ತೆಯಲ್ಲಿ ಸಂಚಾರ ದಟ್ಟಣೆಯೂ ಉಂಟಾಗಿದೆ. 

ಬೈತಕೋಲ ಮೀನುಗಾರಿಕೆ ಬಂದರಿನಲ್ಲಿ ಅಡುಗೆ ಸಿಲಿಂಡರ್‌ ಬೆಂಕಿ ಹೊತ್ತಿಕೊಂಡು ಉರಿಯಿತು 

ಆತಂಕ ಸೃಷ್ಟಿಸಿದ ಬೆಂಕಿ ಅವಘಡ

ಮೀನುಗಾರಿಕೆ ಮುಗಿಸಿ ಬಂದರಿಗೆ ಮರಳಿದ್ದ ಟ್ರಾಲರ್ ಬೋಟ್‌ವೊಂದರಲ್ಲಿ ಅಡುಗೆಗೆ ಇಟ್ಟುಕೊಂಡಿದ್ದ ಸಿಲಿಂಡರ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಉಂಟಾಯಿತು. ತಕ್ಷಣವೇ ಬೋಟ್‌ನಲ್ಲಿದ್ದ ಕಾರ್ಮಿಕರು ಹೊತ್ತಿ ಉರಿಯುತ್ತಿದ್ದ ಸಿಲಿಂಡರ್ ಸಮುದ್ರಕ್ಕೆ ಎಸೆದರು. ಸಮುದ್ರದಲ್ಲಿ ಬಿದ್ದಿದ್ದ ಸಿಲಿಂಡರ್ ಹಲವು ನಿಮಿಷಗಳ ಕಾಲ ಧಗ ಧಗನೆ ಉರಿದಿತ್ತು. ಮುನ್ನೆಚ್ಚರಿಕೆಯಾಗಿ ಬೋಟುಗಳನ್ನು ದೂರಕ್ಕೆ ಸಾಗಿಸಲಾಯಿತು. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ಆರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.