ಕುಮಟಾ: ‘ಪತ್ರಿಕೆಗಳ ವರದಿ ಆಧರಿಸಿ ಸಮಾಜದಲ್ಲಿ ಎಷ್ಟೋ ಅಭಿವೃದ್ಧಿ ಕಾರ್ಯ ಕೈಕೊಳ್ಳಲು ಸಾಧ್ಯವಾಗಿರುವುದು ಹೆಮ್ಮೆಯ ಸಂಗತಿ’ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.
ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಘಟಕದಿಂದ ಸೋಮವಾರ ಪಟ್ಟಣದ ಹನುಮಂತ ಬೆಣ್ಣೆ ನೆಲ್ಲಿಕೇರಿ ಸರ್ಕಾರಿ ಪದವಿ ಪೂರ್ವ ಕಾಲೇಜಿಲ್ಲಿ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಪತ್ರಿಕೆಗಳಲ್ಲಿ ಪ್ರಕಟವಾದ ಸಮಸ್ಯೆಗಳ ವರದಿಗಳನ್ನು ತೋರಿಸಿದಾಗ ಸಂಬಂಧಿಸಿದ ಸಚಿವರು ಹಾಗೂ ಹಿರಿಯ ಅಧಿಕಾರಿಗಳು ಹಣ ಬಿಡುಗಡೆ ಮಾಡಿ ನೆರವಾದ ನಿದರ್ಶನಗಳಿಗೆ. ಹಾಗಾಗಿ ಸಮಾಜದಲ್ಲಿ ದಿನ ಪತ್ರಿಕೆಗಳ ಪಾತ್ರ ಮರೆಯಲಾಗದು’ ಎಂದರು.
ಇದೇ ಸಂದರ್ಭದಲ್ಲಿ ಹೊನ್ನಾವರ ತಾಲ್ಲೂಕು ಆಸ್ಪತ್ರೆಗೆ ವರ್ಗವಾಗಿರುವ ಡಾ.ಶ್ರೀನಿವಾಸ ನಾಯಕ ಅವರನ್ನು ಸನ್ಮಾನಿಸಲಾಯಿತು.
ನಂತರ ಮಾತನಾಡಿದ ಅವರು, ‘ಆಸ್ಪತ್ರೆಗಳಲ್ಲಿ ಕನಿಷ್ಠ ಸೌಲಭ್ಯಗಳು ಅಗತ್ಯ. ವೈದ್ಯಕೀಯ ಸೇರಿ ಎಲ್ಲ ಕ್ಷೇತ್ರಗಳಲ್ಲೂ ಕಲಿಕೆ ಎನ್ನುವುದು ನಿರಂತರವಾದದ್ದು. ಬದಲಾವಣೆಗೆ ತಕ್ಕಂತೆ ಜ್ಞಾನ ವಿಸ್ತರಿಸಿಕೊಳ್ಳಬೇಕು’ ಎಂದರು.
ಕಾಲೇಜಿನ ಪ್ರಭಾರಿ ಪ್ರಾಚಾರ್ಯ ಆರ್.ಎಚ್.ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತತರ ಸಂಘದ ಅಧ್ಯಕ್ಷ ಎಂ.ಜಿ.ನಾಯ್ಕ, ಉಪಾಧ್ಯಕ್ಷ ಜಯದೇವ ಬಳಗಂಡಿ, ಹಿರಿಯ ಉಪನ್ಯಾಸಕ ಆನಂದ ನಾಯ್ಕ, ಪತ್ರಕರ್ತರಾದ ಗಣೇಶ ರಾವ್, ಸುಬ್ರಾಯ ಭಟ್ಟ, ಅಮರನಾಥ ಭಟ್ಟ, ಸುಬ್ರಹ್ಮಣ್ಯ ಭಟ್ಟ, ದಿಪೇಶ ನಾಯ್ಕ, ಪೊಲೀಸ್ ಗುಪ್ತಚರ ವಿಭಾಗದ ಸುರೇಶ ಪೂಜಾರಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.