ಹೊನ್ನಾವರ: ತಾಲ್ಲೂಕಿನಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿದ್ದ ಮಳೆಯ ಪ್ರಮಾಣ ಮಂಗಳವಾರ ಕಡಿಮೆಯಾಗಿದೆಯಾದರೂ ಘಟ್ಟದ ಮೇಲಿನ ಪ್ರದೇಶಗಳಲ್ಲಿ ಮಳೆಯಾಗುತ್ತಿರುವುದರಿಂದ ಲಿಂಗನಮಕ್ಕಿ ಜಲಾಶಯ ಭರ್ತಿ ಹಂತಕ್ಕೆ ತಲುಪಿದೆ. ಜಲಾಶಯದ ಸುರಕ್ಷತೆಯ ದೃಷ್ಟಿಯಿಂದ ಶರಾವತಿ ನದಿಗೆ ಬಿಡಲಾಗುತ್ತಿರುವ ಜಲಾಶಯದ ಹೆಚ್ಚುವರಿ ನೀರು ನದಿ ದಂಡೆಗಳ ಪ್ರದೇಶಗಳಲ್ಲಿ ನೆರೆ ಭೀತಿ ಸೃಷ್ಟಿಸಿದೆ.
ಪ್ರವಾಹ ಮುನ್ನೆಚ್ಚರಿಕೆಯ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಶರಾವತಿ ನದಿ ದಂಡೆಗಳಲ್ಲಿನ ಕೆಲ ಪ್ರದೇಶಗಳ ಜನರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಹೆರಂಗಡಿ ಗ್ರಾಮದ ಅಳ್ಳಂಕಿ, ಕುದ್ರಿಗಿ ಗ್ರಾಮದ ಸಂಶಿ ಹಾಗೂ ಸರಳಗಿಯಲ್ಲಿ ತಲಾ ಒಂದು ಕಾಳಜಿ ಕೇಂದ್ರ ತೆರೆಯಲಾಗಿದ್ದು ಮೂರು ಕಾಳಜಿ ಕೇಂದ್ರಗಳಲ್ಲಿ ಒಟ್ಟು 101 ಜನರಿಗೆ ಆಶ್ರಯ ನೀಡಲಾಗಿದೆ
ಉಪವಿಭಾಗಾಧಿಕಾರಿ ಕಾವ್ಯಾರಾಣಿ, ತಹಶೀಲ್ದಾರ್ ಪ್ರವೀಣ ಕರಾಂಡೆ, ಸಿಪಿಐ ಸಿದ್ದರಾಮೇಶ್ವರ ಅವರು ಸಿಬ್ಬಂದಿಗಳ ಜೊತೆ ಶರಾವತಿ ನದಿ ದಂಡೆಗಳ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಕುಸಿದ ಮನೆ: ನವಿಲಗೋಣ ಗ್ರಾಮದ ಬಾದಳ್ಳಿ ಮಜರೆಯ ಶಿವರಾಮ ದತ್ತಾತ್ರಯ ಭಟ್ಟ ಅವರ ಮನೆ ಗೋಡೆ ಮಂಗಳವಾರ ಭಾರಿ ಮಳೆಗೆ ಕುಸಿದು ಬಿದ್ದು ಹಾನಿಯಾಗಿದೆ' ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.