ADVERTISEMENT

ಭಾವ, ರಾಗ, ತಾಳ ಮೇಳೈಸಿದರೆ ಜೀವನ ಆಹ್ಲಾದಕರ: ರಾಘವೇಶ್ವರ ಭಾರತೀ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2021, 13:44 IST
Last Updated 19 ನವೆಂಬರ್ 2021, 13:44 IST
ಗೋಕರ್ಣದ ವಿಷ್ಣುಗುಪ್ತ ವಿಶ್ವವಿದ್ಯಾಪೀಠವು ಅಶೋಕೆಯಲ್ಲಿ ಶುಕ್ರವಾರ ಆಯೋಜಿಸಿದ್ದ ‘ಭಾವ ಸಂಗೀತೋತ್ಸವ’ದ ಸಾನ್ನಿಧ್ಯ ವಹಿಸಿ ರಾಘವೇಶ್ವರ ಭಾರತಿ ಸ್ವಾಮೀಜಿ ಮಾತನಾಡಿದರು
ಗೋಕರ್ಣದ ವಿಷ್ಣುಗುಪ್ತ ವಿಶ್ವವಿದ್ಯಾಪೀಠವು ಅಶೋಕೆಯಲ್ಲಿ ಶುಕ್ರವಾರ ಆಯೋಜಿಸಿದ್ದ ‘ಭಾವ ಸಂಗೀತೋತ್ಸವ’ದ ಸಾನ್ನಿಧ್ಯ ವಹಿಸಿ ರಾಘವೇಶ್ವರ ಭಾರತಿ ಸ್ವಾಮೀಜಿ ಮಾತನಾಡಿದರು   

ಕಾರವಾರ: ‘ಭಾವ, ರಾಗ, ತಾಳ ಮೇಳೈಸಿದಾಗ ಸಂಗೀತ ಸುಶ್ರಾವ್ಯವಾಗುತ್ತದೆ. ಹಾಗೇ ಮನಸ್ಸು, ಮಾತು ಮತ್ತು ಕೃತಿ ಒಂದಾದರೆ ಜೀವನ ಆಹ್ಲಾದಕರವಾಗುತ್ತದೆ’ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.

ಗೋಕರ್ಣದ ವಿಷ್ಣುಗುಪ್ತ ವಿಶ್ವವಿದ್ಯಾಪೀಠವು ಅಶೋಕೆಯಲ್ಲಿ ಶುಕ್ರವಾರ ಆಯೋಜಿಸಿದ್ದ ‘ಭಾವ ಸಂಗೀತೋತ್ಸವ’ದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಜೀವನವೂ ಒಂದು ಸಂಗೀತ. ಜೀವನ ಮುನ್ನಡೆಯಬೇಕಾದರೆ ಭಾವ, ರಾಗ ಹಾಗೂ ತಾಳ ಅಗತ್ಯ. ಭಾವ ಎಂದರೆ ನಮ್ಮ ಭಾವನೆ ಅಥವಾ ಮನಸ್ಸು. ರಾಗ ಅಂದರೆ ಮಾತು ಹಾಗೂ ತಾಳ ಎಂದರೆ ಕೃತಿ. ಈ ಮೂರು ಮೇಳೈಸಿದರೆ ಆತ ಮಹಾತ್ಮನಾಗುತ್ತಾನೆ. ಇಲ್ಲದಿದ್ದರೆ ದುರಾತ್ಮನಾಗುತ್ತದೆ. ಭಾವಕ್ಕೆ ತಕ್ಕ ಮಾತು, ಮಾತಿಗೆ ತಕ್ಕ ಕೃತಿ ಅಂದರೆ ನುಡಿದಂತೆ ನಡೆಯುವುದು ಮತ್ತು ನಡೆಯದಿರುವುದೇ ಮಹಾತ್ಮ ಮತ್ತು ದುರಾತ್ಮರ ನಡುವಿನ ವ್ಯತ್ಯಾಸ’ ಎಂದು ವಿಶ್ಲೇಷಿಸಿದರು.

ADVERTISEMENT

ವಿದ್ಯಾಪೀಠದ ಪಾರಂಪರಿಕ ವಿಭಾಗದ ಪ್ರಾಚಾರ್ಯ ಸತ್ಯನಾರಾಯಣ ಶರ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು. ಹವ್ಯಕ ಮಹಾಮಂಡಲ ಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ, ವಿದ್ಯಾಪೀಠದ ಪ್ರಾಚಾರ್ಯ ಮಹೇಶ ಹೆಗಡೆ, ಉಪ ಪ್ರಾಚಾರ್ಯೆ ಸೌಭಾಗ್ಯಾ, ಮಹಾಮಂಡಲ ಸೇವಾ ವಿಭಾಗದ ಮುಖ್ಯಸ್ಥ ಅರವಿಂದ ದರ್ಬೆ ಇದ್ದರು.

ಬೆಳಿಗ್ಗೆ 10.30ರಿಂದ ಸಂಜೆ 4.30ರವರೆಗೆ ನಡೆದ ಸಂಗೀತೋತ್ಸವದಲ್ಲಿ ವಿದುಷಿ ಕಾಂಚನ ಎಸ್.ಶ್ರುತಿ ರಂಜನಿ, ವಿದುಷಿ ಶಂಕರಿ ಮೂರ್ತಿ ಬಾಳಿಲ, ದೀಪಿಕಾ ಭಟ್, ಸಾಕೇತ ಶರ್ಮಾ, ಪೂಜಾ ಕೋರಿಕ್ಕಾರು, ರಘುನಂದನ ಬೇರ್ಕಡವು ಮತ್ತು ವಿಶ್ವೇಶ್ವರ ಭಟ್ ಖರ್ವಾ ಗಾಯನ ಪ್ರಸ್ತುತಪಡಿಸಿದರು.

ಗಣೇಶ ಭಾಗವತ್ ಅವರ ತಬಲಾ ವಾದನ, ಸುಬ್ರಹ್ಮಣ್ಯ ಹೆಗಡೆ ಅವರ ಸಿತಾರ್ ವಾದನ, ಪ್ರಜಾನ ಲೀಲಾಕುಶ ಉಪಾಧ್ಯಾಯ ಅವರ ಹಾರ್ಮೋನಿಯಂ, ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಮತ್ತು ವಿಶ್ವೇಶ್ವರ ಹೆಗಡೆ ಮೂರೂರು ಅವರ ಅಭಿನಯಗಳು ಮನ ಗೆದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.