ADVERTISEMENT

ಪಶ್ಚಿಮ ಘಟ್ಟದಲ್ಲಿ ಹೊಸ ಪ್ರಭೇದದ ಏಡಿ ಪತ್ತೆ

ಘಟಿಯಾನಾ ಪ್ರಭೇದಕ್ಕೆ ಸೇರಿದ, ಸಿಹಿ ನೀರಿನಲ್ಲಿ ವಾಸವಿರುವ ಜೀವಿ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 0:30 IST
Last Updated 17 ಫೆಬ್ರುವರಿ 2026, 0:30 IST
ಪಶ್ಚಿಮ ಗಟ್ಟದಲ್ಲಿ ಪತ್ತೆಯಾಗಿರುವ ಘಟಿಯಾನಾ ಧೃತಿಯರಮ್ ಏಡಿ.
ಪಶ್ಚಿಮ ಗಟ್ಟದಲ್ಲಿ ಪತ್ತೆಯಾಗಿರುವ ಘಟಿಯಾನಾ ಧೃತಿಯರಮ್ ಏಡಿ.   

ಕಾರವಾರ: ಪಶ್ಚಿಮ ಘಟ್ಟದ ನಿರ್ದಿಷ್ಟ ಭಾಗದಲ್ಲಿ ಕಂಡುಬರುವ ಹೊಸ ಪ್ರಭೇದದ ಸಿಹಿ ನೀರಿನ ಏಡಿಯನ್ನು ಅರಣ್ಯ ಗಸ್ತು ಪಾಲಕರಿಬ್ಬರು ತಾಲ್ಲೂಕಿನ ದೇವಳಮಕ್ಕಿ ಅರಣ್ಯದಲ್ಲಿ ಗುರುತಿಸಿದ್ದಾರೆ.

ಹೊಸ ಪ್ರಭೇದದ ಏಡಿಗೆ ‘ಘಟಿಯಾನಾ ಧೃತಿಯರಮ್’ ಎಂದು ಹೆಸರಿದೆ. ಇದು, ಭಾರತದಲ್ಲಿ ಕಂಡುಬಂದಿರುವ 77ನೇ ಪ್ರಭೇದ ಹಾಗೂ ಪಶ್ಚಿಮಘಟ್ಟದಲ್ಲಿ ಕಾಣಸಿಗುವ ಘಟಿಯಾನಾ ಪ್ರಭೇದದ 14ನೇ ಹೊಸ ಏಡಿ ಎಂಬುದನ್ನು ಭಾರತೀಯ ಪ್ರಾಣಿಶಾಸ್ತ್ರ ಸಮೀಕ್ಷೆ ಸಂಸ್ಥೆಯು (ಝಡ್‌ಎಸ್ಐ) ದೃಢಪಡಿಸಿದೆ.

ಅರಣ್ಯ ಗಸ್ತು ಪಾಲಕರಾದ ಗೋಪಾಲ ನಾಯ್ಕ ಮತ್ತು ಸುನಿಲ ಗೌಡ ಅವರು ಈ ಏಡಿಯನ್ನು ಗುರುತಿಸಿದ್ದಾರೆ. ಇದು ಹೊಸ ಪ್ರಭೇದದ್ದು ಎಂಬುದರ ಖಾತರಿಗೆ ಮೂರು ವರ್ಷಗಳಿಂದ ಅವರು ಅಧ್ಯಯನ ನಡೆಸಿದ್ದರು.

ADVERTISEMENT

‘ಘಟಿಯಾನ ಧೃತಿಯರಮ್ ನಿತ್ಯಹರಿದ್ವರ್ಣ ಕಾಡುಗಳಲ್ಲಿ ಮರದ ಪೊಟರೆ ಮತ್ತು ಜಂಬುಮಣ್ಣಿನ (ಲ್ಯಾಟರೈಟ್) ಬಂಡೆಗಳ ನೀರು ತುಂಬಿದ ರಂಧ್ರಗಳಲ್ಲಿ ವಾಸಿಸುತ್ತವೆ. ಶಿರ್ವೆ, ದೇವಳಮಕ್ಕಿಯ ಸುತ್ತಮುತ್ತಲಿನ 24 ಕಿ.ಮೀ ಅರಣ್ಯ ಪ್ರದೇಶದಲ್ಲಿ ಮಾತ್ರ ಇವು ವಾಸವಾಗಿವೆ. ದಟ್ಟ ಅರಣ್ಯ, ಹುಲ್ಲುಗಾವಲು ಭೂಮಿಯಲ್ಲಿ ಮಾತ್ರ ಇವು ಕಾಣಸಿಗುತ್ತವೆ’ ಎಂದು ಗೋಪಾಲ ನಾಯ್ಕ ಅವರು ವಿವರಿಸಿದ್ದಾರೆ.

‘ಈ ಏಡಿಗಳು ಮರಿಗಳ ಹಂತದಲ್ಲಿ ತಲೆಮೇಲೆ ಕಪ್ಪು ಮತ್ತು ಕಾಲುಗಳು ಸಹ ಕಪ್ಪು ಬಣ್ಣದ್ದಾಗಿರುತ್ತವೆ. ಇದರ ಮೇಲಿನ ಭಾಗವು ಹಾಲಿನ ಕೆನೆ ಬಣ್ಣ ಮತ್ತು ಕಪ್ಪು ಬಣ್ಣದಿಂದ, ಕೆಳಭಾಗದಲ್ಲಿ ನೇರಳೆ ಬಣ್ಣದಿಂದ ಕೂಡಿದೆ. ಪ್ರೌಢಾವಸ್ಥೆ ಹಂತದಲ್ಲಿ ಕಾಲುಗಳು ಸಂಪೂರ್ಣ ಕಿತ್ತಳೆ ಬಣ್ಣ ಹೊಂದಿರುತ್ತವೆ’ ಎಂದು ಸಂಶೋಧನೆಗೆ ಮಾರ್ಗದರ್ಶನ ನೀಡಿದ ಗದಗದ ಜೀವ ವೈವಿಧ್ಯ ಸಂಶೋಧಕ ಮಂಜುನಾಥ ನಾಯಕ ಹೇಳಿದರು.

‘ಈ ಏಡಿಗಳು ಬಹು ಆಳದವರೆಗೆ ರಂಧ್ರ ಕೊರೆಯುವುದರಿಂದ ಅಂತರ್ಜಲ ವೃದ್ಧಿಗೆ ಸಹಕಾರಿಯಾಗಿವೆ. ಅಲ್ಲದೆ, ಅವು ವಿಸರ್ಜಿಸುವ ಮಲದಿಂದ ಸಸ್ಯ ಸಂಪತ್ತು ಬೆಳೆಯಲು ಪೋಷಕಾಂಶ ಸಿಗುತ್ತಿವೆ. ಹೀಗಾಗಿ ಘಟಿಯಾನಾ ಧೃತಿಯರಮ್ ಕಾಣಸಿಗುವ ಪ್ರದೇಶ ಸಮೃದ್ಧ ಅರಣ್ಯ ಎಂಬುದಾಗಿ ಪರಿಗಣಿಸಬಹುದು’ ಎಂದು ಹೇಳಿದರು. 

‘ಅರಣ್ಯ ಇಲಾಖೆಯ ಮುಂಚೂಣಿ ಸಿಬ್ಬಂದಿ ವೈಜ್ಞಾನಿಕ ದೃಷ್ಟಿಕೋನದಿಂದ ಕಾರ್ಯನಿರ್ವಹಿಸಿ ಹೊಸ ಪ್ರಭೇದದ ಏಡಿ ಗುರುತಿಸಿದ್ದಾರೆ’ ಎಂದು ಕಾರವಾರ ಡಿಸಿಎಫ್ ಸಿ.ರವಿಶಂಕರ ಅಭಿಪ್ರಾಯಪಟ್ಟರು.

ಪಶ್ಚಿಮಘಟ್ಟದಲ್ಲಿ ಕಾಣಸಿಗುವ ಘಟಿಯಾನಾ ಪ್ರಭೇದದ 14ನೇ ಹೊಸ ಏಡಿ ಮರದ ಪೊಟರೆ, ಜಂಬುಮಣ್ಣಿನ ನೀರು ತುಂಬಿದ ರಂಧ್ರಗಳಲ್ಲಿ ವಾಸ ಇಬ್ಬರು ಅರಣ್ಯ ಗಸ್ತು ಪಾಲಕರಿಂದ ಮೂರು ವರ್ಷಗಳಿಂದ ಅಧ್ಯಯನ

ಪಶ್ಚಿಮ ಘಟ್ಟದಲ್ಲಿ ಕಾಣ ಸಿಗುವ ಘಟಿಯಾನಾ ಪ್ರಭೇದದ 14ನೇ ಹೊಸ ಏಡಿ

ಮರದ ಪೊಟರೆ, ಜಂಬುಮಣ್ಣಿನ ನೀರು ತುಂಬಿದ ರಂಧ್ರಗಳಲ್ಲಿ ವಾಸ

ಇಬ್ಬರು ಅರಣ್ಯ ಗಸ್ತು ಪಾಲಕರಿಂದ ಮೂರು ವರ್ಷಗಳಿಂದ ಅಧ್ಯಯನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.