ADVERTISEMENT

ಕುಮಟಾ: ಸೋಂಕಿತ ಯಾರ ಸಂಪರ್ಕಕ್ಕೂ ಬಂದಿಲ್ಲ: ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್

ಮೀನು ಸಾಗಣೆಯ ಲಾರಿಯಲ್ಲಿ ರತ್ನಗಿರಿಯಿಂದ ಕುಮಟಾಕ್ಕೆ ಬಂದ ಯುವಕನಲ್ಲಿ ಕೋವಿಡ್ 19 ದೃಡ

​ಪ್ರಜಾವಾಣಿ ವಾರ್ತೆ
Published 13 ಮೇ 2020, 10:28 IST
Last Updated 13 ಮೇ 2020, 10:28 IST
ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್
ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್   

ಕುಮಟಾ: ‘ಕೋವಿಡ್ 19 ಸೋಂಕು ದೃಢಪಟ್ಟ ಪಟ್ಟಣದ26 ವರ್ಷದಯುವಕ(ರೋಗಿ ಸಂಖ್ಯೆ946) ಯಾರ ಸಂಪರ್ಕಕ್ಕೂ ಬಂದಿಲ್ಲ. ಮೇ 5ರಂದು ಮಹಾರಾಷ್ಟ್ರದ ರತ್ನಗಿರಿಯಿಂದ ಮೀನು ಸಾಗಣೆಯ ಲಾರಿಯಲ್ಲಿ ಬಂದಿದ್ದರು. ತಾಲ್ಲೂಕಿನ ಹಿರೇಗುತ್ತಿ ಪೊಲೀಸ್ ಚೆಕ್‌ಪೋಸ್ಟ್‌ನಲ್ಲಿ ಸಿಕ್ಕಿಬಿದ್ದ ಅವರನ್ನು ನೇರವಾಗಿ ಕುಮಟಾದ ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿಸಲಾಗಿತ್ತು’ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ತಿಳಿಸಿದರು.

ಪಟ್ಟಣದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ಹಾಗೂ ಅಧಿಕಾರಿಗಳು ಉತ್ತಮ ರೀತಿಯಿಂದಕೆಲಸ ಮಾಡಿದ್ದಾರೆ.ಹಾಗಾಗಿ ಈಪ್ರಕರಣವನ್ನು ಸುಲಭವಾಗಿ ಪತ್ತೆ ಹಚ್ಚಲಾಯಿತು’ ಎಂದು ಮೆಚ್ಚುಗೆ ಸೂಚಿಸಿದರು.

‘ಭಟ್ಕಳದಲ್ಲಿ ಸೋಂಕಿಗೆ ಒಳಗಾದ ಎರಡು ವರ್ಷದ ಮಗುವಿನ ತಾಯಿಗೆ ಮೊದಲೇ ಸೋಂಕು ಇತ್ತು. ಆದ್ದರಿಂದ ಈ ಬಗ್ಗೆ ಮೊದಲೇ ನಿರೀಕ್ಷೆ ಇತ್ತು. ಇನ್ನುಮುಂದೆ ಗಂಟಲು ದ್ರವ ಪರೀಕ್ಷೆಯನ್ನು ಶೀಘ್ರವಾಗಿ ನಡೆಸಲು ಹತ್ತಾರು ಜನರ ಮಾದರಿಗಳನ್ನು ಏಕಕಾಲದಲ್ಲಿಸಂಗ್ರಹಿಸಲಾಗುವುದು. ಕೋವಿಡ್ –19ನಂಥ ರೋಗಗಳಿಗೆ ಪರಿಣಾಮಕಾರಿಯಾಗಿ ಹಾಗೂ ಶೀಘ್ರವೇ ಚಿಕಿತ್ಸೆ ನೀಡಲು ಭಟ್ಕಳ, ಶಿರಸಿ ಹಾಗೂ ಹಳಿಯಾಳದಲ್ಲಿ ತಲಾ 100 ಹಾಸಿಗೆಗಳ ಪ್ರತ್ಯೇಕ ಆಸ್ಪತ್ರೆ ನಿರ್ಮಿಸುವ ಯೋಜನೆ ಇದೆ’ ಎಂದರು.

ADVERTISEMENT

‘ಹೊರ ದೇಶಗಳಿಂದ ಯಾರೇ ಬಂದರೂ ವಿಮಾನ ನಿಲ್ದಾಣದಿಂದ ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿಸಲಾಗುವುದು. ಹೊರ ರಾಜ್ಯಗಳಿಂದ ಬಂದವರಿಗೆ ಸರ್ಕಾರಿಕ್ವಾರಂಟೈನ್ ಹಾಗೂ ಹೊರ ಜಿಲ್ಲೆಗಳಿಂದ ಬಂದವರನ್ನು ಹೋಂ ಕ್ವಾರಂಟೈನ್ ಮಾಡಲಾಗುವುದು. ಹೊರಗಡೆಯಿಂದ ಊರಿಗೆ ಬರುವವರು ಇನ್ನು ಕೊಂಚ ದಿನ ಕಾಯುವ ತಾಳ್ಮೆ ತೋರಲಿ’ ಎಂದು ಸಲಹೆ ನೀಡಿದರು.

ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ:‘ಸರ್ಕಾರಿ ಕ್ವಾರಂಟೈನ್‌ನಲ್ಲಿ ಹೆಚ್ಚಿನ ಸೌಲಭ್ಯ ಕಲ್ಪಿಸಲು ಪ್ರಯತ್ನಿಸಲಾಗುತ್ತಿದೆ. ವಯಸ್ಕರು, ಅನುಕೂಲಸ್ಥರು ಹೋಟೆಲ್ ಕ್ವಾರಂಟೈನಲ್ಲಿದ್ದರೂ ಸರ್ಕಾರದ ನಿಯಮ ಪಾಲನೆ ಕಡ್ಡಾಯ. ಹೋಟೆಲ್ ಮಾಲೀಕರು ವೈಜ್ಞಾನಿಕ ಹಾಗೂ ಮಾನವೀಯ ದೃಷ್ಟಿಯಿಂದ ಸಹಕರಿಸಬೇಕು. ಇನ್ನು ಮುಂದೆ ಆರೋಗ್ಯ ಸ್ಥಿರ ಇದ್ದ ಸೋಂಕಿತರಿಗೆ ತಾಲ್ಲೂಕು ಆಸ್ಪತ್ರೆಗಳಲ್ಲಿ ಹಾಗೂ ತೊಂದರೆ ಇದ್ದವರಿಗೆ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುವುದು’ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅಶೋಕ ಕುಮಾರ, ಉಪ ವಿಭಾಗಾಧಿಕಾರಿ ಎಂ.ಅಜಿತ್, ತಹಶೀಲ್ದಾರ್ ಮೇಘರಾಜ ನಾಯ್ಕ, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಸಿ.ಟಿ.ನಾಯ್ಕ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಆಜ್ಞಾ ನಾಯಕ, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಎಂ.ಕೆ. ಸುರೇಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.