ADVERTISEMENT

ಅಂಗವೈಕಲ್ಯ ಹೊಂದಿದ್ದ ಸ್ನೇಹಿತೆಗೆ ನೆರವಾದ ಬಾಲಕನಿಗೆ ಪ್ರಶಂಸೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2020, 11:40 IST
Last Updated 26 ಜನವರಿ 2020, 11:40 IST
ಶಿರಸಿ ತಾಲ್ಲೂಕು ತಿಗಣಿಯಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಟಿ.ಜಿ.ನಾಡಿಗೇರ ಅವರು ನಿರಂಜನನಿಗೆ ಪ್ರಶಂಸಾ ಪ್ರತ್ರ ವಿತರಿಸಿದರು
ಶಿರಸಿ ತಾಲ್ಲೂಕು ತಿಗಣಿಯಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಟಿ.ಜಿ.ನಾಡಿಗೇರ ಅವರು ನಿರಂಜನನಿಗೆ ಪ್ರಶಂಸಾ ಪ್ರತ್ರ ವಿತರಿಸಿದರು   

ಶಿರಸಿ: ಬಹುವಿಧದ ಅಂಗವೈಕಲ್ಯ ಹೊಂದಿದ್ದ ಸ್ನೇಹಿತೆಯನ್ನು ನಿತ್ಯ ಶಾಲೆಗೆ ಕರೆದುಕೊಂಡು ಬಂದು ಕಾಯಕನಿಷ್ಠೆ ತೋರಿದ್ದ ಬಾಲಕನಿಗೆ ಹಿರಿಯ ಅಧಿಕಾರಿಯೊಬ್ಬರು ಬೆನ್ನುತಟ್ಟಿದ್ದಾರೆ.

ತಾಲ್ಲೂಕಿನ ತಿಗಣಿ ಹಿರಿಯ ಪ್ರಾಥಮಿಕ ಶಾಲೆಯ ಆರನೇ ತರಗತಿ ವಿದ್ಯಾರ್ಥಿ ನಿರಂಜನ ಕಬ್ಬೇರ್ ನಿತ್ಯ ಶಾಲೆಗೆ ಬರುವಾಗ, ಬೆನ್ನುಹುರಿ, ಕಾಲಿನ ತೊಂದರೆ ಅನುಭವಿಸುತ್ತಿದ್ದ ಸ್ನೇಹಿತೆ ಪ್ರಾರ್ಥನಾ ಗೌಡಳ ಸ್ಕೂಲ್ ಬ್ಯಾಗ್ ಹೊತ್ತುಕೊಂಡು ಅವಳನ್ನು ನಡೆಸಿಕೊಂಡು ಶಾಲೆಗೆ ಕರೆತರುತ್ತಿದ್ದ. ಆಕೆ ಮೂರನೇ ತರಗತಿಯಲ್ಲಿರುವಾಗಿನಿಂದ ಈ ಕಾಯಕವನ್ನು ನಿತ್ಯವೂ ವ್ರತದಂತೆ ಪಾಲಿಸುತ್ತಿದ್ದ ಆತ, ಒಂದು ವರ್ಷದ ಹಿಂದೆ ಪ್ರಾರ್ಥನಾ ಅಸುನೀಗುವವರೆಗೂ ಇದನ್ನು ಮುಂದುವರಿಸಿದ್ದ.

’ಪ್ರಜಾವಾಣಿ’ ಕಳೆದ ನವೆಂಬರ್ 14, ಮಕ್ಕಳ ದಿನಾಚರಣೆಯಂದು ‘ಬಣ್ಣದ ಚಿಟ್ಟೆ’ ಶೀರ್ಷಿಕೆಯಡಿ, ಪರಿಚಯಿಸಿದ ಸಾಧಕ ಮಕ್ಕಳಲ್ಲಿ ನಿರಂಜನ ಕೂಡ ಒಬ್ಬನಾಗಿದ್ದ. ಈ ವರದಿ ಓದಿದ್ದ ಸಮಗ್ರ ಶಿಕ್ಷಣ ಕರ್ನಾಟಕದ ಕಾರ್ಯಕ್ರಮ ನಿರ್ದೇಶಕ ಕೆ.ರಾಜು ಮೊಗವೀರ ಅವರು, ವಿದ್ಯಾರ್ಥಿಯಲ್ಲಿರುವ ಮಾನವೀಯ ಮೌಲ್ಯವನ್ನು ಗುರುತಿಸಿ, ಆತನಿಗೆ ಪ್ರಶಂಸಾ ಪತ್ರ ಹಾಗೂ ₹ 3000 ಮೊತ್ತದಠೇವಣಿಪತ್ರವನ್ನು ಕಳುಹಿಸಿಕೊಟ್ಟಿದ್ದರು.

ADVERTISEMENT

ಭಾನುವಾರ ತಿಗಣಿ ಶಾಲೆಯಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಬನವಾಸಿಯ ಹಿರಿಯರಾದ ಟಿ.ಜಿ.ನಾಡಿಗೇರ ಅವರು ಪ್ರಶಂಸಾ ಪತ್ರವನ್ನು ನಿರಂಜನನಿಗೆ ವಿತರಿಸಿದರು. ಶಾಲೆಯ ಮುಖ್ಯ ಶಿಕ್ಷಕಿ ವನಿತಾ ನಾಯಕ, ಶಿಕ್ಷಕ ಮಾರುತಿ ಉಪ್ಪಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.