ADVERTISEMENT

ನಾಮಫಲಕ ಕೇವಲ ಕನ್ನಡದಲ್ಲಿ ಇರಲಿ: ಪ್ರಾಧಿಕಾರದ ಅಧ್ಯಕ್ಷರ ಸೂಚನೆ

​ಪ್ರಜಾವಾಣಿ ವಾರ್ತೆ
Published 28 ಜೂನ್ 2022, 4:38 IST
Last Updated 28 ಜೂನ್ 2022, 4:38 IST
ಕನ್ನಡ ಪರ ಸಂಘಟನೆಗಳಿಂದ ವಿರೋಧ ವ್ಯಕ್ತವಾದ ಬಳಿಕ ನಾಮಫಲಕಗಳಿಂದ ದೇವನಾಗರಿ ಲಿಪಿಯ ಹೆಸರುಗಳನ್ನು ಅಳಿಸಿ ಹಾಕಿರುವುದು.
ಕನ್ನಡ ಪರ ಸಂಘಟನೆಗಳಿಂದ ವಿರೋಧ ವ್ಯಕ್ತವಾದ ಬಳಿಕ ನಾಮಫಲಕಗಳಿಂದ ದೇವನಾಗರಿ ಲಿಪಿಯ ಹೆಸರುಗಳನ್ನು ಅಳಿಸಿ ಹಾಕಿರುವುದು.   

ಕಾರವಾರ: ‘ನಗರದ ವಾರ್ಡ್‌ಗಳ ನಾಮಫಲಕಗಳನ್ನು ಕನ್ನಡದ ಜೊತೆಗೆ ಹಿಂದಿ ಭಾಷೆಯಲ್ಲಿ ಬರೆಸಿರುವುದು ಸಮಂಜಸವಲ್ಲ. ವಾರ್ಡ್‌ನ ನಾಮಫಲಕಗಳು ಕೇವಲ ಕನ್ನಡದಲ್ಲಿ ಇರುವಂತೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿಗೆ ಪತ್ರ ಬರೆದು ಸೂಚಿಸಲಾಗಿದೆ’ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ ತಿಳಿಸಿದ್ದಾರೆ.

‘ನಗರಸಭೆ ವ್ಯಾಪ್ತಿಯಲ್ಲಿ ಇತ್ತೀಚಿಗೆ ನಾಮಫಲಕಗಳನ್ನು ಕನ್ನಡದ ಜೊತೆಗೆ ಹಿಂದಿಯಲ್ಲಿ ಬರೆದಿರುವುದು ಅನೇಕ ಕನ್ನಡಪರ ಸಂಘಟನೆಗಳ ಅಸಮಾಧಾನಕ್ಕೆ ಕಾರಣವಾಗಿದೆ. ವಾರ್ಡ್‌ಗಳ ನಾಮಫಲಕಗಳು ಕನ್ನಡದಲ್ಲಿಯೇ ಇರಬೇಕಾದುದು ಅನಿವಾರ್ಯ ಮತ್ತು ಸೂಕ್ತವೂ ಕೂಡ’ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

‘ಕಾರವಾರದಲ್ಲಿ ಕೊಂಕಣಿ ಸೇರಿದಂತೆ ಅನ್ಯ ಭಾಷಿಕರು ವಾಸವಿದ್ದರೂ ಅವರೆಲ್ಲರೂ ಮೂಲತಃ ಕನ್ನಡಾಭಿಮಾನಿಗಳೇ ಆಗಿದ್ದಾರೆ. ಇಲ್ಲಿ ಭಾಷಾ ಸಾಮರಸ್ಯವನ್ನೂ ಮೊದಲಿನಿಂದಲೂ ಕಾಪಾಡಿಕೊಂಡು ಬಂದಿರುವ ಹೆಮ್ಮೆಗೆ ಇಲ್ಲಿನ ನಿವಾಸಿಗಳು ಪಾತ್ರರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಅನಗತ್ಯವಾಗಿ ನಗರಸಭೆಯ ವ್ಯಾಪ್ತಿಯ ವಾರ್ಡ್‌ಗಳಿಗೆ ಸಂಬಂಧಿಸಿದ ನಾಮಫಲಕಗಳನ್ನು, ಕನ್ನಡದ ಜೊತೆಗೆ ಹಿಂದಿಯಲ್ಲೂ ಅಳವಡಿಸಿರುವುದು ಸಹಜವಾಗಿ ಕನ್ನಡಪರ ಸಂಘಟನೆಗಳ ಅಸಮಾಧಾನಕ್ಕೆ ಕಾರಣವಾಗಿರುತ್ತದೆ’ ಎಂದು ಅವರು ಹೇಳಿದ್ದಾರೆ.

ADVERTISEMENT

‘ಭಾಷಾ ಸಾಮರಸ್ಯದೊಂದಿಗೆ ಸೌಹಾರ್ದಯುತ ವಾತಾವರಣವನ್ನು ಉಂಟುಮಾಡುವ ದೃಷ್ಟಿಯಿಂದ, ನಗರಸಭೆಯ ವ್ಯಾಪ್ತಿಯ ನಾಮಫಲಕಗಳು ಕೇವಲ ಕನ್ನಡದಲ್ಲಿ ಇರುವಂತೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು’ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.