ADVERTISEMENT

ಉತ್ತರ ಕನ್ನಡ | ವೇತನ ಪಾವತಿಗೆ ಆಗ್ರಹಿಸಿ ನೌಕರರ ಧರಣಿ

ಬಸ್ ವ್ಯವಸ್ಥೆ ಮಾಡಲು ಕೈಗಾ ಅಣು ವಿದ್ಯುತ್ ಸ್ಥಾವರದ ಹೊರ ಗುತ್ತಿಗೆ ಕಾರ್ಮಿಕರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 27 ಮೇ 2020, 13:28 IST
Last Updated 27 ಮೇ 2020, 13:28 IST
ವೇತನ ಪಾವತಿಸುವಂತೆ ಒತ್ತಾಯಿಸಿ ಕೈಗಾ ಅಣು ವಿದ್ಯುತ್ ಸ್ಥಾವರದ ಹೊರ ಗುತ್ತಿಗೆ ನೌಕರರು ಮಲ್ಲಾಪುರದಲ್ಲಿ ಬುಧವಾರ ಧರಣಿ ನಡೆಸಿದರು
ವೇತನ ಪಾವತಿಸುವಂತೆ ಒತ್ತಾಯಿಸಿ ಕೈಗಾ ಅಣು ವಿದ್ಯುತ್ ಸ್ಥಾವರದ ಹೊರ ಗುತ್ತಿಗೆ ನೌಕರರು ಮಲ್ಲಾಪುರದಲ್ಲಿ ಬುಧವಾರ ಧರಣಿ ನಡೆಸಿದರು   

ಕಾರವಾರ: ಕೈಗಾ ಅಣುವಿದ್ಯುತ್ ಸ್ಥಾವರದ ಹೊರ ಗುತ್ತಿಗೆ ನೌಕರರಿಗೆ ಪೂರ್ಣ ವೇತನ ಪಾವತಿಸಬೇಕು ಹಾಗೂ ಅವರ ಪ್ರಯಾಣಕ್ಕೆ ವಾಹನಗಳ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿ ತಾಲ್ಲೂಕಿನ ಮಲ್ಲಾಪುರ ಟೌನ್‌ಶಿಪ್‌ನಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.

ನೂರಾರು ಸಂಖ್ಯೆಯಲ್ಲಿ ಸೇರಿದ್ದ ಕಾರ್ಮಿಕರು, ಸುಮಾರು ಮೂರು ತಾಸು ಧರಣಿ ಕುಳಿತರು. ಪ್ರತಿಭಟನಾಕಾರರಿಗೆ ಬೆಂಬಲ ನೀಡಿ ಮಾತನಾಡಿದ ಕಾಂಗ್ರೆಸ್ ಟಾಸ್ಕ್‌ಫೋರ್ಸ್ ಜಿಲ್ಲಾ ಸಮಿತಿ ಅಧ್ಯಕ್ಷ ಸತೀಶ ಸೈಲ್, ‘ಡಿ ದರ್ಜೆ ನೌಕರರಾಗಿ ದುಡಿಯುತ್ತಿರುವ ಯುವಕರಿಗೆ ಲಾಕ್‌ಡೌನ್‌ನಎರಡು ತಿಂಗಳುವೇತನ ಪಾವತಿಸಿಲ್ಲ. ಇದರಿಂದ ಅವರುಕುಟುಂಬ ನಿರ್ವಹಣೆಗೆ ಕಷ್ಟಪಡುತ್ತಿದ್ದಾರೆ. ವಾಹನಗಳ ವ್ಯವಸ್ಥೆಯಿಲ್ಲದೇ ಕೆಲಸದ ಸ್ಥಳಕ್ಕೆ ಬರಲು ಸಾಧ್ಯವಾಗುತ್ತಿಲ್ಲ’ ಎಂದುಆರೋಪಿಸಿದರು.

‘ಅಣುವಿದ್ಯುತ್ ಸ್ಥಾವರದ ಅಧಿಕಾರಿಗಳು,ಈ ಬಗ್ಗೆಚಿಂತಿಸಲಾಗುವುದು. ವೇತನ ಪಾವತಿಸುವಂತೆ ಗುತ್ತಿಗೆದಾರರಿಗೆಈಗಾಗಲೇ ಸೂಚಿಸಲಾಗಿದೆ ಎಂದು ಹೇಳಿದ್ದಾರೆ. ಆದರೆ, ಗುತ್ತಿಗೆದಾರರು ವೇತನ ಕೊಡುವಂತೆ ಲಿಖಿತವಾಗಿ ಸೂಚನೆ ಕೊಡುವಂತೆ ಕೇಳುತ್ತಿದ್ದಾರೆ. ಈ ಸಂಬಂಧ ಅಧಿಕಾರಿಗಳು ಇ–ಮೇಲ್ ಮಾಡಿದ್ದು, ಅದು ಕೇವಲ ಮಾರ್ಗಸೂಚಿಯಷ್ಟೇ. ಅವರಿಂದ ವೇತನದ ಹಣದ ಬಗ್ಗೆ ಯಾವುದೇ ಭರವಸೆ ಬಂದಿಲ್ಲ ಎಂದು ಹೇಳುತ್ತಿದ್ದಾರೆ’ ಎಂದು ದೂರಿದರು.

ADVERTISEMENT

30ಕ್ಕೆ ಸಭೆ:ಇದೇಸಂದರ್ಭದಲ್ಲಿ ಸಭೆ ನಡೆಸಿದ ಕೈಗಾ ಅಧಿಕಾರಿಗಳು, ಬೇಡಿಕೆಗಳನ್ನು ಈಡೇರಿಸುವ ಸಂಬಂಧ ಮೇ 30ರಂದು ಸಭೆ ನಡೆಸುವುದಾಗಿ ತಿಳಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಸೈಲ್, ಅಲ್ಲಿಯವರೆ‌ಗೆ ನೌಕರರ ಸಂಚಾರಕ್ಕೆ ದಿನಕ್ಕೆ ₹ 20 ಸಾವಿರ ವೆಚ್ಚದಲ್ಲಿ 12 ಬಸ್‌ಗಳವ್ಯವಸ್ಥೆ ಮಾಡುವುದಾಗಿ ಪ್ರಕಟಿಸಿದರು. ಬಳಿಕ, ಅಧಿಕಾರಿಗಳು ಹೆಚ್ಚುವರಿಯಾಗಿ ಕೆ.ಎಸ್.ಆರ್.ಟಿ.ಸಿ ಬಸ್‌ಗಳನ್ನು ಬಾಡಿಗೆಗೆ ಪಡೆದುಕೊಳ್ಳುವುದಾಗಿ ಭರವಸೆ ನೀಡಿದರು.

‘ಸೇವೆ ಕಾಯಂಗೊಳಿಸಿ’: ‘ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಅಣು ವಿದ್ಯುತ್ ಸ್ಥಾವರದ ನೌಕರರನ್ನುಅಗತ್ಯ ಸೇವೆಗಳ ಸಿಬ್ಬಂದಿ ಎಂದು ಪರಿಗಣಿಸಲಾಗಿದೆ. ಹಾಗಾಗಿ, ಅವರ ಸೇವೆಯನ್ನು ಕಾಯಂಗೊಳಿಸಬೇಕು.ವಿದ್ಯುತ್ ಸ್ಥಾವರಕಾಯಂ ಸಿಬ್ಬಂದಿಯ ವೇತನ ಬಂದಿದೆ. ಆದರೆ,ಈ ಯುವಕರುಹಣವಿಲ್ಲದೇ ಕೆಲಸ ಮಾಡುವಂತಾಗಿದೆ. ಈ ಎಲ್ಲ ವಿಚಾರಗಳನ್ನು ರಾಜ್ಯ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಅವರ ಗಮನಕ್ಕೂ ತರಲಾಗುವುದು’ ಎಂದು ಸತೀಶ ಸೈಲ್ ಹೇಳಿದರು.

ಈ ಸಂದರ್ಭದಲ್ಲಿ ಜೆ.ಡಿ.ಎಸ್ ಮುಖಂಡ ಆನಂದ ಅಸ್ನೋಟಿಕರ್, ಜಿಲ್ಲಾ ಪಂಚಾಯ್ತಿ ಸದಸ್ಯರು, ಗ್ರಾಮ ಪಂಚಾಯ್ತಿ ಜನಪ್ರತಿನಿಧಿಗಳು, ಡಿ.ವೈ.ಎಸ್.‍ಪಿ ಅರವಿಂದ ಕಲಗುಜ್ಜಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.