ಸಿದ್ದಾಪುರ: ತಾಲ್ಲೂಕಿನಾದ್ಯಂತ ಭತ್ತದ ಕೃಷಿ ಈಗಷ್ಟೇ ಚುರುಕುಗೊಂಡಿದ್ದು, ಎಲ್ಲ ಕಡೆ ನಾಟಿಹಾಗೂ ನಾಟಿಯ ಪೂರ್ವದ ಕೆಲಸಗಳು ಪ್ರಗತಿಯಲ್ಲಿವೆ.
ಪ್ರತಿ ವರ್ಷದ ವಾಡಿಕೆಯಂತೆ ಜೂನ್ ಮೊದಲ ವಾರದಲ್ಲಿ ಮುಂಗಾರು ಮಳೆ ಆರಂಭಗೊಂಡಿದ್ದರೆಈ ಸಮಯದಲ್ಲಿ ಭತ್ತದ ನಾಟಿ ಕಾರ್ಯ ಮುಕ್ತಾಯ ಹಂತಕ್ಕೆ ಬರುತ್ತಿತ್ತು. ಆದರೆ, ಈ ಬಾರಿ ಮಳೆ ಜೂನ್ ಮೂರನೇ ವಾರದಲ್ಲಿ ಮಳೆ ಆರಂಭವಾದಕಾರಣಬೇಸಾಯದ ಆರಂಭ ಕೂಡತಡವಾಗಿದೆ.
ತಾಲ್ಲೂಕಿನಲ್ಲಿ ಒಟ್ಟು 5,995 ಹೆಕ್ಟೇರ್ನಲ್ಲಿ ಭತ್ತ ಬೆಳೆಯಲಾಗುತ್ತದೆ. 2,300 ಹೆಕ್ಟೇರ್ ಪ್ರದೇಶದಲ್ಲಿ ನಾಟಿ ಕಾರ್ಯ ಮುಗಿದಿದೆ. ಹೆಚ್ಚು ಭತ್ತ ಬೆಳೆಯುವ ಕ್ಷೇತ್ರ ಹೊಂದಿರುವ ತಾಲ್ಲೂಕಿನ ಮನಮನೆ, ಕಾಂವಚೂರು, ಶಿರಳಗಿ, ಹಲಗೇರಿ ಗ್ರಾಮ ಪಂಚಾಯ್ತಿಗಳಲ್ಲಿ ನಾಟಿ ಕಾರ್ಯ ಬಹುತೇಕ ಮುಕ್ತಾಯಗೊಂಡಿದೆ.ಉಳಿದ ಕಡೆಗಳಲ್ಲಿಈಗಷ್ಟೇ ಹೆಚ್ಚಿನ ಪ್ರಗತಿ ಕಂಡುಬಂದಿದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ತಾಲ್ಲೂಕಿನಲ್ಲಿ ಈವರೆಗೆ (ಆ.1ರವರೆಗೆ) ಒಟ್ಟು 1,938 ಮಿ.ಮೀ ಮಳೆ ದಾಖಲಾಗಿದೆ. ಒಟ್ಟಾರೆ ವಾಡಿಕೆ ಮಳೆಗಿಂತ ಶೇ 6ರಷ್ಟು ಮಳೆ ಜಾಸ್ತಿ ಆಗಿದ್ದು, ಕೊಂಡ್ಲಿ ಹೋಬಳಿಯಲ್ಲಿ ಮಾತ್ರ ಶೇ 17ರಷ್ಟು ಮಳೆ ಕಡಿಮೆ ಬಿದ್ದಿದೆ.
‘ಈ ಬಾರಿ ರೈತರು ಹೆಚ್ಚಾಗಿ ಸ್ಥಳೀಯವಾಗಿ ದೊರೆಯುವ ಭತ್ತದ ತಳಿಗಳಿಗೆ ಆದ್ಯತೆ ನೀಡಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಲಭ್ಯವಾಗುವ ಇಂತಹ ಅನೇಕ ತಳಿಗಳಲ್ಲಿ ಭತ್ತದ ಇಳುವರಿ ಕಡಿಮೆಯಾಗಿದ್ದರೂ ಹುಲ್ಲಿನ ಪ್ರಮಾಣ ಜಾಸ್ತಿ ಇರುತ್ತದೆ. ಇದು ರೈತರು ಸ್ಥಳೀಯ ಹಾಗೂ ಹಳೆಯ ತಳಿಗಳಿಗೆ ನೀಡಿರುವ ಆದ್ಯತೆಗೆ ಮುಖ್ಯ ಕಾರಣ’ ಎಂದು ಕೃಷಿ ಅಧಿಕಾರಿ ಪ್ರಶಾಂತ್ ಜಿ.ಎಸ್. ಹೇಳಿದರು.
ಮೇದಿನಿ ಭತ್ತ ಬಿತ್ತನೆ:‘ತಾಲ್ಲೂಕಿನ ಗಡಿಭಾಗದ ದುರ್ಗಮ ಪ್ರದೇಶವಾಗಿರುವ ಮೇದಿನಿ ಎಂಬ ಹಳ್ಳಿಯಲ್ಲಿ ಬೆಳೆಯುವ ಸುವಾಸನೆಯುಕ್ತವಾದ ಭತ್ತದ ತಳಿ ತಾಲ್ಲೂಕಿನ ರೈತರನ್ನು ಈ ಬಾರಿ ಸ್ವಲ್ಪಮಟ್ಟಿಗೆ ಆಕರ್ಷಿಸಿದೆ. ತಾಲ್ಲೂಕಿನ 10 ರೈತರು 75 ಕೆ.ಜಿ ಮೇದಿನಿ ಬೀಜದ ಭತ್ತವನ್ನು ಕೃಷಿ ಇಲಾಖೆಯಿಂದ ಪಡೆದಿದ್ದಾರೆ. ಇದರಿಂದ ಈ ವಿಶಿಷ್ಟ ಭತ್ತದ ಬೆಳೆ ತಾಲ್ಲೂಕಿನ ಕೆಲವು ಕಡೆ ಈ ಬಾರಿ ಕಾಣಲಿದೆ’ ಎಂದು ಕೃಷಿ ಇಲಾಖೆಯ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.