ADVERTISEMENT

ನಾರಾಯಣ ಗುರು ಸ್ತಬ್ಧಚಿತ್ರಕ್ಕೆ ಅನುಮತಿ ಕೊಡಿ: ಪ್ರಣವಾನಂದ ಸ್ವಾಮೀಜಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 17 ಜನವರಿ 2022, 15:04 IST
Last Updated 17 ಜನವರಿ 2022, 15:04 IST
ಪ್ರಣವಾನಂದ ಸ್ವಾಮೀಜಿ
ಪ್ರಣವಾನಂದ ಸ್ವಾಮೀಜಿ   

ಕಾರವಾರ: ‘ಕೇಂದ್ರ ಸರ್ಕಾರವು ಈ ಬಾರಿಯ ಗಣರಾಜ್ಯೋತ್ಸವಕ್ಕೆ ನಾರಾಯಣ ಗುರು ಅವರ ಸ್ತಬ್ಧಚಿತ್ರವನ್ನು ತಿರಸ್ಕರಿಸಿದೆ. ಇದರಿಂದ ಆರ್ಯ ಈಡಿಗ ಸಮುದಾಯಕ್ಕೆ ಅನ್ಯಾಯವಾಗಿದೆ. ಈ ಬಗ್ಗೆ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು 2–3 ದಿನಗಳಲ್ಲಿ ಭೇಟಿ ಮಾಡಲು ಪ್ರಯತ್ನಿಸಲಾಗುವುದು’ ಎಂದು ಆರ್ಯ ಈಡಿಗ ರಾಷ್ಟ್ರೀಯ ಮಹಾಮಂಡಳಿಯ ಪ್ರಣವಾನಂದ ಸ್ವಾಮೀಜಿ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗಣರಾಜ್ಯೋತ್ಸವದಲ್ಲಿ ನಾರಾಯಣ ಗುರು ಮತ್ತು ಜಟಾಯುವಿನ ಸ್ತಬ್ಧಚಿತ್ರವನ್ನು ಸಿದ್ಧಪಡಿಸುವುದಾಗಿ ಕೇಂದ್ರ ಸರ್ಕಾರಕ್ಕೆ ಅರ್ಜಿ ಸಲ್ಲಿಸಿತ್ತು. ಆದರೆ, ರಕ್ಷಣಾ ಇಲಾಖೆಯು ಅದನ್ನು ತಿರಸ್ಕರಿಸಿ ಆದಿಶಂಕರರ ಸ್ತಬ್ಧಚಿತ್ರ ಸಿದ್ಧಪಡಿಸಬೇಕು. ಅದು ಆಗದಿದ್ದರೆ ಅರ್ಜಿಯನ್ನೇ ಹಿಂಪಡೆಯಿರಿ ಎಂದು ಸೂಚಿಸಿದೆ. ಕೇಂದ್ರ ಸರ್ಕಾರವು ಜಾತಿಗಳ ನಡುವೆ ಜಗಳ ತಂದಿಟ್ಟಿದೆ. ನಮಗೆ ಆದಿಶಂಕರರ ಬಗ್ಗೆ ಬಹಳ ಗೌರವವಿದೆ. ಅವರು ಅದ್ವೈತ ವಾದಿಯಾಗಿದ್ದರು. ಆದರೆ, ನಾರಾಯಣ ಗುರುಗಳು ಆ ತತ್ವದಲ್ಲೇ ಜೀವಿಸಿದರು’ ಎಂದು ಹೇಳಿದರು.

‘ಕೇಂದ್ರ ಸರ್ಕಾರದ ಅನ್ಯಾಯವನ್ನು ಸಹಿಸಲಾಗುವುದಿಲ್ಲ. ಈ ಬಾರಿಯ ಗಣರಾಜ್ಯೋತ್ಸವದಲ್ಲಿ ನಾರಾಯಣ ಗುರುಗಳ ಸ್ತಬ್ಧಚಿತ್ರ ಇರಲೇಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಅನುದಾನ ಮಂಜೂರು ಮಾಡಿ’:‘ದೇಶದಲ್ಲಿ ಶೇ 23ರಷ್ಟಿರುವ ಆರ್ಯ ಈಡಿಗ ಸಮುದಾಯವನ್ನು ಸಮುದಾಯವನ್ನು ಬೇರೆ ಹೆಸರುಗಳಿಂದ ಗುರುತಿಸಲಾಗುತ್ತಿದೆ. ಈ ಸಮುದಾಯದ ಅಭಿವೃದ್ಧಿಗೆ ನಿಗಮ, ಮಂಡಳಿಯನ್ನು ಸರ್ಕಾರ ಘೋಷಿಸಿಲ್ಲ. ಹಿಂದುಳಿದ ಈ ಸಮುದಾಯಕ್ಕಾಗಿ ₹ 500 ಕೋಟಿ ಬಿಡುಗಡೆ ಮಾಡಬೇಕು. ಸಮುದಾಯದ ಮೂಲ ವೃತ್ತಿಯಾದ ಸೇಂದಿ ಇಳಿಸಲು ಅನುಮತಿ ನೀಡಬೇಕು. ರಾಯಚೂರು, ಕಲಬುರಗಿ ಭಾಗದಲ್ಲಿ ಇದಕ್ಕೆ ಅವಕಾಶವಿದೆ. ಈ ಬೇಡಿಕೆಗಳನ್ನು ಈಡೇರಿಸದಿದ್ದರೆ 2023ರ ಚುನಾವಣೆಯಲ್ಲಿ ಸರ್ಕಾರಕ್ಕೆ ಉತ್ತರಿಸಲಿದ್ದೇವೆ’ ಎಂದು ಪ್ರಣವಾನಂದ ಸ್ವಾಮೀಜಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.