ADVERTISEMENT

ಕ್ವಾರಂಟೈನ್‌ನಲ್ಲಿದ್ದ ವ್ಯಕ್ತಿಯಿಂದ ಚಿಪ್ಪುಹಂದಿ ಬೇಟೆ!

ಜೊಯಿಡಾ ತಾಲ್ಲೂಕಿನ ಬಳಗಾರ ಕಾಡಿನಲ್ಲಿ ಸಿಕ್ಕಿಬಿದ್ದ ಆರೋಪಿಗಳು: ಪೊಲೀಸರಿಗೆ ದೂರು

​ಪ್ರಜಾವಾಣಿ ವಾರ್ತೆ
Published 20 ಮೇ 2020, 16:00 IST
Last Updated 20 ಮೇ 2020, 16:00 IST
ಚಿಪ್ಪುಹಂದಿ (ಸಂಗ್ರಹ ಚಿತ್ರ)
ಚಿಪ್ಪುಹಂದಿ (ಸಂಗ್ರಹ ಚಿತ್ರ)   

ದಾಂಡೇಲಿ: ಹೋಂ ಕ್ವಾರಂಟೈನ್‌ನಲ್ಲಿದ್ದ ವ್ಯಕ್ತಿಯೊಬ್ಬರು ಜೊಯಿಡಾ ತಾಲ್ಲೂಕಿನಗುಂದ ಅರಣ್ಯ ವಲಯದ ಬಳಗಾರ ಕಾಡಿನಲ್ಲಿ ಮೇ 17ರಂದು ರಾತ್ರಿ ಚಿಪ್ಪು ಹಂದಿ ಬೇಟೆಗೆ ಯತ್ನಿಸಿ ಸಿಕ್ಕಿಬಿದ್ದಿದ್ದಾರೆ. ಅರಣ್ಯಾಧಿಕಾರಿಗಳು ಜೀವಂತ ಚಿಪ್ಪುಹಂದಿಯನ್ನು ವಶಪಡಿಸಿಕೊಂಡಿದ್ದಾರೆ.

ಗುಂದ ಬೆಣ್ಣೆಪಾಲದ ಗಣಪತಿ ಲಕ್ಷ್ಮಣ ಪಾಡ್ಕರ್ (30) ಬಂಧಿತ ಆರೋಪಿ. ಆತ ಕೋವಿಡ್ 19 ಸೋಂಕಿನ ಶಂಕಿತರೊಬ್ಬರ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದರು.ಅವರನ್ನು ಆರೋಗ್ಯ ಇಲಾಖೆಯ ಸಿಬ್ಬಂದಿಹೋಂ ಕ್ವಾರಂಟೈನ್‌ನಲ್ಲಿ ಇರಲು ಸೂಚಿಸಿದ್ದರು. ಆದರೆ, ನಿಯಮ ಪಾಲಿಸದೆ ತನ್ನ ಮೂವರು ಪರಿಚಿತರೊಂದಿಗೆ ಅರಣ್ಯ ಪ್ರವೇಶಿಸಿ ಚಿಪ್ಪುಹಂದಿ ಹಿಡಿದಿದ್ದರು. ಈ ಬಗ್ಗೆ ಮಾಹಿತಿ ಪಡೆದ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ಮಾಡಿ ಚಿಪ್ಪುಹಂದಿಯನ್ನು ವಶಪಡಿಸಿಕೊಂಡರು. ಆರೋಪಿಗೆ ಮನೆಯಲ್ಲೇ ಕ್ವಾರಂಟೈನ್‌ನಲ್ಲಿಇರುವಂತೆ ಎಚ್ಚರಿಕೆ ನೀಡಿ ಕಳುಹಿಸಿದರು.

ಉಳಿದ ಆರೋಪಿಗಳಾದ ಗುಂದ ಮಳೆ ಗ್ರಾಮದ ಮಂಜು ಜಾನು ಮುಸ್ಕಾರ, ಪಲಸವಾಡೆಯ ಆನಂದ ಗಣೇಶ ಮುಸ್ಕಾರ ಹಾಗೂ ಮಾತ್ಕರಣಿಯ ಲಕ್ಷ್ಮಣ ಬಿಲ್ಲೇಕರ್ ಪರಾರಿಯಾಗಿದ್ದಾರೆ. ಇವರೂ ಸೋಂಕು ಶಂಕಿತನ ಸಂಪರ್ಕಕ್ಕೆ ಬಂದಿರುವ ಸಾಧ್ಯತೆಯಿದ್ದು,ಸಾಂಕ್ರಾಮಿಕ ರೋಗ ತಡೆಗಟ್ಟುವ ಕಾಯ್ದೆಯ ಉಲ್ಲಂಘನೆಯಾಗಿದೆ. ಆದ್ದರಿಂದ, ಆರೋಪಿಗಳ ವಿರುದ್ಧ ಜೊಯಿಡಾ ಪೋಲಿಸ್ ಠಾಣೆಗೆ ದೂರು ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ.ಮಾರಿಯಾ ಕ್ರಿಸ್ತುರಾಜ ಮಾರ್ಗದರ್ಶನದ ಕಾರ್ಯಾಚರಣೆಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಸ್.ಗೊರವರ್ ನೇತೃತ್ವ ವಹಿಸಿದ್ದರು.ವಲಯ ಅರಣ್ಯಾಧಿಕಾರಿ ವಿನೋದ ಲಕ್ಷ್ಮಣ ಅಂಗಡಿ, ಉಪ ವಲಯ ಅರಣ್ಯಾಧಿಕಾರಿ ಮಣಿಕಂಠ ಎಂ.ವೈದ್ಯ, ಶರತ್ ಐಹೊಳಿ, ಅರಣ್ಯ ರಕ್ಷಕ ಬಸಪ್ಪ ತೋಟಗಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.