ಕಾರವಾರ: ಅಂಕೋಲಾ ತಾಲ್ಲೂಕಿನ ಗುಳ್ಳಾಪುರ ಬಳಿ ಗಂಗಾವಳಿ ನದಿಗೆ ನಿರ್ಮಿಸಲಾದ ಸೇತುವೆಯ ಎರಡೂ ಬದಿಗಳಲ್ಲಿ ತಡಗೋಡೆ (ರೇಲಿಂಗ್) ಮುರಿದಿದ್ದು, ಅಪಾಯ ಆಹ್ವಾನಿಸುತ್ತಿದೆ. ಯಾವ ಇಲಾಖೆಯವರೂ ಇದರ ದುರಸ್ತಿಗೆ ಮುಂದಾಗುತ್ತಿಲ್ಲ ಎಂದು ನಾಗರಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ಈ ವರ್ಷ ಆಗಸ್ಟ್ನಲ್ಲಿ ಗಂಗಾವಳಿ ನದಿಯ ಪ್ರವಾಹದಲ್ಲಿ ಬೃಹತ್ ಮರವೊಂದು ಕೊಚ್ಚಿಕೊಂಡು ಬಂದು ರೇಲಿಂಗ್ಗೆ ಬಡಿದು ಹಾನಿಯಾಗಿತ್ತು. ಜನಜೀವನ ಸಹಜವಾಗಿಮೂರುತಿಂಗಳುಗಳೇ ಕಳೆದರೂಸೇತುವೆಯ ಸ್ಥಿತಿ ಇನ್ನೂ ಹಾಗೇ ಇದೆ.
ಗುಳ್ಳಾಪುರದಿಂದ ಸುಮಾರು ಒಂದೂವರೆ ಕಿಲೋಮೀಟರ್ ದೂರದಲ್ಲಿದ್ದು, ಕಮ್ಮಾಣಿ– ಹಳುವಳ್ಳಿ ರಸ್ತೆಯಲ್ಲಿ ಈ ಸೇತುವೆಯಿದೆ. ಅದರ ನಿರ್ವಹಣೆಯಬಗ್ಗೆ ಲೋಕೋಪಯೋಗಿ ಇಲಾಖೆಯ ಅಂಕೋಲಾದ ಅಧಿಕಾರಿಗಳನ್ನು ಕೇಳಿದರೆ, ಸೇತುವೆಯು ಯಲ್ಲಾಪುರ ವ್ಯಾಪ್ತಿಯಲ್ಲಿದೆ ಎನ್ನುತ್ತಿದ್ದಾರೆ. ಯಲ್ಲಾಪುರದವರನ್ನು ಕೇಳಿದರೆ ಅಂಕೋಲಾ ಎಂದು ಹೇಳುತ್ತಿದ್ದಾರೆ. ಹೀಗಾಗಿ ಯಾರನ್ನು ಸಂಪರ್ಕಸಬೇಕು ಎಂಬುದೇ ತಿಳಿಯುತ್ತಿಲ್ಲ. ಸಂಭವನೀಯ ದುರಂತವನ್ನು ಸೇತುವೆ ದುರಸ್ತಿ ಮಾಡಿ ತಪ್ಪಿಸಬೇಕು ಎಂದು ಕೋನಾಳದ ಸುಧಾಕರ ಭಟ್ ಒತ್ತಾಯಿಸಿದ್ದಾರೆ.
ಸುಮಾರು 150 ಮೀಟರ್ ಉದ್ದದ ಈ ಸೇತುವೆಯ ಮಧ್ಯಭಾಗದಲ್ಲಿ 10 ಅಡಿಗಳಷ್ಟು ರೇಲಿಂಗ್ ತುಂಡಾಗಿದೆ. ಇಲ್ಲಿ ನಿತ್ಯವೂ ಹತ್ತಾರು ವಾಹನಗಳು ಸಂಚರಿಸುತ್ತವೆ. ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಸಂಚರಿಸುತ್ತಾರೆ. ಡೊಂಗ್ರಿ ಗ್ರಾಮ ಪಂಚಾಯ್ತಿ ಕಚೇರಿಗೆ ಇದೇ ರಸ್ತೆಯಲ್ಲಿ ಸಾಗಬೇಕು. ಇದನ್ನು ದಾಟಿದರೆ ಧೋರಣಗಿರಿ ಮೂಲಕ ಶಿರಸಿಗೂ ಸಂಪರ್ಕ ಸಾಧ್ಯವಾಗುತ್ತದೆ.
ಸೇತುವೆಯನ್ನು 1995–96ರಲ್ಲಿ ನಿರ್ಮಾಣ ಮಾಡಲಾಗಿದ್ದು, ಒಮ್ಮೆಯೂ ನಿರ್ವಹಣೆ ಮಾಡಿಲ್ಲ. ಈ ಬಗ್ಗೆ ಯಲ್ಲಾಪುರದ ಹಿಂದಿನ ಶಾಸಕ ಶಿವರಾಮ ಹೆಬ್ಬಾರ ಹಾಗೂ ಕಾರವಾರ– ಅಂಕೋಲಾ ಕ್ಷೇತ್ರದಶಾಸಕಿ ರೂಪಾಲಿ ನಾಯ್ಕ ಅವರ ಗಮನಕ್ಕೂ ತರಲಾಗಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.