
ಕಾರವಾರ: ಸ್ವದೇಶಿ ವಸ್ತುಗಳ ಬಳಕೆಗೆ ಜಾಗೃತಿ ಮೂಡಿಸಲು ದೇಶದಾದ್ಯಂತ ಸೈಕ್ಲಿಂಗ್ ನಡೆಸುವ ಅಭಿಯಾನ ಆರಂಭಿಸಿರುವ ಸೇನೆಯ ನಿವೃತ್ತ ಅಧಿಕಾರಿಗಳಿರುವ ಪರಿಪೂರ್ಣ ಸನಾತನ ಚಾರಿಟಬಲ್ ಟ್ರಸ್ಟ್ ಭಾನುವಾರ ನಗರಕ್ಕೆ ತಲುಪಿತು.
30ಕ್ಕೂ ಹೆಚ್ಚು ಸೈಕ್ಲಿಸ್ಟ್ಗಳಿರುವ ತಂಡವು ಇಲ್ಲಿನ ಐಎನ್ಎಸ್ ಚಪಲ್ ಯುದ್ಧನೌಕೆ ವಸ್ತು ಸಂಗ್ರಹಾಲಯ, ಟುಪಲವ್ ಯುದ್ಧ ವಿಮಾನ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿತು. 60ರಿಂದ 70 ವರ್ಷದ ಸದಸ್ಯರು ತಂಡದಲ್ಲಿದ್ದು, ಮಹಿಳೆಯರೂ ಇರುವುದು ವಿಶೇಷ.
‘ಸ್ವದೇಶಿ ವಸ್ತು ಬಳಕೆ ಜಾಗೃತಿ ಸಲುವಾಗಿ ದೇಶದ ವಿವಿಧ ರಾಜ್ಯಗಳಲ್ಲಿ ಸುತ್ತಾಟ ನಡೆಸಿ, 3,600 ಕಿ.ಮೀ ಸೈಕ್ಲಿಂಗ್ ನಡೆಸುವ ಗುರಿ ಇಟ್ಟುಕೊಂಡಿದ್ದೇವೆ. ಈಗಾಗಲೆ 900 ಕಿ.ಮೀ ದೂರ ಕ್ರಮಿಸಲಾಗಿದೆ. ಜ.21ಕ್ಕೆ ಸೈಕ್ಲಿಂಗ್ ಯಾತ್ರೆ ಪೂರ್ಣಗೊಳಿಸುವ ಗುರಿ ಇಟ್ಟುಕೊಂಡಿದ್ದೇವೆ’ ಎಂದು ತಂಡದ ನೇತೃತ್ವ ವಹಿಸಿರುವ ಬ್ರಿಗೇಡಿಯರ್ ರವಿ ಮುನಿಸ್ವಾಮಿ ತಿಳಿಸಿದರು.
ಡಿ.19ರಂದು ಜಿಲ್ಲೆಯ ಭಟ್ಕಳಕ್ಕೆ ತಲುಪಿದ್ದ ತಂಡವು ಮೂರು ದಿನಗಳ ಕಾಲ ವಿವಿಧ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಸಂಚರಿಸಿ ಜಾಗೃತಿ ಮೂಡಿಸಿದೆ. ಸ್ವದೇಶಿ ವಸ್ತುಗಳು, ಸಾವಯವ ಪದ್ಧತಿಯ ಆಹಾರ ಉತ್ಪನ್ನ ಬಳಸಲು ಸಲಹೆ ನೀಡುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.