ADVERTISEMENT

ಶಿರಸಿ | ಬಳಕೆಗೆ ಬಾರದ ಬಾವಿ: ಆತಂಕ

ಚರಂಡಿ ಅವ್ಯವಸ್ಥೆಯಿಂದ ಹಾಳಾದ ಬಾವಿ: ಮಾರಿಕಾಂಬಾ ಜಾತ್ರೆಗೆ ಬರುವ ಭಕ್ತರಿಗೆ ತೊಂದರೆ

ರಾಜೇಂದ್ರ ಹೆಗಡೆ
Published 5 ಮಾರ್ಚ್ 2024, 5:41 IST
Last Updated 5 ಮಾರ್ಚ್ 2024, 5:41 IST
ಶಿರಸಿಯ ಪ್ರಗತಿ ನಗರದಲ್ಲಿ ದುರ್ನಾತ ಬೀರುವ ಬಾವಿಯ ನೀರು
ಶಿರಸಿಯ ಪ್ರಗತಿ ನಗರದಲ್ಲಿ ದುರ್ನಾತ ಬೀರುವ ಬಾವಿಯ ನೀರು   

ಶಿರಸಿ: ನೀರಿನ ಕೊರತೆ ನಡುವೆಯೇ ಇಲ್ಲಿನ ಪ್ರಗತಿ ನಗರದಲ್ಲಿ 30ಕ್ಕೂ ಹೆಚ್ಚು ತೆರೆದ ಬಾವಿಗಳ ನೀರು ದುರ್ನಾತ ಬೀರುತ್ತಿದ್ದು, ಬಳಕೆಗೆ ಬಾರದಂತಾಗಿದೆ. 

ಪ್ರಗತಿ ನಗರ ವ್ಯಾಪ್ತಿಯ 8, 9, 10 ಹಾಗೂ 11ನೇ ಅಡ್ಡ ರಸ್ತೆಯ ನಿವಾಸಿಗಳಿಗೆ ಸೇರಿದ ಬಾವಿಗಳ ನೀರು ಹಾಳಾಗಿದೆ. ಬೇಸಿಗೆ ಕಳೆಯುವಷ್ಟು ನೀರಿದ್ದರೂ ಬಳಸಲು ಬಾರದಂತಾಗಿರುವುದು ನಿವಾಸಿಗಳಲ್ಲಿ ಬೇಸರ ಮೂಡಿಸಿದೆ. ಇದೇ ಕಾರಣಕ್ಕೆ ಕುಡಿಯುವ ನೀರಿಗೆ ನಗರಸಭೆ ವಿತರಿಸುವ ನೀರನ್ನು ಆಶ್ರಯಿಸುವಂತಾಗಿದೆ. 

'ಪ್ರಗತಿನಗರ ವ್ಯಾಪ್ತಿಯಲ್ಲಿ ನಗರಸಭೆಯ ವತಿಯಿಂದ ನಿರ್ಮಿಸುವ ಚರಂಡಿಗಳ ಕೊರತೆಯಿದೆ. ಬಹುತೇಕ ಮನೆ ಮಾಲೀಕರು ತಮ್ಮ ಮನೆಗಳೆದುರು ಸ್ವಂತ ಖರ್ಚಿನಲ್ಲಿ ಕಾಂಕ್ರಿಟ್ ಕಾಲುವೆ ನಿರ್ಮಿಸಿಕೊಂಡಿದ್ದಾರೆ. ಖಾಲಿ ನಿವೇಶನಗಳಿರುವೆಡೆ ಚರಂಡಿ ವ್ಯವಸ್ಥೆಯೇ ಇಲ್ಲ. ಹೀಗಾಗಿ ಚರಂಡಿ ನೀರು ಸಾಗಲು ಸಮರ್ಪಕ ವ್ಯವಸ್ಥೆ ಇಲ್ಲದಂತಾಗಿದೆ. ಚರಂಡಿ ನಿರ್ಮಿಸುವಂತೆ ಸಾಕಷ್ಟು ಬಾರಿ ನಗರಸಭೆ ಗಮನ ಸೆಳೆದರೂ ಪ್ರಯೋಜನವಾಗಿಲ್ಲ. ಹೀಗಾಗಿ ಕಾಲುವೆಯ ತ್ಯಾಜ್ಯ ನೀರು ಭೂಮಿಗೆ ಇಂಗಿ ಬಾವಿಗಳ ನೀರು ಹಾಳಾಗಿರುವ ಸಾಧ್ಯತೆಯಿದೆ' ಎಂಬುದು ಇಲ್ಲಿನ ನಿವಾಸಿಗಳ ಅಭಿಪ್ರಾಯವಾಗಿದೆ.

ADVERTISEMENT
'ಈಗಾಗಲೇ ದುರ್ನಾತ ಬೀರುವ ಬಾವಿಗಳ ನೀರನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಯಾವ ಕಾರಣಕ್ಕೆ ಹೀಗಾಗಿದೆ ಎಂಬುದು ತಿಳಿದ ನಂತರ ಯಾವ ರೀತಿಯಲ್ಲಿ ಬಾವಿ ಶುದ್ಧೀಕರಿಸಬೇಕು ಎಂಬುದನ್ನು ನೋಡಬೇಕು. ಆವರೆಗೆ ನಗರಾಡಳಿತ ನೀಡುವ ನೀರನ್ನೇ ಬಳಸುತ್ತೇವೆ' ಎನ್ನುತ್ತಾರೆ ಪ್ರಗತಿ‌ಗರ ಅಭಿವೃದ್ಧಿ ಸಮಿತಿಯ ಎಂ.ಎಂ.ಭಟ್. 
ಪ್ರಗತಿ ನಗರದಲ್ಲಿರುವ ಬಾವಿ 
'ನಗರದ ನೀರು ಸರಬರಾಜಿನ ಜಲಮೂಲವಾದ ಕೆಂಗ್ರೆ ಹಾಗೂ ಮಾರಿಗದ್ದೆಗಳಲ್ಲಿ ನೀರು ತೀವ್ರ ಇಳಿಮುಖವಾಗಿದೆ. ಮಾರ್ಚ್ ಮೂರನೇ ವಾರದಲ್ಲಿ ರಾಜ್ಯ ಪ್ರಸಿದ್ಧ ಮಾರಿಕಾಂಬಾ ಜಾತ್ರೆಯಿದ್ದು, ಲಕ್ಷಾಂತರ ಭಕ್ತರು, ಪ್ರವಾಸಿಗರು ನಗರಕ್ಕೆ ಬರುತ್ತಾರೆ. ಈ ಸಂದರ್ಭದಲ್ಲಿ ಈಗಿರುವ ನೀರಿನ ಪ್ರಮಾಣ ಸಾಲುವುದಿಲ್ಲ. ಆಗ ನಗರಸಭೆ ವತಿಯಿಂದ ನೀರು ಕಡಿತ ಮಾಡಲಾಗುತ್ತದೆ. ಆ ಸಂದರ್ಭದಲ್ಲಿ ಮತ್ತಷ್ಟು ಸಮಸ್ಯೆಯಾಗುತ್ತದೆ' ಎಂಬುದು ಇಲ್ಲಿನ ನಿವಾಸಿ ನಾಗರಾಜ ಹೆಗಡೆ.
ಪ್ರಗತಿ ನಗರದಲ್ಲಿ ಬಾವಿಗಳ ನೀರು ಹಾಳಾಗಿರುವ ಕುರಿತು ಸ್ಥಳಿಕರು ಈವರೆಗೂ ಗಮನಕ್ಕೆ ತಂದಿಲ್ಲ. ಸ್ಥಳ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.
- ಕಾಂತರಾಜ್- ಪೌರಾಯುಕ್ತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.