
ಶಿರಸಿ: ‘ವಿದ್ಯಾರ್ಥಿ ದೆಸೆಯಿಂದಲೇ ಉತ್ತಮ ಕ್ರೀಡಾಮನೋಭಾವ ಬೆಳೆಸಿಕೊಂಡು ಕ್ರೀಡೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಲ್ಲಿ ಜೀವನದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ’ ಎಂದು ನಿವೃತ್ತ ಸುಬೇದಾರ್ ಕಾಶಿನಾಥ ನಾಯ್ಕ ಹೇಳಿದರು.
ತಾಲ್ಲೂಕಿನ ಇಸಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ, ವಿದ್ಯಾರ್ಥಿಗಳಿಂದ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.
‘ಕ್ರೀಡಾ ಸಾಧನೆಗೆ ದೈಹಿಕ ನೂನ್ಯತೆಗಳಾಗಲಿ ಅಥವಾ ಆರ್ಥಿಕ ಸಂಕಷ್ಟಗಳಾಗಲಿ ಎಂದಿಗೂ ತಡೆಯಾಗಲಾರವು. ಯುದ್ಧದಲ್ಲಿ ಗಾಯಗೊಂಡು ವಿಕಲಾಂಗರಾದರೂ ಛಲಬಿಡದೆ ಪ್ಯಾರಾ ಒಲಿಂಪಿಕ್ಸ್ನಲ್ಲಿ ದೇಶಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟ ಮುರಳಿಕಾಂತ ಪೇಟಕರ್ ಅವರ ಸಾಧನೆ ನಮಗೆಲ್ಲ ಪ್ರೇರಣೆ’ ಎಂದ ಅವರು, ವಿದ್ಯಾರ್ಥಿಗಳು ಈಗಿನಿಂದಲೇ ದುಶ್ಚಟಗಳಿಂದ ದೂರವಿದ್ದು, ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು. ನಿರಂತರ ಅಭ್ಯಾಸ ಮತ್ತು ದೈಹಿಕ ಸಾಮರ್ಥ್ಯವಿದ್ದರೆ ಬಡತನ ಸಾಧನೆಗೆ ಅಡ್ಡಿಯಾಗದು’ ಎಂದರು.
ಇಸಳೂರು ಗ್ರಾಮ ಪಂಚಾಯಿತಿ ಸದಸ್ಯ ಪಿ.ವಿ.ಹೆಗಡೆ ಅವರು ಶಾಲಾ ಮಕ್ಕಳು ಚೆಸ್, ಯೋಗದಂತಹ ಸ್ಪರ್ಧೆಗಳಲ್ಲಿ ತೋರುತ್ತಿರುವ ಸಾಧನೆ ಮೆಚ್ಚಿದ ಕ್ರೀಡಾ ಚಟುವಟಿಕೆಗಳ ಪ್ರೋತ್ಸಾಹಕ್ಕಾಗಿ ಶಾಲೆಯ ಕ್ರೀಡಾ ದತ್ತಿನಿಧಿಗೆ ₹25 ಸಾವಿರ ಕೊಡುಗೆ ಘೋಷಿಸಿದರು.
ಇಸಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಲಕ್ಷ್ಮಿ ಶೆಟ್ಟರ್ ಅಧ್ಯಕ್ಷತೆ ವಹಿಸಿದ್ದರು. ಎಸ್.ಡಿ.ಎಂ.ಸಿ ಸದಸ್ಯ ಸಿದ್ದಲಿಂಗ ಹಿರೇಮಠ ಹಾಗೂ ಇತರರಿದ್ದರು. ಮುಖ್ಯಶಿಕ್ಷಕಿ ಸುಮಂಗಲಾ ಜೋಶಿ ಸ್ವಾಗತಿಸಿದರು. ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ಕಿರಣ ಕುಮಾರ ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ದಿವಾಕರ ಮರಾಠಿ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.