ಕಾರವಾರ: ತಾಲ್ಲೂಕಿನ ತೊಡುರು ಅರಣ್ಯದಲ್ಲಿರುವ ಗೊಲಾರಿ ಜಲಪಾತದ ಪ್ರದೇಶದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಭಾನುವಾರ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯದಲ್ಲಿ 30 ಚೀಲಗಳಷ್ಟು (50 ಕೆ.ಜಿ ಸಾಮರ್ಥ್ಯದ ಚೀಲ) ಕಸವನ್ನು ಸಂಗ್ರಹಿಸಲಾಯಿತು.
ಜಿಲ್ಲಾಧಿಕಾರಿ ಸೂಚನೆಯ ಮೇರೆಗೆ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿ ರವಿ ವಾಲೇಕಾರ್ ನೇತೃತ್ವದಲ್ಲಿ ಸ್ವಚ್ಛತಾ ಕಾರ್ಮಿಕರು, ಜೀವರಕ್ಷಕ, ಪ್ರವಾಸಿ ಮಿತ್ರ, ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ಸ್ವಚ್ಛತಾ ಕಾರ್ಯ ನಿರ್ವಹಿಸಿದರು. ಈ ವೇಳೆ ಸ್ಥಳೀಯರೂ ಕೈಜೋಡಿಸಿದರು.
ನೂರಾರು ಪ್ರವಾಸಿಗರಿಂದಾಗಿ ಈ ಜಲಪಾತ ಕೆಲವು ವರ್ಷಗಳ ಹಿಂದಷ್ಟೇ ಪ್ರವಾಸಿ ತಾಣವಾಗಿ ರೂಪುಗೊಂಡಿರುತ್ತು. ಆದರೆ, ಇಲ್ಲಿಗೆ ಭೇಟಿ ನೀಡುವವರು ತಾವು ಕೊಂಡೊಯ್ದ ಉಪಹಾರದ ಪೊಟ್ಟಣ, ತಂಪು ಪಾನೀಯಗಳ ಬಾಟಲ್ಗಳು, ಪ್ಲಾಸ್ಟಿಕ್ ತಟ್ಟೆ, ಲೋಟಗಳನ್ನು ಜಲಪಾತದ ಬಳಿ ಎಸೆದು ಬರುತ್ತಿದ್ದರು. ಹೀಗಾಗಿ ಜಲಪಾತದ ಬಳಿ ತ್ಯಾಜಗಳ ರಾಶಿಯೇ ತುಂಬಿತ್ತು. ಅನೇಕ ಪರಿಸರ ಪ್ರೇಮಿಗಳು ಈ ಬಗ್ಗೆ ದೂರಿದ್ದರು. ‘ಪ್ರಜಾವಾಣಿ’ಯೂ ಈ ಹಿಂದೆ ವರದಿ ಮಾಡಿತ್ತು.
ಈ ಬಗ್ಗೆ ಎಚ್ಚೆತ್ತುಕೊಂಡ ಜಿಲ್ಲಾಡಳಿತವು ಪ್ರವಾಸೋದ್ಯಮ ಇಲಾಖೆಗೆ ಸ್ವಚ್ಛತೆಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿತ್ತು. ಅದರಂತೆ ಅಧಿಕಾರಿಗಳು ಭಾನುವಾರ ಸ್ವಚ್ಛತೆ ನಡೆಸಿದರು. ಅದರೊಂದಿಗೆ, ಪ್ರವಾಸಿಗರು ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುವುದನ್ನು ತಡೆಯಲು ಅಲ್ಲಲ್ಲಿ ಬೆತ್ತದ ಬುಟ್ಟಿಗಳನ್ನು ಮರಗಳಿಗೆ ಅಳವಡಿಸಲಾಗಿದೆ. ಸೂಚನಾ ಫಲಕಗಳನ್ನೂ ಹಾಕಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.