ADVERTISEMENT

ಕುಮಟಾ: ತಮಿಳುನಾಡು ಮೂಲದ ಇಬ್ಬರು ಮನೆಗಳ್ಳರ ಬಂಧನ

​ಪ್ರಜಾವಾಣಿ ವಾರ್ತೆ
Published 6 ಜನವರಿ 2020, 14:34 IST
Last Updated 6 ಜನವರಿ 2020, 14:34 IST
ಕುಮಟಾದಲ್ಲಿ ತಮಿಳುನಾಡಿನ ಇಬ್ಬರು ಕಳ್ಳರನ್ನು ಸೋಮವಾರ ಬಂಧಿಸಿದ ಪೊಲೀಸರು, ಚಿನ್ನಾಭರಣವನ್ನು ಜಪ್ತಿ ಮಾಡಿರುವುದು
ಕುಮಟಾದಲ್ಲಿ ತಮಿಳುನಾಡಿನ ಇಬ್ಬರು ಕಳ್ಳರನ್ನು ಸೋಮವಾರ ಬಂಧಿಸಿದ ಪೊಲೀಸರು, ಚಿನ್ನಾಭರಣವನ್ನು ಜಪ್ತಿ ಮಾಡಿರುವುದು   

ಕುಮಟಾ: ಪಟ್ಟಣ ಹಾಗೂ ಬೆಂಗಳೂರು ಸುತ್ತಮುತ್ತ ಮನೆಗಳಲ್ಲಿ ಕಳವು ಮಾಡುತ್ತಿದ್ದಇಬ್ಬರು ಆರೋಪಿಗಳನ್ನು ಕುಮಟಾ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಅವರಿಂದ ಕಳವು ಮಾಡಿದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ತಮಿಳುನಾಡಿನ ‌ಹೊಸೂರು ನಿವಾಸಿಗಳಾದ ಜಿ.ಗೋಪಿ ಹಾಗೂ ಡೇವಿಡ್ ಬಂಧಿತರು. ಗೋಪಿಯ ತಮ್ಮ, ಮತ್ತೊಬ್ಬ ಆರೋಪಿ ರಾಜು ತಪ್ಪಿಸಿಕೊಂಡಿದ್ದಾನೆ.ಕುಮಟಾದಹೆಗಡೆ ಕ್ರಾಸ್ ಎದುರುರಾಷ್ಟ್ರೀಯ ಹೆದ್ದಾರಿ 66ರ ಅಂಚಿನ ಗಜಾನನ ಗೌರಯ್ಯ ಅವರ ಮನೆಯಲ್ಲಿ ಈಚೆಗೆ ₹ 9.81 ಲಕ್ಷ ಮೌಲ್ಯದ ಚಿನ್ನಾಭರಣ ಕಳವಾಗಿತ್ತು.ಪ್ರಕರಣವನ್ನು ಭೇದಿಸಲುಭಟ್ಕಳದ ಎ.ಎಸ್‌.ಪಿನಿಖಿಲ್ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು.

ಫೋರ್ಡ್ ಕಾರಲ್ಲಿ ಸಂಚಾರ!

ADVERTISEMENT

ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ‘ಕುಮಟಾದ ಗಿಬ್ ವೃತ್ತದಲ್ಲಿ ಸೋಮವಾರ ಬೆಳಿಗ್ಗೆ ಫೋರ್ಡ್ ಕಾರೊಂದು ಅನುಮಾನಾಸ್ಪದವಾಗಿ ಸಂಚರಿಸುತ್ತಿತ್ತು. ಗಸ್ತು ತಿರುಗುತ್ತಿದ್ದ ಪೊಲೀಸರು ಅದನ್ನು ತಡೆದು ತಪಾಸಣೆ ನಡೆಸಿದಾಗ ಕಬ್ಬಿಣದ ಸಲಾಕೆ ಮತ್ತಿತರ ಮಾರಕಾಸ್ತ್ರಗಳು ಕಂಡವು. ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ವಿವಿಧ ಊರುಗಳಲ್ಲಿ ಅವರ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದು ತಿಳಿಯಿತು’ ಎಂದು ಹೇಳಿದರು.

‘ರಾಜು ವಿರುದ್ಧ ಬೆಂಗಳೂರು ಸುತ್ತಮುತ್ತ 26, ಗೋಪಿ ವಿರುದ್ಧ 11 ಹಾಗೂ ಡೇವಿಡ್ ವಿರುದ್ಧಆರುಬೇರೆ ಬೇರೆ ಪ್ರಕರಣಗಳು ದಾಖಲಾಗಿವೆ.ಬಂಧಿತರಿಂದ ಕುಮಟಾದಲ್ಲಿ ಕಳವು ಮಾಡಿದ ಆಭರಣ, ನಗದು ವಶಪಡಿಸಿಕೊಳ್ಳಲಾಗಿದೆ. ಅಂಕೋಲಾದ ಕೃಷ್ಣಕುಮಾರ ಗಣಪತಿ ನಾಯ್ಕ ಅವರ ಮನೆಯಿಂದ ಕದ್ದ ₹ 18 ಸಾವಿರ ನಗದು ಸಹ ಸಿಕ್ಕಿದೆ. ಕೃತ್ಯಕ್ಕೆಬಳಸಿದ ಕಾರನ್ನೂ ಜಪ್ತಿ ಮಾಡಲಾಗಿದೆ’ ಎಂದು ತಿಳಿಸಿದರು.

ಪೊಲೀಸ್ ಸಿಬ್ಬಂದಿ ನಿಯೋಜನೆ

‘ಪಟ್ಟಣದ ಹೊರವಲಯದಲ್ಲಿರುವ ಒಂಟಿ ಮನೆಗಳ ನಿವಾಸಿಗಳು ಹೊರಗೆ ಹೋಗುವ ಮುನ್ನ ಸ್ಥಳೀಯ ಬೀಟ್ ಪೊಲೀಸರಿಗೆ ಅಥವಾ ಠಾಣೆಗೆ ತಿಳಿಸಿದರೆ ನಿಗಾ ಇಡಲು ಅನುಕೂಲವಾಗುತ್ತದೆ. ಇದಕ್ಕಾಗಿಯೇ ಕುಮಟಾದಲ್ಲಿ18 ಪೊಲೀಸ್ ಬೀಟ್‌ಗಳನ್ನು ಆರಂಭಿಸಲಾಗಿದೆ. ಪಟ್ಟಣದಲ್ಲಿ ಅಪರಾಧಗಳನ್ನು ತಡೆಯುವ ಉದ್ದೇಶದಿಂದ ಬೆಳಿಗ್ಗೆ 9ರಿಂದ 11 ಹಾಗೂ ಸಂಜೆ 5ರಿಂದ 7ವರೆಗೆ ಅಲ್ಲಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗುವುದು’ ಎಂದು ಶಿವಪ್ರಕಾಶ್ ದೇವರಾಜು ತಿಳಿಸಿದರು.

ಪೊಲೀಸರ ತಂಡದಲ್ಲಿ ಸಿ.ಪಿ.ಐ ಪರಮೇಶ್ವರ ಗುನಗಾ, ಪಿ.ಎಸ್.ಐ ಆನಂದಮೂರ್ತಿ, ಸಿಬ್ಬಂದಿ ಮಾರುತಿ ಗಾಳಿಪೂಜಿ, ದಯಾನಂದ ನಾಯ್ಕ, ಸಂತೋಷ ಬಾಳೇರ, ಕೃಷ್ಣ.ಎನ್.ಜೆ., ಬಸವರಾಜ ಜಾಡರ್, ಹುಚ್ಚಪ್ಪ ಚಾವಡಿ, ಸುರೇಂದ್ರ ಮಗದಮ್ಮ, ಹಾಲಪ್ಪ ಬಾಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.