ಶಿರಸಿ: ಹದವಾದ ಮಳೆಯ ಜತೆ ಬಿರುಸಿನ ಗಾಳಿ ಬೀಸುತ್ತಿರುವ ಪರಿಣಾಮ ತಾಲ್ಲೂಕಿನ ಹಲವೆಡೆ ಶನಿವಾರ ಮರಗಳು ಧರೆಗುರುಳಿದರೆ, ಕೆಲವೆಡೆ ಮನೆ ಕುಸಿತಗೊಂಡಿವೆ.
ತಾಲ್ಲೂಕಿನ ಬದನಗೋಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಕೊಪ್ಪ ಗ್ರಾಮದಲ್ಲಿ ಮನೆಯ ಗೋಡೆ ಕುಸಿದಿದ್ದು, ಗೋಡೆ ಪಕ್ಕದಲ್ಲಿ ಮಲಗಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರೇಣುಕಾ ಲಕ್ಷ್ಮಣ ಭೋವಿವಡ್ಡರ್ ಇವರಿಗೆ ಸೇರಿದ ಮನೆಯ ಗೋಡೆ ಮಳೆಯ ರಭಸಕ್ಕೆ ಬಿದ್ದು ಹಾನಿಯಾಗಿದೆ.
ಇಸಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವನಿಲಯದ ಸಾವಿತ್ರಿ ನಾರಾಯಣ ಮೊಗೇರ ಅವರ ಮನೆಯ ಚಾವಣಿ ಮತ್ತು ಗೋಡೆ ಕುಸಿದು ಹಾನಿ ಉಂಟಾಗಿದೆ. ಸುದ್ದಿ ತಿಳಿದ ಶಾಸಕ ಭೀಮಣ್ಣ ನಾಯ್ಕ ಅವರು ಭೇಟಿ ನೀಡಿ ಮನೆಯ ದಿನಸಿ ಖರೀದಿಗೆ ವೈಯಕ್ತಿಕವಾಗಿ ಧನ ಸಹಾಯ ಮಾಡಿದರು. ಪರಿಶೀಲಿಸಿ ಶೀಘ್ರ ಪರಿಹಾರ ಒದಗಿಸುವಂತೆ ಸ್ಥಳದಲ್ಲಿಯೇ ಇದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ದೊಡ್ನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಕ್ನಳ್ಳಿಗೆ ಸಾಗುವ ರಸ್ತೆಯಲ್ಲಿ ಬೃಹತ್ ಗಾತ್ರದ ಮರ ನೆಲಕ್ಕುರುಳಿ ವಾಹನ ಸಂಚಾರಕ್ಕೆ ವ್ಯತ್ಯಯ ಉಂಟಾಗಿತ್ತು. ಇಟಗುಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಇಡ್ತಳ್ಳಿ ಬಳಿ ಬೃಹತ್ ಗಾತ್ರದ ಮರ ರಸ್ತೆಗೆ ಬಿದ್ದ ಪರಿಣಾಮ ಸಂಚಾರ ಸ್ಥಗಿತವಾಗಿದ್ದಲ್ಲದೇ, ವಿದ್ಯುತ್ ಮಾರ್ಗದ ಮೇಲೆ ಮರ ಬಿದ್ದು, ಕಂಬಗಳು ಧರೆಗುರುಳಿ ವಿದ್ಯುತ್ ಸಂಪರ್ಕ ಕಡಿತವಾಗಿದೆ.
ಬರೂರ್ ರಸ್ತೆಯಲ್ಲಿರುವ ಶೆಡಿಕುಳಿ ಬಸ್ ತಂಗುದಾಣದ ಸಮೀಪ ಎರಡು ಅಕೇಶಿಯಾ ಮರ ವಿದ್ಯುತ್ ತಂತಿ ಮೇಲೆ ಬಿದ್ದು ದೊಡ್ಡ ಗಾತ್ರದ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಈ ಬಗ್ಗೆ ಮಾಹಿತಿ ತಿಳಿಯದೇ ಹೋಗಿರುವ ಬಸ್ ಕೂಡಾ ವಾಪಸ್ಸಾಯಿತು.
ಮನೆಗಳು ಕುಸಿತ: ₹2.07 ಲಕ್ಷ ಹಾನಿ
ಕುಮಟಾ: ನಿರಂತರ ಗಾಳಿ-ಮಳೆಯಿಂದ ತಾಲ್ಲೂಕಿನ ಲುಕ್ಕೇರಿಯ ಮಾಣಿಕಟ್ಟಾ ಕಗ್ಗ ಬೆಳೆಗಾರರ ಸಂಘದ ಕಾರ್ಯದರ್ಶಿ ಶ್ರೀಧರ ಪೈ ಅವರ ಮನೆಯ ಮೇಲೆ ಅರಳಿ ಮರ ಬಿದ್ದು, ₹1.20 ಲಕ್ಷ ಹಾನಿ ಸಂಭವಿಸಿದೆ.
ತಾಲ್ಲೂಕಿನ ಹೊಸ್ಕೇರಿಯ ಪ್ರಭಾಕರ ಪಟಗಾರ ಎನ್ನುವವರ ಮನೆಯ ಗೋಡೆ ಕುಸಿದು ₹ 20 ಸಾವಿರ ಹಾನಿ ಸಂಭವಿಸಿದೆ.
ತಾಲ್ಲೂಕಿನ ಕಲ್ಕೋಡ ಗ್ರಾಮದ ಗಂಗಾಧರ ಗೌಡ ಎನ್ನುವವರ ಮನೆಯ ಮೇಲೆ ಮಾವಿನ ಮರ ಮುರಿದು ಬಿದ್ದು ₹25 ಸಾವಿರ ಹಾನಿ ಸಂಭವಿಸಿದೆ. ಪಟ್ಟಣದ ಪೈರಗದ್ದೆಯ ಪದ್ಮಾವತಿ ಮಂಜುನಾಥ ಎನ್ನುವವರ ಮನೆಯ ಅಡುಗೆ ಕೋಣೆಯ ಚಾವಣಿ ಕುಸಿದು ₹40 ಸಾವಿರ ಹಾನಿ ಸಂಭವಿಸಿದೆ.
ತಾಲ್ಲೂಕಿನ ಹೊಳೆಗದ್ದೆಯ ರಾಧಾ ಭಂಡಾರಿ ಎನ್ನುವವರ ಪಂಸ್ ಶೆಡ್ ಮೇಲೆ ಮರ ಬಿದ್ದು ಅಂದಾಜು ₹2 ಸಾವಿರ ಹಾನಿಯುಂಟಾಗಿದೆ.
‘ಶಿರಸಿ-ಕುಮಟಾ ರಸ್ತೆಯ ದೇವಿಮನೆ ಘಟ್ಟದ ದೇವಾಲಯ ಪಕ್ಕದ ಕೆಳಭಾಗದ ಗುಡ್ಡ ಕುಸಿದಿದೆ. ಅಲ್ಲಿ ಪ್ರವಾಸಿಗರು ನಿಂತು ಪ್ರಕೃತಿ ಸೌಂದೌರ್ಯ ವೀಕ್ಷಿಸುತ್ತಿದ್ದರು. ಗುಡ್ಡ ಕುಸಿದ ರಸ್ತೆ ಸಮೀಪ ಈಗ ಬ್ಯಾರಿಕೇಡ್ ಅಳವಡಿಸಿ ಜನರು ಓಡಾಡದಂತೆ ತಡೆಯಲಾಗಿದೆ’ ಎಂದು ತಹಶೀಲ್ದಾರ್ ಕೃಷ್ಣ ಕಾಮಕರ್ ತಿಳಿಸಿದರು.
‘ಮಳೆ ಆಗಾಗ ಬೀಳುತ್ತಿರುವುದರಿಂದ ತಾಲ್ಲೂಕಿನ ಕೋನಳ್ಳಿ ಹಾಗೂ ಉರಕೇರಿಯಲ್ಲಿ ಶನಿವಾರ ಆರಂಭಿಸಲಾದ ಎರಡು ಕಾಳಜಿ ಕೇಂದ್ರಗಳನ್ನು ಮಂದುವರಿಸಲಾಗಿದೆ. ನೆರೆ ಮುಂಜಾಗ್ರತಾ ಕ್ರಮಗಳ ಬಗ್ಗೆ ಶಾಸಕರ ಅಧ್ಯಕ್ಷತೆಯಲ್ಲಿ ಭಾನುವಾರ ತುರ್ತು ಸಭೆ ಕರೆಯಲಾಗಿತ್ತು’ ಎಂದು ಮಾಹಿತಿ ನೀಡಿದರು.
ನೆರೆ: ನಾಲ್ಕು ಮನೆಗಳಿಗೆ ಹಾನಿ
ಹೊನ್ನಾವರ: ತಾಲ್ಲೂಕಿನಲ್ಲಿ ಶನಿವಾರ ಮಳೆಯ ಪ್ರಮಾಣ ತಗ್ಗಿದೆಯಾದರೂ ಶುಕ್ರವಾರ ಸುರಿದ ಭಾರಿ ಮಳೆಗೆ ಉಕ್ಕೇರಿದ್ದ ನದಿ ಹಾಗೂ ಹಳ್ಳಗಳ ದಂಡೆಗಳ ಕೆಲ ತಗ್ಗು ಪ್ರದೇಶಗಳಲ್ಲಿ ಇನ್ನೂ ನೀರು ತುಂಬಿಕೊಂಡಿದ್ದು, ಮಳೆ ಹೆಚ್ಚಾದರೆ ಮತ್ತೆ ನೆರೆ ಬರಬಹುದೆಂಬ ಆತಂಕದ ಸ್ಥಿತಿ ಮುಂದುವರಿದಿದೆ.
ಚಿಕ್ಕನಕೋಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಂಡಬಾಳಾ ನದಿ ದಂಡೆಗಳಲ್ಲಿ 3, ಭಾಸ್ಕೇರಿ ಹಳ್ಳದ ದಂಡೆಯಲ್ಲಿ 1, ಕಲ್ಕಟ್ಟೆ, ಹಳದೀಪುರ, ಮಾಡಗೇರಿ, ಕಡತೋಕಾ ಹಾಗೂ ಮಲ್ಲಾಪುರದಲ್ಲಿ ತಲಾ ಒಂದು ಸೇರಿದಂತೆ ಒಟ್ಟೂ 9 ಕಾಳಜಿ ಕೇಂದ್ರಗಳನ್ನು ಮುಂದುವರಿಸಲಾಗಿದ್ದು 368 ನೆರೆ ಸಂತ್ರಸ್ತರು ಪ್ರಸ್ತುತ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ.
ಅತಿವೃಷ್ಠಿಯಿಂದ ಮಲ್ಲಾಪುರ, ಸಾಲ್ಕೋಡ, ಮುಗ್ವ ಹಾಗೂ ಹೆರಂಗಡಿ ಗ್ರಾಮಗಳಲ್ಲಿ ತಲಾ ಒಂದು ಮನೆಗೆ ಹಾನಿಯುಂಟಾಗಿದೆ. ಹಡಿನಬಾಳದಿಂದ ಚಿಕ್ಕನಕೋಡಿಗೆ ಹೋಗುವ ಮಾರ್ಗಮಧ್ಯದ ಅರಣ್ಯ ಪ್ರದೇಶದಲ್ಲಿ ಹಾಗೂ ಮಂಕಿ ಚಿತ್ತಾರ ಗ್ರಾಮದ ಅಡಿಕೆಕುಳಿಯ ಮನೆಯೊಂದರ ಹಿಂದಿನ ಧರೆ ಕುಸಿದಿರುವ ವರದಿಯಾಗಿದೆ.
ಭಾರಿ ಗಾಳಿ ಸಹಿತ ಮಳೆ: ಹಲವೆಡೆ ಹಾನಿ
ಸಿದ್ದಾಪುರ: ತಾಲ್ಲೂಕಿನಲ್ಲಿ ಭಾರಿ ಗಾಳಿ ಸಹಿತ ಮಳೆಯಾಗುತ್ತಿದ್ದು, ಮುತ್ತಿಗೆ ಗ್ರಾಮದ ಬಿಳಾನೆ ನಿವಾಸಿ ಗಣಪತಿ ಬಡಿಯ ನಾಯ್ಕ ಎಂಬುವವರ ವಾಸದ ಮನೆಯ ಹತ್ತಿರ ಧರೆ ಕುಸಿದಿದ ಪರಿಣಾಮ ಮನೆಯ ಗೋಡೆಗಳು ಬಿರುಕು ಬಿಟ್ಟಿವೆ. ಮಳೆ, ಗಾಳಿ ಹೆಚ್ಚಾದಲ್ಲಿ ಗೋಡೆ ಬಿದ್ದು ಹಾನಿ ಉಂಟಾಗುವ ಸಂಭವ ಇದೆ. ಕಾರಣ ಮನೆಯ ನಿವಾಸಿಗಳಿಗೆ ಮಗಳ ಮನೆಗೆ ಸ್ಥಳಾಂತರ ಆಗುವಂತೆ ತಿಳಿಸಲಾಗಿದೆ.
ತಾಲ್ಲೂಕಿನ ಹೆಗ್ಗರಣಿ ಗ್ರಾಮದ ದುಗ್ಗನಗುಳಿ ಮಜರೆಯ ಕಮಲಾಕರ ಯಂಕ ಗೌಡರವರ ವಾಸ್ತವ್ಯದ ಕಚ್ಚಾ ಮನೆಯ ಮೇಲೆ ಮರ ಬಿದ್ದು ಅಂದಾಜು ₹20,000 ಹಾನಿಯಾಗಿದೆ. ಘಟನೆಯಿಂದ ಯಾವುದೇ ಪ್ರಾಣ ಹಾನಿ ಆಗಿಲ್ಲ.ತಾಲ್ಲೂಕಿನ ಕವಲಕೊಪ್ಪ ಸಮೀಪದ ಮುತ್ತಿಗೆ (ಗೋಳ ಗೊಡ) ಗ್ರಾಮದ ಐದ್ನಳ್ಳಿ ಮಜರೆಯ ವನಿತಾ ಚಂದ್ರಶೇಖರ ನಾಯ್ಕ ಎಂಬುವವರ ವಾಸ್ತವ್ಯದ ಮನೆ ಚಾವಣಿ ಹಾರಿ ಹೆಂಚುಗಳು, ಸಿಮೆಂಟ್ ಶೀಟುಗಳು, ಗೃಹಪಯೋಗಿ ಸಾಮಗ್ರಿಗಳು ಹಾನಿಯಾಗಿವೆ. ₹15,000 ಹಾನಿಯಾಗಿದೆ .
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.