ಶಿರಸಿ: ಇಲ್ಲಿನ ರೌಡಿ ಶೀಟರ್ ಫಯಾಜ್ ಚೌಟಿ (ಪಯ್ಯು) ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಜೊತೆ ತನ್ನ ಬೆಂಬಲಿಗರೊಂದಿಗೆ ಇತ್ತೀಚೆಗೆ ಗುಪ್ತವಾಗಿ ಸಭೆ ನಡೆಸಿರುವುದು ಇದೀಗ ಹಲವು ಚರ್ಚೆಗೆ ಎಡೆಮಾಡಿಕೊಟ್ಟಿದೆ.
ದರೋಡೆ, ಬ್ಲಾಕ್ ಮೇಲ್, ಹಣ ವಂಚನೆ, ಅಪಹರಣ ಸೇರಿದಂತೆ 17ಕ್ಕೂ ಹೆಚ್ಚು ಪ್ರಕರಣದಲ್ಲಿ ಆರೋಪಿಯಾಗಿರುವ ಫಯಾಜ್ ಚೌಟಿ, ಭೂಗತ ಪಾತಕಿ ಹೆಬ್ಬೆಟ್ಟು ಮಂಜ ಸೇರಿದಂತೆ ಅನೇಕರೊಂದಿಗೆ ಸಂಪರ್ಕದಲ್ಲಿದ್ದಾನೆ. ಆದರೆ 5 ದಿನಗಳ ಹಿಂದೆ ಗುಪ್ತವಾಗಿ 50ಕ್ಕೂ ಹೆಚ್ಚು ಬೆಂಬಲಿಗರೊಂದಿಗೆ ಕಾಗೇರಿ ಕಚೇರಿಯಲ್ಲಿ ಚುನಾವಣೆ ಸಂಬಂಧ ಚೌಟಿ ಸಭೆ ನಡೆಸಿರುವ ಫೊಟೊ ಇದೀಗ ಎಲ್ಲೆಡೆ ವೈರಲ್ ಆಗಿದೆ.
ಫೋಟೊದಲ್ಲಿ ಕಾಗೇರಿ ಪಕ್ಕದಲ್ಲೇ ಕುಳಿತು ಚೌಟಿ ಸಭೆ ನಡೆಸಿದ್ದಾನೆ. ಇನ್ನು ಸಭೆಯ ಎರಡು ದಿನದ ನಂತರ ಹಂದಿ ಅಣ್ಣಿ ಕೊಲೆ ಆರೋಪಿಗಳನ್ನು ತನ್ನ ಅಂಬ್ಯುಲೆನ್ಸ್ ಮೂಲಕ ಎಸ್ಕೆಪ್ ಮಾಡಿಸಿದ ಆರೋಪದಡಿ 2 ದಿನಗಳ ಹಿಂದೆಯಷ್ಟೇ ದಾವಣಗೆರೆ ಪೊಲೀಸರಿಂದ ಬಂಧನವಾಗಿದ್ದು, ಹೀಗಾಗಿ ಈ ಭೇಟಿ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಕಾಗೇರಿ ಕಚೇರಿ ಮೂಲಗಳ ಪ್ರಕಾರ ಈತ ಕ್ಷೇತ್ರದ ಯಾವುದೋ ಸಮಸ್ಯೆ ಇಟ್ಟುಕೊಂಡು ಕಾಗೇರಿ ಬಳಿ ಚರ್ಚೆಗೆ ಬಂದಿದ್ದರು ಎಂದು ಹೇಳಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.