
ಅಂಕೋಲಾ: ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆ ಜಲ ಜೀವನ್ ಮಿಷನ್ ಪ್ರಗತಿಯು ಸರ್ಕಾರಿ ಇಲಾಖೆಗಳ ತಕರಾರು ಹಾಗೂ ಅನುದಾನದ ಕೊರತೆಯಿಂದ ತಾಲ್ಲೂಕಿನಲ್ಲಿ ಕುಂಠಿತವಾಗಿದೆ ಎಂಬ ದೂರು ಹೆಚ್ಚಿದೆ.
ತಾಲ್ಲೂಕಿನಲ್ಲಿ ಯೋಜನೆಯಡಿ 73 ಕಾಮಗಾರಿಗಳಿಗೆ ಅನುಮೋದನೆ ಸಿಕ್ಕಿದೆ. ಅವುಗಳ ಪೈಕಿ 45 ಕಾಮಗಾರಿಗಳು ಪೂರ್ಣಗೊಂಡಿವೆ. ಇನ್ನೂ 28 ಕಾಮಗಾರಿಗಳು ನನೆಗುದಿಗೆ ಬಿದ್ದಿವೆ.
‘ತಾಂತ್ರಿಕ ಕಾರಣ, ವಿದ್ಯುತ್ ಸರಬರಾಜು ಆಗದಿರುವುದು, ಪೈಪ್ಲೈನ್ ಅಳವಡಿಕೆಗೆ ಹೆದ್ದಾರಿ ಪ್ರಾಧಿಕಾರ, ಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಂದ ಅನುಮತಿ ಸಿಗದೆ ಈ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗುತ್ತಿಲ್ಲ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
‘2021-22 ನೇ ಸಾಲಿನಿಂದ ಹಲವು ಬಾರಿ ಟೆಂಡರ್ ಆಹ್ವಾನಿಸಿದರೂ ಗುತ್ತಿಗೆದಾರರು ಕಾಮಗಾರಿಗಳನ್ನು ನಿರ್ವಹಿಸಲು ಹಿಂದೇಟು ಹಾಕಿದ ಪರಿಣಾಮ ಕೆಲವೆಡೆ ಕಾಮಗಾರಿ ಆರಂಭಿಸಲಾಗಿಲ್ಲ’ ಎಂದೂ ಹೇಳಿದರು.
‘ಕೆಲ ಗ್ರಾಮಗಳಲ್ಲಿ ಪೈಪ್ಲೈನ್, ನಲ್ಲಿ ಸಂಪರ್ಕ ಹಾಗೂ ಬಾವಿ, ನೀರಿನ ಟ್ಯಾಂಕ್ ನಿರ್ಮಾಣ ಕಾಮಗಾರಿಗಳು ಪೂರ್ಣಗೊಂಡಿವೆ. ಆದರೆ, ನೀರು ಎತ್ತಿ, ಸಂಗ್ರಹಿಸಿ ಪೂರೈಸಲು ವಿದ್ಯುತ್ ಸಂಪರ್ಕವನ್ನೇ ನೀಡಿಲ್ಲ. ಸುಂಕಸಾಳ, ಅಚವೆ, ಬ್ರಹ್ಮೂರು, ಗುಡಿ ನೆವಳಸೆ, ಬಿದರಳ್ಳಿ, ಡೋಂಗ್ರಿ, ಅಗಸೂರು ಗ್ರಾಮಗಳಲ್ಲಿ ಕಾಮಗಾರಿ ಪೂರ್ಣಗೊಂಡು ವರ್ಷಗಳೇ ಕಳೆದರೂ ನೀರು ಸರಬರಾಜು ಮಾಡುವ ಕೆಲಸ ಆರಂಭವಾಗಿಲ್ಲ’ ಎಂದು ಗುತ್ತಿಗೆದಾರರೊಬ್ಬರು ಹೇಳಿದರು.
‘ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ತಕರಾರು ಇದ್ದ ಕಾರಣದಿಂದ ವಂದಿಗೆ, ಬೆಳಸೆ, ಶೆಟಗೇರಿ, ವಾಸರ ಕುದ್ರಿಗೆ, ಹೊನ್ನೇಬೈಲ್ ಮತ್ತು ಬೆಳಂಬಾರ ಸೇರಿದಂತೆ 6 ಗ್ರಾಮ ಪಂಚಾಯಿತಿಗಳಿಗೆ ಹೊನ್ನಳ್ಳಿಯ ಗಂಗಾವಳಿ ನದಿಯಿಂದ ಪೈಪ್ಲೈನ್ ಮೂಲಕ ನೀರು ಸರಬರಾಜು ಮಾಡುವ ವಾಸರ ಕುದ್ರಿಗೆ ಬಹುಗ್ರಾಮ ಕುಡಿಯುವ ನೀರು ಸ್ಥಗಿತಗೊಂಡಿದೆ. ಅಡ್ಲೂರು ಗ್ರಾಮಕ್ಕೆ ನೀರು ಪೂರೈಸಲು ಪೈಪ್ಲೈನ್ ಅಳವಡಿಕೆಗೆ ಪ್ರಾಧಿಕಾರದಿಂದ ಅನುಮತಿ ಸಿಗದೆ ವಿಳಂಬವಾಗಿದೆ’ ಎಂದೂ ಹೇಳಿದರು.
‘ಕಾಮಗಾರಿಗಳಿಗೆ ಅನುದಾನದ ಕೊರತೆ ನೀಡಿ ಇಲಾಖೆಗಳು ಅನವಶ್ಯಕವಾಗಿ ಬಿಲ್ ಕಡಿತ ಮಾಡುತ್ತಿವೆ. ಕಾಮಗಾರಿ ನಿರ್ಮಾಣದ ಅವಧಿ ವಿಸ್ತರಣೆಗೆ ಅನುಮತಿ ಪಡೆಯಲು ಬೇರೆ ಇಲಾಖೆಯ ಕಚೇರಿಗಳಿಗೆ ಪದೇ ಪದೇ ಅಲೆಯಬೇಕಾದ ಪರಿಸ್ಥಿತಿಯಿಂದ ಗುತ್ತಿಗೆದಾರರು ಆಸಕ್ತಿ ಕಳೆದುಕೊಂಡಿರುವುದು ಕಾಮಗಾರಿ ವಿಳಂಬಕ್ಕೆ ಕಾರಣವಾಗಿದೆ’ ಎನ್ನುತ್ತಾರೆ ಗುತ್ತಿಗೆದಾರರೊಬ್ಬರು.
‘ಕಾಮಗಾರಿಗಳು ಮುಕ್ತಾಯಗೊಂಡು ವರ್ಷಗಳೇ ಕಳೆದಿದೆ. ಆದರೆ ಮನೆಗಳಿಗೆ ನೀರು ಸರಬರಾಜು ಮಾಡಲು ವಿದ್ಯುತ್, ಜಲಮೂಲ ಮತ್ತು ಹೆದ್ದಾರಿ ಪ್ರಾಧಿಕಾರದ ಸಮಸ್ಯೆಗಳಿಂದ ಅಪೂರ್ಣಗೊಂಡಿದ್ದು, ಸಮಸ್ಯೆ ಪರಿಹಾರಕ್ಕೆ ಸಾಕಷ್ಟು ಬಾರಿ ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆದರೂ ಪ್ರಯೋಜನವಾಗಿಲ್ಲ’ ಎಂದು ಅಗಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಿರ್ಮಲಾ ನಾಯಕ ದೂರಿದರು.
ಕಾಮಗಾರಿ ನಡೆಯುವ ಸ್ಥಳದಲ್ಲಿ ಕೆಲ ಸಮಸ್ಯೆಗಳಿರುವುದು ನಿಜ. ಅವುಗಳನ್ನು ಶೀಘ್ರದಲ್ಲಿ ಬಗೆಹರಿಸಿ ಕಾಮಗಾರಿ ಪೂರ್ಣಗೊಳಿಸಲು ಪ್ರಯತ್ನಿಸಲಾಗುತ್ತಿದೆ ರಾಘವೇಂದ್ರ ನಾಯ್ಕ ಸಹಾಯಕ ಎಂಜಿನಿಯರ್ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ
ಶುದ್ಧೀಕರಣ ಘಟಕಕ್ಕೆ ವಿರೋಧ
‘ಹಿಲ್ಲೂರು ಡೋಂಗ್ರಿ ಮತ್ತು ಅಚವೆ ಪಂಚಾಯಿತಿ ವ್ಯಾಪ್ತಿಯ ಕಾಮಗಾರಿಗಳ ಮುಂದುವರಿಸಲು ಅರಣ್ಯ ಇಲಾಖೆ ತಕರಾರು ಮಾಡಿದೆ. ಶಿರಗುಂಜಿ ಗ್ರಾಮದಲ್ಲಿ ಸ್ಥಾಪನೆಯಾಗಬೇಕಿರುವ ಬಹು ಗ್ರಾಮ ಕುಡಿಯವ ನೀರು ಯೋಜನೆಯ ನೀರು ಶುದ್ಧೀಕರಣ ಘಟಕ ಸ್ಥಾಪನೆಗೂ ಇದೇ ಸಮಸ್ಯೆ ಎದುರಾಗಿದೆ. ಇವಗಳಿಂದ ಯೋಜನೆ ಪ್ರಗತಿ ಕಾಣುತ್ತಿಲ್ಲ’ ಎಂಬುದು ಗ್ರಾಮ ಪಂಚಾಯಿತಿ ಅಧ್ಯಕ್ಷರೊಬ್ಬರ ಆರೋಪ.