
ಗೋಕರ್ಣ: ತೀವ್ರ ಗಾಯಗೊಂಡು ನಾಡಿಗೆ ಬಂದ ಕಾಡುಹಂದಿಯನ್ನು ಅರಣ್ಯ ಇಲಾಖೆಯವರು ಸ್ಥಳೀಯರ ಸಹಾಯದಿಂದ ರಕ್ಷಿಸಿ ಚಿಕಿತ್ಸೆ ನೀಡಿ ಪುನಃ ಕಾಡಿಗೆ ಬಿಟ್ಟ ಘಟನೆ ಸೋಮವಾರ ನಡೆದಿದೆ.
ತಲಗೇರಿಯ ಮೊಗೇರಿಕಟ್ಟೆಯ ಬಳಿ ಕಾಡುಹಂದಿ ಓಡಾಡುತ್ತಿದ್ದನ್ನು ಗಮನಿಸದ ಸ್ಥಳೀಯರಾದ ರವಿ ಹೊಸ್ಕಟ್ಟಾ, ಗ್ರಾಮ ಪಂಚಾಯ್ತಿ ಸದಸ್ಯ ಸುಜೇಯ ಶೆಟ್ಟಿ ಮೂಲಕ ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದಾರೆ. ಉಪವಲಯ ಅರಣ್ಯಾಧಿಕಾರಿ ರಾಘವೇಂದ್ರ ನಾಯ್ಕ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಆಗಮಿಸಿ, ತದಡಿಯ ಉರಗತಜ್ಞ ಅಶೋಕ ನಾಯ್ಕರ ನೇತೃತ್ವದಲ್ಲಿ ಬಲೆಹಾಕಿ ಹಿಡಿಯಲು ಸಫಲರಾಗಿದ್ದಾರೆ.
ನಂತರ ಗಾಯಗೊಂಡ ಹಂದಿಗೆ ವೈದ್ಯರ ಮಾರ್ಗದರ್ಶನದಂತೆ ಸೂಕ್ತ ಚಿಕಿತ್ಸೆ ನೀಡಿ ಪುನಃ ಕಾಡಿಗೆ ಬಿಡಲಾಯಿತು. ಅಂದಾಜು 4 ವರ್ಷದ ಹೆಣ್ಣು ಹಂದಿ ಇದಾಗಿದ್ದು, ವಾಹನ ಬಡಿದು ಗಾಯವಾಗಿರಬೇಕು. ಸೂಕ್ತ ಚಿಕಿತ್ಸೆ ನೀಡಿದರೆ ಸಂಪೂರ್ಣ ಗುಣಮುಖವಾಗಬಹುದು ಎಂದು ಅಶೋಕ ನಾಯ್ಕ ಪ್ರತಿಕ್ರಿಯಿಸಿದ್ದಾರೆ.
ಪ್ರಶಾಂತ ಗೌಡ, ವೆಂಕಟ್ರಮಣ ಆಗೇರ, ಹೊನ್ನಪ್ಪಾ ಪಟಗಾರ, ಗಂಗಾಧರ ಗೌಡ, ಮಂಜುನಾಥ ನಾಯಕ ತೊರ್ಕೆ, ಶಿವಾನಂದ ನಾಯಕ ಮುಂತಾದವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.