ಶಿರಸಿ: ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಬುಧವಾರ ನಾಗರ ಪಂಚಮಿ ಹಬ್ಬವನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಭಕ್ತರು ನಾಗರ ಬನಕ್ಕೆ ತೆರಳಿ ಕಲ್ಲಿಗೆ ಹಾಲೆರೆದು, ಪೂಜಿಸಿದರು.
ನಗರದ ಸುಬ್ರಹ್ಮಣ್ಯ ದೇವಾಲಯಕ್ಕೆ ಸಹಸ್ರಾರು ಭಕ್ತರು ಭೇಟಿ ನೀಡಿ ಹಣ್ಣು–ಕಾಯಿ ಅರ್ಪಿಸಿದರು. ಉರಗ ತಜ್ಞ ಪ್ರಶಾಂತ ಹುಲೇಕಲ್ ಅವರು ಪ್ರತಿವರ್ಷದಂತೆ ಈ ವರ್ಷ ಸಹ ನಿಜ ನಾಗರಕ್ಕೆ ಪೂಜೆಸಿದರು. ಕಾಡಿನಿಂದ ಹಿಡಿದು ತಂದಿದ್ದ ನಾಗರಹಾವಿಗೆ ಹೂ ಹಾಕಿ, ಆರತಿ ಬೆಳಗಿದರು. ಅವರ ಜೊತೆಗೆ ಕುಟುಂಬದ ಸದಸ್ಯರು, ಪುಟಾಣಿ ಮಕ್ಕಳು ಸಹ ಹೆದರದೇ ನಿಜ ನಾಗರವನ್ನು ಭಕ್ತಿಯಿಂದ ನಮಿಸಿದರು. ನಂತರ ಹಾವನ್ನು ಕಾಡಿಗೆ ಬಿಡಲಾಯಿತು.
‘ಹಾವು ಮನುಷ್ಯನ ಸ್ನೇಹಿತ ಇದ್ದಂತೆ. ಹಾವಿನಿಂದ ಮನುಷ್ಯನಿಗೆ ಅಪಾಯಕ್ಕಿಂತ ಅನುಕೂಲವೇ ಹೆಚ್ಚು. ಹಾವನ್ನು ಕಂಡರೆ ಸಾಯಿಸಬಾರದು. ಅದನ್ನು ಹಿಡಿಯುವ ತಜ್ಞರಿಗೆ ತಿಳಿಸಿ, ಸುರಕ್ಷಿತವಾಗಿ ಕಾಡಿಗೆ ಬಿಡಬೇಕು. ಹಾವಿನ ಸಂತತಿ ಕ್ಷೀಣಿಸುತ್ತಿರುವ ಕಾರಣ ಹಾವಿನ ಸಂರಕ್ಷಣೆಗೆ ಜನರು ಮುಂದಾಗಬೇಕು’ ಎಂದು ಪ್ರಶಾಂತ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.