ಹೊಸಪೇಟೆ (ವಿಜಯನಗರ): ಮಳೆರಾಯ ಮುನಿಸಿಕೊಂಡಿದ್ದರಿಂದ ಜೂನ್ನಲ್ಲಿ ಜಿಲ್ಲೆಯಾದ್ಯಂತ ಬಿತ್ತನೆಗೆ ಭಾರಿ ಹಿನ್ನಡೆ ಉಂಟಾಗಿದೆ.
ಜಿಲ್ಲೆಯಲ್ಲಿ ನೀರಾವರಿ ಹಾಗೂ ಮಳೆಯಾಶ್ರಿತ ಸೇರಿ ಒಟ್ಟು 2.81 ಲಕ್ಷ ಹೆಕ್ಟೇರ್ ಕೃಷಿ ಜಮೀನಿದೆ. ಜೂನ್ ತಿಂಗಳು ಮುಗಿಯಲು ಇನ್ನೊಂದು ವಾರ ಬಾಕಿ ಉಳಿದಿದೆ. ಆದರೆ, ಇದುವರೆಗೆ ಶೇ 30ರಷ್ಟೇ ಬಿತ್ತನೆ ಆಗಿದೆ. ಇನ್ನೊಂದು ವಾರದೊಳಗೆ ಮಳೆಯಾಗದಿದ್ದರೆ ಈಗಾಗಲೇ ಬಿತ್ತನೆ ಆಗಿರುವ ಪ್ರದೇಶದಲ್ಲಿ ಬೀಜ ಮೊಳಕೆಯೊಡೆಯದೇ ನೆಲದಲ್ಲಿ ಹಾಳಾಗುವ ಸಾಧ್ಯತೆ ಹೆಚ್ಚಿದೆ ಎನ್ನುತ್ತಾರೆ ಕೃಷಿ ಇಲಾಖೆಯ ಅಧಿಕಾರಿಗಳು.
ಶೇ 31ರಷ್ಟು ಜಮೀನಿನಲ್ಲಿ ಮುಸುಕಿನ ಜೋಳ, ಹೈಬ್ರಿಡ್ ಜೋಳ, ಹೆಸರು, ತೊಗರಿ, ಹೆಸರು ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಮಾಡಲಾಗಿದೆ. ಜಿಲ್ಲೆಯಲ್ಲಿ ಜೂನ್ನಲ್ಲಿ ಸರಾಸರಿ ಮಳೆಯ ಪ್ರಮಾಣ 7–8 ಸೆಂ.ಮೀ. ಅಷ್ಟಾಗುತ್ತದೆ. ಆದರೆ, ಸದ್ಯ 1 ಸೆಂ.ಮೀ. ಗಿಂತ ಕಡಿಮೆ ಮಳೆಯಾಗಿದೆ. ಗಾಳಿ ಹೆಚ್ಚಿನ ಪ್ರಮಾಣದಲ್ಲಿ ಬೀಸುತ್ತಿರುವುದರಿಂದ ತೇವಾಂಶ ಕೂಡ ಇಲ್ಲದಂತಾಗಿದೆ. ಈ ವಾರದೊಳಗೆ ಮಳೆಯಾಗದಿದ್ದರೆ ಬಿತ್ತನೆ ಮಾಡಿದವರಿಗೆ ಸಂಕಷ್ಟ ಎದುರಿಸಬೇಕಾಗಬಹುದು.
‘ಈ ಸಲ ಉತ್ತಮ ಮುಂಗಾರು ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದರಿಂದ ಹತ್ತು ಎಕರೆಯಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದೆ. ಇನ್ನೇನು ತಿಂಗಳಾಗುತ್ತ ಬಂತು. ಮಳೆಯ ಸೂಚನೆ ಇಲ್ಲ. ಇದೇ ಪರಿಸ್ಥಿತಿ ಇದ್ದರೆ ಎಲ್ಲ ಹಾಳಾಗುವ ಆತಂಕ ಕಾಡುತ್ತಿದೆ. ಪ್ರತಿ ವರ್ಷ ಅತಿವೃಷ್ಟಿ, ಅನಾವೃಷ್ಟಿಯಿಂದ ಒಂದಿಲ್ಲೊಂದು ಸಮಸ್ಯೆ ಎದುರಾಗುತ್ತಿದೆ. ರೈತಾಪಿ ಮಾಡುವುದೇ ಕಷ್ಟವಾಗಿದೆ’ ಎನ್ನುತ್ತಾರೆ ಹಡಗಲಿಯ ರೈತ ಸೋಮೇಶ್ವರ್.
ಬಿತ್ತನೆ ತಡವಾದರೆ ಇಳುವರಿ ಕುಸಿತ: ಈಗಾಗಲೇ ಬಿತ್ತನೆ ಮಾಡಿದವರು ಹಾಗೂ ಬಿತ್ತನೆಗೆ ಎದುರುನೋಡುತ್ತಿರುವವರು ಮಳೆಯ ನಿರೀಕ್ಷೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಬಿತ್ತನೆ ಮಾಡಿದವರಿಗೆ ಹೂಡಿಕೆ ಮಾಡಿರುವ ಬಂಡವಾಳದ ಚಿಂತೆಯಾದರೆ, ಬಿತ್ತನೆ ಮಾಡುವುದು ತಡವಾದರೆ ಇಳುವರಿ ಕುಸಿಯಬಹುದು ಎಂಬ ಆತಂಕ ಇನ್ನೊಂದು ವರ್ಗದ ರೈತರ ಚಿಂತೆಗೆ ಕಾರಣ.
‘ಬರುವ ದಿನಗಳಲ್ಲಿ ಇನ್ನೂ ಸಾಕಷ್ಟು ದೊಡ್ಡ ಮಳೆಗಳು ಬರಲಿವೆ. ರೈತರು ಆತ್ಮಸ್ಥೈರ್ಯ ಕಳೆದುಕೊಳ್ಳಬೇಕಿಲ್ಲ. ಇನ್ನೊಂದು ವಾರದೊಳಗೆ ಮಳೆಯಾದರೆ ಮುಸುಕಿನ ಜೋಳ, ಶೇಂಗಾ, ನವಣೆ ಬಿತ್ತನೆ ಮಾಡುವುದು ಉತ್ತಮ. ಬಿತ್ತನೆಗೆ ವಿಳಂಬವಾದರೆ ಸಹಜವಾಗಿಯೇ ಇಳುವರಿ ಕಡಿಮೆಯಾಗುತ್ತದೆ. ಮಳೆಯಾಗಲಿ, ಆಗದೆಯೇ ಇರಲಿ ಎಲ್ಲ ರೈತರು ಕಡ್ಡಾಯವಾಗಿ ಬೆಳೆ ವಿಮೆ ಮಾಡಿಸಿಕೊಳ್ಳಬೇಕು. ಬೆಳೆ ಕೈಕೊಟ್ಟರೆ ಪರಿಹಾರ ಪಡೆಯಬಹುದು’ ಎಂದು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದಗಲ್ ಹೇಳಿದರು.
ಜಿಲ್ಲೆಯಲ್ಲಿ ಯಾವ ಬೆಳೆ ಎಷ್ಟು ಬಿತ್ತನೆ (ಹೆಕ್ಟೇರ್ಗಳಲ್ಲಿ)
42.8 | ಮುಸುಕಿನ ಜೋಳ |
50.5 | ಹೈಬ್ರಿಡ್ ಜೋಳ |
23.5 | ಸಜ್ಜೆ |
30.8 | ತೊಗರಿ |
44 | ಹೆಸರು |
ವಿಜಯನಗರ ಜಿಲ್ಲೆ ನೀರಾವರಿ, ಮಳೆಯಾಶ್ರಿತ ಪ್ರದೇಶದ ವಿವರ
81805 ಹೆಕ್ಟೇರ್ | ನೀರಾವರಿ ಪ್ರದೇಶ |
250989 ಹೆಕ್ಟೇರ್ | ಮಳೆಯಾಶ್ರಿತ ಪ್ರದೇಶ |
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.