ಹೊಸಪೇಟೆ (ವಿಜಯನಗರ): ‘ಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ 100 ಕ್ಷೇತ್ರಗಳಲ್ಲಿ ಸ್ಪರ್ಧಿಸುವುದರ ಬಗ್ಗೆ ಗಂಭೀರ ಚಿಂತನೆ ನಡೆದಿದೆ. ಅದಕ್ಕಾಗಿ ವೇದಿಕೆ ರಚಿಸಲಾಗುವುದು’ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ರೈತರ ಶ್ರೇಯೋಭಿವೃದ್ಧಿಗೆ ರಚಿಸಲಾಗಿದೆ. ಅದರ ಹೆಸರಲ್ಲಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಬದಲಾಗಿ ಹೊಸ ವೇದಿಕೆ ರಚಿಸಲಾಗುವುದು. ನ. 19ರಂದು ಮಂಡ್ಯದಲ್ಲಿ ಈ ಸಂಬಂಧ ಸಭೆ ನಡೆಯಲಿದ್ದು, ಅಲ್ಲಿ ಅಂತಿಮ ತೀರ್ಮಾನಕ್ಕೆ ಬರಲಾಗುವುದು ಎಂದು ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.
ನೆಲ, ಜಲ, ಪ್ರಾದೇಶಿಕ ಅಸ್ಮಿತೆ, ಜನಪರ ರಾಜಕಾರಣಕ್ಕಾಗಿ ರೈತರು, ದಲಿತರು, ಜನಪರ ಚಳವಳಿಯಲ್ಲಿ ತೊಡಗಿಸಿಕೊಂಡವರನ್ನು ಸೇರಿಸಿಕೊಂಡು ಹೊಸ ವೇದಿಕೆ ರಚಿಸಲಾಗುವುದು. ಐ.ಟಿ., ಬಿ.ಟಿ., ಕೃಷಿ ಸೇರಿದಂತೆ ಇತರೆ ವಲಯಗಳಲ್ಲಿ ಅನೇಕರು ಜನಪರ ಧೋರಣೆ ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. ಸಮಾಜದ ಬಗ್ಗೆ ಕಾಳಜಿ ಹೊಂದಿದವರನ್ನು ಗುರುತಿಸಿ ಚುನಾವಣೆಗೆ ನಿಲ್ಲಿಸಲಾಗುವುದು ಎಂದರು.
ಮಹಾತ್ಮ ಗಾಂಧೀಜಿ ಅವರ ಹೋರಾಟವನ್ನು ಬ್ರಿಟಿಷರು ಕೂಡ ಗೌರವಿಸುತ್ತಿದ್ದರು. ಅದಕ್ಕೆ ಬೆಲೆ ಕೊಡುತ್ತಿದ್ದರು. ಆದರೆ, ಈಗಿನ ಕೇಂದ್ರ, ರಾಜ್ಯ ಸರ್ಕಾರಗಳು ಹೋರಾಟಗಳನ್ನು ಗೌರವಿಸುತ್ತಿಲ್ಲ. ಕೃಷಿಕರು, ಹಿಂದುಳಿದವರ ಸಮಸ್ಯೆ ಬಗೆಹರಿಸಲು ಮುಂದಾಗುತ್ತಿಲ್ಲ. ಇದನ್ನೆಲ್ಲ ಗಮನಿಸಿಯೇ ಜನರ ಸಮಸ್ಯೆ ಬಗ್ಗೆ ಧ್ವನಿ ಎತ್ತುವವರನ್ನು ಜನರ ಪ್ರತಿನಿಧಿಗಳಾಗಿ ಕಳಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
‘ರಾಜ್ಯ, ಕೇಂದ್ರ ಸರ್ಕಾರಗಳು ಕೃಷಿ ಕ್ಷೇತ್ರವನ್ನು ಸಂಪೂರ್ಣವಾಗಿ ನಿರ್ನಾಮ ಮಾಡಲು ಹೊರಟಿವೆ. ಕೃಷಿ ಕ್ಷೇತ್ರವನ್ನು ಕಾರ್ಪೊರೇಟ್ನವರಿಂದ ಉಳಿಸಲು ಬಹುದೊಡ್ಡ ಸವಾಲು ನಮ್ಮೆದುರಿಗಿದೆ. ಅದರ ವಿರುದ್ಧ ಜನವರಿಯಲ್ಲಿ ದೊಡ್ಡಮಟ್ಟದ ಹೋರಾಟ ಸಂಘಟಿಸಲಾಗುವುದು’ ಎಂದು ರೈತ ಸಂಘದ ರಾಜ್ಯ ಘಟಕದ ಗೌರವ ಅಧ್ಯಕ್ಷ ಚಾಮರಾಸ ಮಾಲಿಪಾಟೀಲ ತಿಳಿಸಿದರು.
ರೈತ ಸಂಘದ ಕಾರ್ಯಾಧ್ಯಕ್ಷ ಜೆ.ಎಂ. ವೀರಸಂಗಯ್ಯ, ಜಿಲ್ಲಾಧ್ಯಕ್ಷ ಗೋಣಿಬಸಪ್ಪ, ಮುಖಂಡ ರವಿಕುಮಾರ ಪೂಣಚ್ಚ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.